ಭಾಷೆಯ ಇತಿಹಾಸ

ಕರ್ನಾಟಕದಲ್ಲಿ ಬಳಸಲಾಗುವ ಕನ್ನಡ ಭಾಷೆಯನ್ನು ದೇಶದ ಪ್ರಮುಖ ಭಾಷೆಗಳಲ್ಲಿ ಒಂದಾಗಿ ಭಾರತೀಯ ಸಂವಿಧಾನವು ಗುರುತಿಸಿದೆ. ಕರ್ನಾಟಕದ ಬಹುತೇಕ ಜನರಿಗೆ ಕನ್ನಡವು ಮಾತೃಭಾಷೆಯಾಗಿದೆ. ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಗೋವಾ, ಹಾಗೂ ದಮನ್ ಹಾಗೂ ದಿಯುಗಳಲ್ಲಿ ಕನ್ನಡವನ್ನು ಮಾತೃ ಭಾಷೆಯಾಗಿ ಬಳಸುವ ಗಣನೀಯ ಸಂಖ್ಯೆಯ ಜನರಿದ್ದಾರೆ. ಈ ನೆಲದ ಮೇಲೆ ಪ್ರಭಾವ ಬೀರಿದ ಪ್ರಾದೇಶಿಕ ವ್ಯತ್ಯಾಸಗಳಿಗೆ ಅನುಗುಣವಾಗಿ ಭಾಷೆಯು ವಿವಿಧ ರೂಪ ಹಾಗೂ ಶೈಲಿಯ ಉಪಭಾಷೆ ಅಥವಾ ಪ್ರಾಂತೇಯ ಭಾಷೆಗಳನ್ನು ಪಡೆದುಕೊಂಡಿದೆ. ವಿವಿಧ ಪ್ರಾದೇಶಿಕ ಪ್ರಾಂತೀಯ ಭಾಷೆಗಳ  ವ್ಯತ್ಯಾಸಗಳನ್ನು ಹೊಂದಿದ, ದ್ರಾವಿಡ ಗುಂಪಿನ ಭಾಷೆಗಳೆಂದು ಜನಪ್ರಿಯವಾಗಿರುವ ದಕ್ಷಿಣ ಭಾರತದ ಭಾಷೆಗಳ ಗುಂಪಿಗೆ ಕನ್ನಡವು ಸೇರಿದೆ. ಪ್ರಸ್ತುತದಲ್ಲಿ, ಕನಿಷ್ಠ ಮೂರು ಪ್ರಾದೇಶಿಕ ಉಪಭಾಷೆಗಳಾದ, ಮೈಸೂರು ಕನ್ನಡ, ಧಾರವಾಡ-ಕನ್ನಡ ಹಾಗೂ ಮಂಗಳೂರು-ಕನ್ನಡಗಳ ಜನಪ್ರಿಯವಾದ ಭಾಷಾ ಶೈಲಿಗಳನ್ನು, ಕ್ರಮವಾಗಿ ಮೂರು ಸಾಂಸ್ಕೃತಿಕ ಕೇಂದ್ರಗಳಾದ ಮೈಸೂರು, ಧಾರವಾಡ ಹಾಗೂ ಮಂಗಳೂರು ಪ್ರದೇಶಗಳಲ್ಲಿ ಮಾತನಾಡಲಾಗುತ್ತದೆ.  ಈ ಮುಖ್ಯ ವಿಭಾಗಗಳೊಳಗೆ, ಇತರ ಹಲವಾರು ಪ್ರಾಂತೀಯ  ಉಪ-ವಿಭಾಗಗಳಾದ ಹವ್ಯಕ, ಬಡಗ, ನಾಡವ, ಕೂಸ, ಮುಂತಾದವುಗಳಿದ್ದು, ಅವು ಇತರ ಭಾಷಾ ಸ್ವರೂಪಗಳೊಂದಿಗೆ ಬೆರೆತ ಸ್ಥಳೀಯ ಉಪವಿಭಾಗಗಳಾಗಿವೆ.

 

