ಒಂದು ರಾಜ್ಯ ಹಲವು ಜಗತ್ತು ಎಂದೇ ಬಿಂಬಿತವಾಗಿರುವ ಕರ್ನಾಟಕದ ಪ್ರವಾಸೋದ್ಯಮವನ್ನು ಸ್ಮಾರಕ- ಪರಂಪರೆ, ಪ್ರಾಕೃತಿಕ, ವನ್ಯ ಜೀವಿ, ಸಾಹಸ, ಪುಣ್ಯ ಕ್ಷೇತ್ರಗಳು ಎಂದು ವರ್ಗಿಕರಿಸಲಾಗುತ್ತದೆ.
ಸ್ಮಾರಕ- ಪರಂಪರೆಪಟ್ಟಿಯಲ್ಲಿ ಹಂಪಿ, ಪಟ್ಟದಕಲ್ಲು, ಬಾದಾಮಿ, ಐಹೊಳೆ, ಗೋಲಗುಂಬಜ್,ಚಿತ್ರದುರ್ಗ, ಬನವಾಸಿ, ಬರ್ಕೂರು, ಹಲಸಿ,ಬೇಲೂರು- ಹಳೆಬೀಡು,ಸೋಮನಾಥಪುರ, ಶ್ರೀರಂಗಪಟ್ಟಣ ಮುಂತಾದವುಗಳು ಪ್ರಮುಖ ಸ್ಥಾನವನ್ನು ಅಲಂಕರಿಸಿವೆ.
ಪ್ರಾಕೃತಿಕ ಸೌಂದರ್ಯ ಸೂಸುವಲ್ಲಿ ವಿಶ್ವ ವಿಖ್ಯಾತ ಜೋಗ ಜಲಪಾತ, ಗೋಕಾಕ್ ಜಲಪಾತ, ಕೊಡಗಿನ ಇರ್ಪು, ಅಬ್ಬೆ, ಚಿಕ್ಲಿ ಜಪಲಾತಗಳು, ಕೊಡಾಚಾದ್ರಿ ಬೆಟ್ಟಗಳು, ಆಗುಂಬೆ, ನಂದಿ ಬೆಟ್ಟ, ಕುದುರೆಮುಖ, ಮುಳ್ಳಯ್ಯನಗಿರಿ, ದತ್ತಪೀಠ(ಬಾಬಾ ಬುಡನ್ಗಿರಿ), ಕೆಮ್ಮನಗುಂಡಿ, ಶಿವನಸಮುದ್ರ ಮುಂತಾದವುಗಳು ಪ್ರಕೃತಿ ಪ್ರಿಯ ಪ್ರವಾಸಿಗರು ಮತ್ತು ಚಾರಣಿಗರನ್ನು ಆಕರ್ಷಿಸುತ್ತಿವೆ.
25 ಪಕ್ಷಿಧಾಮಗಳು ಮತ್ತು 5ರಾಷ್ಟ್ರೀಯ ಉದ್ಯಾನವನಗಳಿವೆ. ಇವುಗಳಲ್ಲಿ ದಾಂಡೇಲಿ,ಬಂಡೀಪುರ, ಬನ್ನೇರುಘಟ್ಟ, ದುಬಾರೆ ರಕ್ಷಿತಾರಣ್ಯ, ರಂಗನತಿಟ್ಟು ಪಕ್ಷಿಧಾಮ, ಆದಿಚುಂಚನಗಿರಿ ಪಕ್ಷಿಧಾಮ, ಭದ್ರಾ ವನ್ಯಜೀವಿ ಅಭಯಾರಣ್ಯ,ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಪ್ರಮುಖವಾಗಿವೆ.
ಸಾಹಸ ಕ್ರೀಡೆಗಳಿಗೆ ದಾಂಡೇಲಿ, ನಂದಿ ಬೆಟ್ಟ, ಕುಮಾರ ಪರ್ವತ, ಮುಳ್ಳಯ್ಯನಗಿರಿ, ಸ್ಕಂದಗಿರಿ, ಶಿವಗಂಗಾ ಬೆಟ್ಟ, ದೇವರಾಯನದುರ್ಗ,ಕೆಮ್ಮನಗುಂಡಿ, ಯಾಣ, ಕಬಿನಿ, ಶರಾವತಿ ಭೀಮೇಶ್ವರಿ ಪ್ರಖ್ಯಾತವಾಗಿವೆ. ಪುಣ್ಯ ಕ್ಷೇತ್ರಗಳಲ್ಲಿ ಗೋಕರ್ಣ, ಮುರುಡೇಶ್ವರ, ಉಡುಪಿ,ಧರ್ಮಸ್ಥಳ, ಶೃಂಗೇರಿ, ಕೊಲ್ಲೂರು, ಕುಕ್ಕೆ ಸುಬ್ರಹ್ಮಣ್ಯ,ಮೇಲುಕೋಟೆ, ಹೊರನಾಡು, ಘಾಟಿ ಸುಬ್ರಮಣ್ಯ, ಕೋಟಿಲಿಂಗೇಶ್ವರ, ಶ್ರವಣಬೆಳಗೋಳ, ಕಾರ್ಕಳ, ವೇಣೂರು, ಗೊಮ್ಮಟಗಿರಿ, ಬಂದೇ ನವಾಜ್ ದರ್ಗಾ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ಥಳಗಳಾಗಿವೆ.
ರಾಜ್ಯದಲ್ಲಿ 319 ಪ್ರಮುಖ ಪ್ರವಾಸಿತಾಣಗಳಿದ್ದು, ಇದು ಭಾರತದಲ್ಲೇ ಅತ್ಯಧಿಕ ಸಂಖ್ಯೆಯಾಗಿದೆ. ದೇಶದಲ್ಲಿ ರಾಜ್ಯವು ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದು ಭಾರತದಲ್ಲೇ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ರಾಜ್ಯ ಕರ್ನಾಟಕ.
ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ಸರ್ಕಾರವು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ ಮಯೂರ ಹೋಟೆಲ್ಗಳು ರಾಜ್ಯ ಮತ್ತು ಹೊರ ರಾಜ್ಯದಲ್ಲಿ ಪ್ರವಾಸಿಗರಿಗೆ ವಸತಿ ಮತ್ತು ಊಟದ ಸೌಲಭ್ಯವನ್ನು ನೀಡುತ್ತಿವೆ. ಜೊತೆಗೆ ಪ್ಯಾಕೇಜ್ ಪ್ರವಾಸವನ್ನು ಹಮ್ಮಿಕೊಳ್ಳಲಾಗುತ್ತದೆ. ಸರ್ಕಾರವೇ ನಿರ್ವಹಿಸುತ್ತಿರುವ ಜಂಗಲ್ ಲಾಡ್ಜ್ಗಳು ಪ್ರವಾಸಿಗರಿಗೆ ಆತಿಥ್ಯ ನೀಡುತ್ತಿವೆ ಹಾಗೂ ಪ್ರವಾಸೋದ್ಯಮ ಇಲಾಖೆಗೆಯಿಂದ ಮಾನ್ಯತೆ ಪಡೆದ ಹೋಟೆಲ್ಗಳು ಪ್ರತಿ ಪ್ರವಾಸಿತಾಣದಲ್ಲೂ ಲಭ್ಯ.
ಕರ್ನಾಟಕ ಪ್ರವಾಸೋದ್ಯಮ ಜಾಲತಾಣಕ್ಕ್ಕೆ ಭೇಟಿ ನೀಡಿ.