ಅಶೋಕನ ಶಿಲಾಶಾಸನಗಳ ಮೂಲಕ ಭಾರತದೆಲ್ಲೆಡೆ ಆರಂಭಿಕ ಲಿಪಿಯಾಗಿ ಜನಪ್ರಿಯಗೊಂಡು, ಎಲ್ಲ ಆಧುನಿಕ ಭಾರತೀಯ ಭಾಷೆಗಳಿಗೆ ಮೂಲ-ಲಿಪಿಯಾದ ಬ್ರಾಹ್ಮೀ ಲಿಪಿಯಿಂದ ಕನ್ನಡ  ಭಾಷೆಯ ಲಿಖಿತ ಲಿಪಿರೂಪಗಳನ್ನೂ ಪಡೆದುಕೊಳ್ಳಲಾಗಿದೆ. ಕ್ರಿ.ಶ. ೪೫೦ಕ್ಕೆ ಸೇರಿದ ಹಲ್ಮಿಡಿ ಶಾಸನದಲ್ಲಿ ಕನ್ನಡ ಲಿಪಿಯ ಪ್ರಾರಂಭಿಕ ರೂಪವು ದೊರೆತಿದೆ. ಬಾದಾಮಿ ಚಾಲುಕ್ಯರ ಸಂಸ್ಕೃತದ ಅನೇಕ ಶಾಸನಗಳನ್ನು ಈ ಲಿಪಿಯಲ್ಲೆ ಬರೆಯಲಾಗಿದೆ. ಕನ್ನಡ ಲಿಪಿಯು ನಿರಂತರವಾಗಿ ಬದಲಾವಣೆ ಆಗುತ್ತಲೇ ಇದ್ದು ಇಂದಿನ ಕನ್ನಡ ಲಿಪಿಯು, ಸುಮಾರು ೨,೦೦೦ ವರ್ಷಗಳ ಕಾಲಾವಧಿಯಲ್ಲಿ ಇಂತಹ ವಿಕಸನೀಯ  ಬದಲಾವಣೆಗಳಿಂದ ಉಂಟಾದುದು. ಬದಲಾಗದ ಏಕರೂಪ ದೊಂದಿಗೆ ಯಾಂತ್ರಿಕವಾಗಿ ನಕಲಾಗುವ ಅಕ್ಷರ ರೂಪಗಳನ್ನು ನೀಡುವ ಮುದ್ರಣವನ್ನು ಪರಿಚಯಿಸಿದ ಮೇಲೆ, ಪ್ರಸ್ತುತ ಲಿಪಿರೂಪವನ್ನು ಪ್ರಮಾಣೀಕೃತಗೊಳಿಸಲಾಯಿತು.

ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳು ದ್ರಾವಿಡಭಾಷಾ ಗುಂಪಿಗೆ ಸೇರಿರುವುದರಿಂದ, ಎಲ್ಲ ಮೂರು ಭಾಷೆಗಳೂ ಒಂದೇ ರೀತಿಯ ಬಾಹ್ಯ ರಚನೆಯನ್ನು ಹೊಂದಿವೆ. ದ್ರಾವಿಡ ಗುಂಪಿಗೆ ಸೇರಿದ ಉಪಭಾಷೆಯಾಗಿ ಆರಂಭವಾಗಿ, ತನ್ನದೇ ಆದ ಲಿಪಿಯನ್ನು ಹೊಂದಿದ ಸುಸಂಸ್ಕೃತ ಭಾಷೆಯ ಸ್ಥಾನಮಾನಗಳನ್ನು ಪಡೆಯುವ, ವಿವಿಧ ಹಂತಗಳ ಅಭಿವೃದ್ಧಿಯನ್ನು ಅವು ಹಾದು ಬಂದಿದ್ದರೂ, ತಾಂತ್ರಿಕ, ವೈಜ್ಞಾನಿಕ ಹಾಗೂ ತತ್ವಚಿಂತಕ ಶಬ್ದಸಂಪತ್ತು, ಸಂಸ್ಕೃತ ಭಾಷೆಯಿಂದ ಪೋಷಿತವಾಗಿದೆ.  ಭಾಷೆಯ ಪ್ರಾರಂಭಿಕ ರೂಪವನ್ನು ಹಳೆಗನ್ನಡ ಹಾಗೂ ನಂತರದ ನಡುಗನ್ನಡ ಎಂದು ಕರೆಯಲಾಗಿದ್ದು, ಅದು ಹೊಸಗನ್ನಡಕ್ಕೆ ದಾರಿ ಮಾಡಿಕೊಟ್ಟಿತು. ಹಳೆಗನ್ನಡವು ಪ್ರಾಚೀನ ಸಾಹಿತ್ಯವನ್ನು ಪೋಷಿಸಿದ್ದರೆ, ಬಹುಪಾಲು ಜನಪ್ರಿಯ ಸಾಹಿತ್ಯವು ನಡುಗನ್ನಡ ಅಥವಾ ಹೊಸಗನ್ನಡಕ್ಕೆ ಸೇರಿವೆ.

 

ಆಡಳಿತ ಭಾಷೆಯಾಗಿ ಕನ್ನಡ

ಕ್ರಿ.ಶ. ಆರನೆಯ ಶತಮಾನದಿಂದ ಕನ್ನಡದಲ್ಲಿ ಹೊರಡಿಸಿದ ಅನೇಕ ರಾಜಾಜ್ಞೆಗಳನ್ನು ನೋಡಿದಾಗ, ಪ್ರಾಕೃತ ಹಾಗೂ ಕನ್ನಡ ಭಾಷೆಗಳನ್ನು ಪ್ರಾರಂಭಿಕ ಮತ್ತು ನಂತರದ ಕಾಲಗಳಲ್ಲಿ ಕ್ರಮವಾಗಿ ಬಳಸಿದರೂ, ನಂತರ ಬಂದ ಕರ್ನಾಟಕದ ಅರಸರು ಆಡಳಿತ ಉದ್ದೇಶಕ್ಕಾಗಿ ಕನ್ನಡವನ್ನೂ ಬಳಸುತ್ತಿದ್ದರು ಎಂದು ತಿಳಿದು ಬರುತ್ತದೆ. ಕದಂಬರ ಹಲ್ಮಿಡಿ ಶಿಲಾಶಾಸನ ಹಾಗೂ ಚಾಲುಕ್ಯರ ಬಾದಾಮಿ ಗುಹಾ ಶಾಸನೆಗಳು ರಾಜಾನುದಾನಗಳನ್ನು ಘೋಷಿಸುವ ಅತ್ಯಂತ ಪುರಾತನ ಕನ್ನಡ ದಾಖಲೆಗಳಾಗಿವೆ. ಕಲ್ಯಾಣದ ಚಾಳುಕ್ಯರ ಆಳ್ವಿಕೆಯಲ್ಲಿ ಹಾಗೂ ಆನಂತರದ ಹೊಯ್ಸಳ ಹಾಗೂ ಸೇವುಣರ ಆಡಳಿತಾವಧಿಯಲ್ಲೂ, ಆಡಳಿತ ಉದ್ದೇಶಗಳಿಗಾಗಿ ಕನ್ನಡ ಭಾಷೆಯನ್ನು ಬಳಸುವುದು ಹೆಚ್ಚಿತು ಈ ರಾಜಮನೆತನಗಳಿಗೆ ಸೇರಿದ ಬಹುತೇಕ  ಶಾಸನಗಳು ಕನ್ನಡದ ಹಲವಾರು ಆಡಳಿತಾತ್ಮಕ ಪದಗಳನ್ನೂ ಕನ್ನಡ ಹಾಗೂ ಸಂಸ್ಕೃತ ವಾಕ್ಯಭಾಗಗಳನ್ನೂ ಹೊಂದಿವೆ. ಕೆಲವು ಸಂಸ್ಕೃತ ಆದೇಶಗಳಲ್ಲಿ, ಜನಸಾಮಾನ್ಯರು ಸುಲಭವಾಗಿ ಅರ್ಥ ಮಾಡಿಕೊಳ್ಳಲೆಂದು

ಕಾರ್ಯರೂಪಕ ಭಾಗವನ್ನು ಕನ್ನಡದಲ್ಲಿ ಬರೆಯಲಾಗಿದೆ.  ವಿಜಯನಗರ ಅರಸರಿಗೆ ಸೇರಿದ ಅನೇಕ ದಾಖಲೆಗಳು ಕನ್ನಡದಲ್ಲಿವೆ.  ವಿಜಯನಗರ ಸಾಮ್ರಾಜ್ಯದ ಉತ್ತರಾಧಿಕಾರಿಗಳಾದ ಕೆಳದಿಯ ನಾಯಕರು ಹಾಗೂ ಮೈಸೂರಿನ ಒಡೆಯರೂ ಕೂಡ, ರಾಜ್ಯದ ಏಕೈಕ ಆಡಳಿತ ಭಾಷೆಯಾಗಿ ಕನ್ನಡವನ್ನು ಬಳಸಿದರು.  ಬಿಜಾಪುರದ ಅರಸರು, ಶಾಹಜಿ, ಏಕೋಜಿ ಹಾಗೂ ಶಿವಾಜಿಯ ಶಾಸನ ಹಾಗೂ ರಾಜಾಜ್ಞೆಗಳು ಕನ್ನಡದಲ್ಲಿವೆ. ಆಡಳಿತ ಹಾಗೂ ಸಾಮಾನ್ಯ ಉದ್ದೇಶಗಳೆರಡಕ್ಕೂ ಬ್ರಿಟಿಷರು ಕೊಡಗಿನ ಅರಸರು ಹಾಗೂ ಮೈಸೂರು ಒಡೆಯರು ಕನ್ನಡವನ್ನು ವಿಸ್ತೃತವಾಗಿ ಬಳಸಿದರು. ಪ್ರಸ್ತುತದಲ್ಲಿ, ಕರ್ನಾಟಕ ಸರ್ಕಾರವು ಕನ್ನಡವನ್ನು ಅಧಿಕೃತ ಆಡಳಿತ ಭಾಷೆಯಾಗಿ ಮಾಡಿದ್ದು ಭಾಷೆಯನ್ನು ಉತ್ತೇಜಿಸಲು ಹಾಗೂ ರಾಜ್ಯ ವ್ಯವಸ್ಥೆಯ ಎಲ್ಲ ಸ್ಥರಗಳಲ್ಲೂ ಅದರ ಬಳಕೆಯನ್ನು ಅನುಷ್ಠಾನಕ್ಕೆ ತರಲು ಹಾಗೂ ಭಾಷೆಯನ್ನು ಬಳಸಲು ಹಲವಾರು ಯೋಜನೆ ಹಾಗೂ ಕ್ರಮಗಳನ್ನು ಅನುಷ್ಠಾನ ಮಾಡಿದೆ.  ಹಾಗಾಗಿ ಕನ್ನಡ ಭಾಷೆಗೆ ಸರ್ಕಾರ ಹಾಗೂ ಜನಸಾಮಾನ್ಯರಿಂದಲೂ ಒತ್ತಾಸೆ ದೊರಕಿದೆ.

 

ಕನ್ನಡ ಸಾಹಿತ್ಯದ ಪ್ರಾಚೀನತೆ

ಕ್ರಿ.ಶ. ೮ - ೯ನೆಯ ಶತಮಾನಕ್ಕೆ ಮೊದಲು, ಸಾಹಿತ್ಯಕ ಸಾಕ್ಷಿಗಳು ಇಲ್ಲದಿರುವುದರಿಂದ, ಕನ್ನಡ ಸಾಹಿತ್ಯದ ಪ್ರಾರಂಭವು ಅಸ್ಪಷ್ಟತೆಯಲ್ಲಿ ಮುಚ್ಚಿಹೋಗಿದೆ. ಏಕೆಂದರೆ, ಕೆಲವೇ ಕೆಲವು ಶಾಸನ  ಪುರಾವೆಗಳು ಲಭ್ಯವಿದ್ದು, ಇತಿಹಾಸದ ಪ್ರಾರಂಭಿಕ ಹಂತಗಳಿಗೆ ಸೇರಿದ ಬಹುತೇಕ ಶಾಸನಗಳನ್ನು ಬ್ರಾಹ್ಮಿಲಿಪಿ ಹಾಗೂ ಪ್ರಾಕೃತ ಭಾಷೆಯಲ್ಲಿ ಬರೆಯಲಾಗಿದೆ.  ಅವುಗಳಲ್ಲಿ ಬಹುಪಾಲು, ವೀರರಿಗೆ ಗೌರವ ಸಲ್ಲಿಸುವ ಕಿರು ಸ್ಮಾರಕ ದಾಖಲೆಗಳಾಗಿವೆ.

 

 

ಹಲ್ಮಿಡಿ ಶಾಸನ

ಹಲ್ಮಿಡಿ ಶಾಸನವು (ಹಾಸನ ಜಿಲ್ಲೆ, ಬೇಲೂರು ತಾಲೂಕು) ಸುಮಾರು ಕ್ರಿ.ಶ. ೪೫೦ಕ್ಕೆ ಸೇರಿದ ಪ್ರಾಚೀನ ಕನ್ನಡ ಶಾಸನ.  ಗದ್ಯ ರೂಪದಲ್ಲಿರುವ ಈ ಶಾಸನವು, ಪ್ರಬುದ್ಧ ಅಭಿವ್ಯಕ್ತತೆಯಿಂದ ಕೂಡಿದೆ. ಹಾಗಾಗಿ ಈ ಅವಧಿಯ ವೇಳೆಗೆ, ಕನ್ನಡವು ಸಾಹಿತ್ಯಕ ಭಾಷೆಯಾಗಿ ಅಭಿವೃದ್ಧಿ ಹೊಂದಿತ್ತೆಂದು ಅನೇಕ ವಿದ್ವಾಂಸರು ನಂಬಿದ್ದಾರೆ. ಭಾಷೆ ಹಾಗೂ ಸಾಹಿತ್ಯದ ಪ್ರಾರಂಭಿಕ ಹಂತಗಳು ಹಾಗೂ ಕನ್ನಡದ ಮೇಲೆ ಅದಾಗಲೇ ಸ್ಥಾಪಿತವಾಗಿದ್ದ ಸಂಸ್ಕೃತದ ಪ್ರಭಾವದ ಮೇಲೆ ಇದು ಬೆಳಕು ಚೆಲ್ಲುತ್ತದೆ. ಅಷ್ಟೇ ಅಲ್ಲ, ಶಾಸನದ ಮಂಗಳ (ಪ್ರಾರ್ಥನಾ) ಶ್ಲೋಕವೂ ಸಂಸ್ಕೃತದಲ್ಲಿದೆ.

ಕ್ರಿ.ಶ. ಐದನೆಯ ಶತಮಾನಕ್ಕೆ ಸೇರಿದ ಅಣಜಿ (ದಾವಣಗೆರೆ ಜಿಲ್ಲೆ) ಶಾಸನದಲ್ಲಿ, ಕನ್ನಡದ ಛಂದೋಬದ್ಧ ಪದ್ಯಸಾಲನ್ನು ಹೊಂದಿರುವ ಬಹುಶಃ ಕನ್ನಡ ಪದ್ಯದ ಪ್ರಥಮ ನಿದರ್ಶನವಾಗಿದೆ. ಕ್ರಿ.ಶ. ಏಳನೆಯ ಶತಮಾನಕ್ಕೆ ಸೇರಿದ ಬಾದಾಮಿಯ ಕಪ್ಪೆ ಅರಭಟ್ಟ ಶಾಸನವು ತ್ರಿಪದಿ ಶೈಲಿಯಲ್ಲಿದೆ. ಅಂದರೆ ಕನ್ನಡದಲ್ಲಿ ಮೂರು-ಸಾಲಿನ ಪದ್ಯ, ಅದೇ ಕಾಲಕ್ಕೆ ಸೇರಿದ ವೃತ್ತ ಛಂದಸ್ಸಿನಲ್ಲಿ ಬರೆದಿರುವ  ಶ್ರವಣಬೆಳಗೊಳದ ಶಾಸನವೊಂದರಲ್ಲಿ ನಯಸೇನನೆಂಬ ಜೈನ ಗುರುವನ್ನು ಹೊಗಳುವ ಪದ್ಯವಿದೆ.  ಈ ಎಲ್ಲವೂ, ಸುಮಾರು ಕ್ರಿ.ಶ.೫ - ೬ನೆಯ ಶತಮಾನದಿಂದಲೇ ಕನ್ನಡವು ಸಾಹಿತ್ಯದಲ್ಲಿ ಬಳಸುವ ಸುಸಂಸ್ಕೃತ ಭಾಷೆಯಾಗಿ ಬೆಳೆಯಲು ಪ್ರಾರಂಭವಾಗಿತ್ತೆಂದು ಸೂಚಿಸುತ್ತದೆ.

 

ಪ್ರಾರಂಭಿಕ ಸಾಹಿತ್ಯ ಕೃತಿಗಳು

ರಾಷ್ಟ್ರಕೂಟ ರಾಜನಾದ ನೃಪತುಂಗನ (ಕ್ರಿ.ಶ. ೮೦೮ - ೮೮೦) ಆಸ್ಥಾನ ಕವಿಯಾದ ಶ್ರೀವಿಜಯನು ಬರೆದ ಅಥವಾ ಸಂಪಾದಿಸಿರುವ ಕವಿರಾಜಮಾರ್ಗವು, ಕನ್ನಡ ಸಾಹಿತ್ಯದಲ್ಲಿ ಲಭ್ಯವಿರುವ ಪ್ರಥಮ ಕೃತಿ. ಈ ಕೃತಿಯು ಕಾವ್ಯಗಳ ಬಗೆಗಿದ್ದು, ಸುಮಾರು ಕ್ರಿ.ಶ.೬-೭ ಶತಮಾನಕ್ಕೆ ಸೇರಿದ ದಂಡಿಯ ಸಂಸ್ಕೃತ ಕೃತಿ ಕಾವ್ಯದರ್ಶದ, ಮುಕ್ತ ವ್ಯಾಖ್ಯಾನ ಅಥವಾ ಅರ್ಥಕಲ್ಪನೆಯಾಗಿದೆ.  ಪ್ರಸ್ತುತ, ಕವಿ ಶ್ರೀವಿಜಯನು ತನ್ನ ಆಶ್ರಯದಾತನಾದ ನೃಪತುಂಗನಿಗಾಗಿ ಬರೆದ ಕೃತಿಯೆಂಬುದನ್ನು ಅನೇಕ ವಿದ್ಯಾಂಸರು ಸಮ್ಮತಿಸಿದ್ದಾರೆ. ಈ ಪ್ರಾರಂಭಿಕ ಸಾಹಿತ್ಯ ಕೃತಿಯು ಕಾವ್ಯವನ್ನು ಕುರಿತಾಗಿರುವುದನ್ನು ಕಂಡಾಗ, ಆತನ ಕಾಲಕ್ಕೆ ಮುನ್ನ ಜಾರಿಯಲ್ಲಿದ್ದ ಸಿರಿವಂತ ಸಾಹಿತ್ಯಕ ಸಂಪ್ರದಾಯವನ್ನು ಸೂಚಿಸುತ್ತದೆ. ಅಷ್ಟೇ ಅಲ್ಲ, ಕನ್ನಡದಲ್ಲಿ ಗದ್ಯ ಹಾಗೂ ಪದ್ಯಗಳನ್ನು ಬರೆದ ಗಂಗ ರಾಜನಾದ ದುರ್ವಿನೀತ, ನಾಗಾರ್ಜುನರಂತಹ ಅನೇಕ ಕವಿವರರ ಹೆಸರುಗಳನ್ನು ಕವಿರಾಜಮಾರ್ಗ ಹೆಸರಿಸಿದೆ.

ಕೆಲವು ವಿದ್ವಾಂಸರ ಪ್ರಕಾರ, ಈ ಅವಧಿಯ ವಡ್ಡಾರಾಧನೆ ಎಂಬ ಜೈನ ಕೃತಿಯನ್ನು ಕಥನರೂಪದ ಗದ್ಯಶೈಲಿ ಯಲ್ಲಿ ಬರೆಯಲಾಗಿದೆ. ಅಲ್ಲದೆ ತತ್ವಚಿಂತನೆಯನ್ನು ಕುರಿತಾದ ತಂಬಲಾಚಾರ್ಯರ ‘ಚೂಡಾಮಣಿ’ ಎಂಬ ಬೃಹತ್ ಕೃತಿಯನ್ನು ಕನ್ನಡದಲ್ಲಿ ಬರೆಯಲಾಗಿತ್ತೆಂದು ನಂಬಲಾಗಿದೆ.

ಕ್ರಿ.ಶ. ೧೦ನೆಯ ಶತಮಾನದಿಂದ, ಭಾಷೆ ಹಾಗೂ ಸಾಹಿತ್ಯಗಳೆರಡರ ವಿವಿಧ ಸಾಹಿತ್ಯ ಸ್ವರೂಪಗಳನ್ನೂ ನಿರಂತರ ಅಭಿವೃದ್ಧಿಯನ್ನೂ ಕನ್ನಡ ಭಾಷೆಯು ಕಂಡಿತು. ನಂತರದ ಕಾಲದಲ್ಲಿ ಕರ್ನಾಟಕದ ಇತಿಹಾಸವನ್ನು ಕಾಲಾನುಕ್ರಮದಲ್ಲಿ ವ್ಯಾಪಿಸಿಕೊಂಡ ಧರ್ಮಗಳನ್ನು ಆಧರಿಸಿದ ಜೈನ, ವೀರಶೈವ ಹಾಗೂ ವೈಷ್ಣವ ಯುಗಗಳಾಗಿ (ಅವಧಿಗಳು) ಕನ್ನಡ ಸಾಹಿತ್ಯದ ಬೆಳವಣಿಗೆಯ ಮೂರು ಹಂತಗಳೆಂದು ಕೆಲವು ವಿದ್ವಾಂಸರು ಗುರುತಿಸಿದ್ದಾರೆ. ಮತ್ತೊಂದು ಶೈಲಿಯು, ವೀರೋಚಿತ ಹಾಗೂ ಮಹಾಕಾವ್ಯದ ಯುಗ, ಧಾರ್ಮಿಕ ಪ್ರಚಾರದ ಯುಗ, ದಂಗೆಯ ಯುಗ, ವೈಭವದ ಯುಗ ಹಾಗೂ ಪುನರುತ್ಥಾನದ ಯುಗವೆಂದು ಗುರುತಿಸಿದೆ.

 

ವೀರೋಚಿತ ಹಾಗೂ ಮಹಾಕಾವ್ಯದ ಯುಗ

ಕ್ರಿ.ಶ. ೬ - ೧೧ನೆಯ ಶತಮಾನದ ನಡುವಣ ಅವಧಿಯನ್ನು, ಚಾಲುಕ್ಯರು, ಪಲ್ಲವರು, ರಾಷ್ಟ್ರಕೂಟರು, ಗಂಗರು ಹಾಗೂ ಚೋಳರಂತಹ ರಾಜಮನೆತನಗಳು ಒಬ್ಬರ ಮೇಲೊಬ್ಬರು ಸಾರ್ವಭೌಮತ್ವವನ್ನು ಸ್ಥಾಪಿಸಲು ಪ್ರಯತ್ನಿಸಿದ ಹೋರಾಟವನ್ನು ಯುದ್ಧ ಯುಗ ಎಂದು ಪರಿಗಣಿಸಲಾಗಿದೆ. ವೀರತ್ವವು ಒಂದು ಮಹಾನ್ ಸದುಣ ಅಂಗೀಕೃತವಾಗಿ ಈ ಅವಧಿಯ ಸಾಹಿತ್ಯದಲ್ಲಿ ಪ್ರತಿಬಿಂಬಿತವಾಗಿದೆ. ವೀರೋಚಿತ ಯುಗದ ನಂತರ ಕ್ರಿ.ಶ. ೯೦೦ – ೧೨೦೦ರ ನಡುವೆ ಬಂದ ಮಹಾಕಾವ್ಯದ ಯುಗದಲ್ಲಿ, ಕನ್ನಡ ಭಾಷೆಯನ್ನು ಸಂಸ್ಕೃತೀಕರಣಗೊಳಿಸುವ ಯತ್ನಗಳಲ್ಲಿ ಸಂಸ್ಕೃತ ಭಾಷೆಯ ಸಿರಿವಂತ ಪದಗುಚ್ಛ, ಲಯ,ವಾಕ್ಯರಚನೆ  ಹಾಗೂ ಛಂದಶ್ಯಾಸ್ತ್ರ ಗಳೊಂದಿಗೆ ಅದನ್ನು ಬಲವರ್ಧನೆಗೊಳಿಸಲಾಯಿತು. ಇದು ಭಾಷೆಗೆ ಸುರಕ್ಷಿತ ಸಾಹಿತ್ಯಕ ತಳಹದಿಯನ್ನು ನೀಡಿ, ಅದು ಕ್ರಿ.ಶ. ೧೨ನೆಯ ಶತಮಾನದವರೆಗೂ ಮುಂದುವರಿಯಿತು. ಈ ಯತ್ನಗಳಿಂದ ಗದ್ಯ ಹಾಗೂ ಪದ್ಯಗಳ ಮಿಶ್ರಣವಾದ ಚಂಪೂ ಶೈಲಿಯ ಬರವಣಿಗೆಯು ಹೊರಹೊಮ್ಮಿತು. ಈ ಅವಧಿಯಲ್ಲಿ ಚಂಪೂ ಶೈಲಿಯಲ್ಲಿ ಬರೆಯಲಾದ ಮಹಾಕಾವ್ಯಗಳು ಬಹಳ ಜನಪ್ರಿಯಗೊಂಡು ಬಹಳ ಕಾಲದವರೆಗೂ ಅಭಿವೃದ್ಧಿ ಹೊಂದಿತು.ಈ ಮಹಾಕಾವ್ಯಗಳಿಗೆ ವಸ್ತು ವಿಷಯವು, ಭಾರತದ ಮಹಾನ್ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ, ಜೈನ ತೀರ್ಥಂಕರರ ಜೀವನಚರಿತ್ರೆ ಹಾಗೂ ಆ ಅವಧಿಂಯ ಪುರಾಣ ಕಥೆಗಳಿಂದ ಪಡೆಯಲಾಯಿತು. ತಮ್ಮ ಕೃತಿಗಳಲ್ಲಿ ಛಂದಸ್ಸಿನ ಶೈಲಿಯನ್ನು ಬಳಸುವ ಮೂಲಕ, ಪಂಪ, ರನ್ನ, ನಾಗಚಂದ್ರ, ಗುಣವರ್ಮರಂತಹ ಕವಿಗಳು ಈ ಅವಧಿಯಲ್ಲಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.

ಜಾತ್ಯಾತೀತ ಹಾಗೂ ಧಾರ್ಮಿಕ ಮಹಾಕಾವ್ಯಗಳೆರಡನ್ನೂ ಬರೆದ ಕನ್ನಡ ಕವಿಗಳ ಪೈಕಿ, ಅತ್ಯಂತ ಮೊದಲಿಗ ಹಾಗೂ ಮಹಾನ್ ಕವಿಯೆಂದು ಪಂಪನನ್ನು (ಕ್ರಿ.ಶ. ೯೪೧) ಪರಿಗಣಿಸಲಾಗಿದೆ.  ಆತನ ಕೃತಿ ‘ವಿಕ್ರಮಾರ್ಜುನ ವಿಜಯ’ವು ಮಹಾಭಾರತದ ನಿರ್ದಿಷ್ಟ ಶೈಲಿಂಯ ಕಥನವಾಗಿದ್ದು, ಅದರಲ್ಲಿ ಅರ್ಜುನನನ್ನು ಮಹಾಕಾವ್ಯದ ವೀರನನ್ನಾಗಿ ವೈಭವೀಕರಿಸಿರಲಾಗಿದೆ. ಆತನ ಆಶ್ರಯದಾತನಾದ ವೇಮುಲವಾಡದ ರಾಜ ಅರಿಕೇಸರಿಯನ್ನು, ಅರ್ಜುನನ ವ್ಯಕ್ತಿತ್ವಕ್ಕೆ ಸೂಕ್ತವಾದ ಸಾಂಕೇತಿಕ ನಿರೂಪಣೆಯನ್ನು ಬಳಸುವ ಮೂಲಕ, ವೈಭವೀಕರಿಸಿದ್ದಾನೆ. ಅರ್ಜುನ ಹಾಗೂ ಅರಿಕೇಸರಿಯರನ್ನು ಸಮೀಕರಿಸುವ ಮೂಲಕ, ಮಹಾಕಾವ್ಯವನ್ನು ಸಮಕಾಲೀನ ಇತಿಹಾಸದೊಂದಿಗೆ ವಿನೂತನ ರೀತಿಯಲ್ಲಿ ಒಟ್ಟುಗೂಡಿಸಲು ಆತನು ಪ್ರಯತ್ನಿಸಿ ಈ ಉದ್ದೇಶವನ್ನು ತನ್ನ ಕೃತಿಯಲ್ಲೂ ಅಭಿವ್ಯಕ್ತಪಡಿಸಿದ್ದಾನೆ. ಜೈನ ಸಂಪ್ರದಾಯದ ಮೊದಲ ತೀರ್ಥಂಕರರ ಜೀವನವನ್ನು ಕುರಿತಾದ

ಧಾರ್ಮಿಕ ಮಹಾಕಾವ್ಯವಾದ ‘ಆದಿಪುರಾಣ’ವನ್ನೂ ಪಂಪನು ಬರೆದನು. ಜೈನ ಮತದ ಧಾರ್ಮಿಕ ಹಾಗೂ ತತ್ವಚಿಂತನೆಯ ಸಿದ್ಧಾಂತಗಳಿಗೆ ಅನುಗುಣವಾಗಿ, ಕೃತಿಯು ಶಾಂತರಸದ (ಶಾಂತಿ) ಮೇಲೆ ಕೇಂದ್ರೀಕೃತವಾಗಿದೆ.  ಹಾಗಾಗಿ, ಕರ್ನಾಟಕದ ಬ್ರಾಹ್ಮಣೀಯ ಹಾಗೂ ಜೈನ ಸಂಸ್ಕೃತಿಗಳೆರಡರ ಅಪರೂಪದ ಸಂಯೋಜನೆಯನ್ನು ಪಂಪನು ಪ್ರತಿನಿಧಿಸುವನೆಂದು ಸರಿಯಾಗಿಯೇ ಹೇಳಲಾಗಿದೆ.  ಇತರ ಅನೇಕ ಲೇಖಕರು ಪಂಪನ ಪ್ರಸ್ತುತಿಯ ಶೈಲಿಯನ್ನು ಅನುಸರಿಸಿದರೂ, ಯಾರೂ ಆತನ ಅಪ್ರತಿಮ ಶೈಲಿಯನ್ನು ಮೀರಿಸಲು ಆಗಲಿಲ್ಲ ಎನ್ನುವ ವಾಸ್ತವದ ಹಿನ್ನೆಲೆಯಲ್ಲಿ, ಕವಿಯಾಗಿ ಆತ ತನ್ನ ಮಹತ್ತನ್ನು ಸ್ಥಾಪಿಸಿದ್ದಾನೆ ಎನ್ನಬಹುದು.

ಈ ಅವಧಿಯ ಮತ್ತೊಬ್ಬ ಮಹಾನ್ ಕವಿಯಾದ ಪೊನ್ನನು (ಕ್ರಿ.ಶ. ೯೫೦) ‘ಭುವನೈಕ ರಾಮಾಭ್ಯುದಯ’ ಹಾಗೂ ‘ಶಾಂತಿಪುರಾಣ’ ಗಳನ್ನು ಬರೆದನು. ಭೀಮ ಹಾಗೂ ದುರ್ಯೋಧನರ ನಡುವಣ ಕಾಳಗವನ್ನು ಪರಿಣಾಮಕಾರಿ ಶೈಲಿಯಲ್ಲಿ ಪ್ರತಿಬಿಂಬಿಸಿದ ಪ್ರಾಚೀನ ಕಥೆಯಾದ ‘ಗದಾಯುದ್ಧ’ವನ್ನು ರನ್ನನು (ಕ್ರಿ.ಶ.೯೯೩) ಬರೆದನು.ಜೈನ ಮುನಿಯಾದ ಅಜಿತನಾಥನ ಜೀವನವನ್ನು ಕುರಿತಾದ ಅಜಿತಪುರಾಣವನ್ನೂ ಬರೆದನು.  ನಾಗಚಂದ್ರನು ರಾಮಾಯಣದ ಜೈನ ಆವೃತಿಯಾದ ರಾಮಚಂದ್ರಚರಿತ ಹಾಗೂ ಮಲ್ಲೀನಾಥಪುರಾಣ ಎಂಬ ಧಾರ್ಮಿಕ ಮಹಾಕಾವ್ಯಗಳನ್ನು (ಕ್ರಿ.ಶ. ೧೦೦೦) ಬರೆದನು.

ಈ ಅವಧಿಗೆ ಸೇರಿದ ಶಿವಕೋಟ್ಯಾಚಾರ್ಯನ ವಡ್ಡಾರಾಧನೆ ಹಾಗೂ ಚಾವುಂಡರಾಯನ ಚಾವುಂಡರಾಯ ಪುರಾಣಗಳನ್ನು ಕನ್ನಡ ಗದ್ಯದ ಉತ್ತಮ ಕೃತಿಗಳೆಂದು ಪರಿಗಣಿಸಲಾಗಿದೆ. ನಾಗವರ್ಮನ (ಕ್ರಿ.ಶ. ೯೯೦) ಕಾದಂಬರಿ ಹಾಗೂ ಛಂದೋಂಬುಧಿ, ದುರ್ಗಸಿಂಹನ ಪಂಚತಂತ್ರ, ಗಂಗ ರಾಜ ಹಾಗೂ ಮೃಚ್ಛಕಟಿಕದ ಕರ್ತೃವಾದ ಶೂದ್ರಕರ ನಡುವೆ ಹೋಲಿಕೆಗಳನ್ನು ಮಾಡಿರುವ ಗುಣವರ್ಮನ (ಕ್ರಿ.ಶ. ೯೦೦) ಶೂದ್ರಕದಂತಹ ಇತರ ಹಲವಾರು ಕೃತಿಗಳು ಈ ಅವಧಿಯ ಅತ್ಯಂತ ಶ್ರೇಷ್ಠ ಕೃತಿಗಳೆಂದು ಪರಿಗಣಿಸಲಾಗಿದೆ.

ರಾಷ್ಟ್ರಕೂಟ ರಾಜನಾದ ಮೂರನೆಯ ಇಂದ್ರನ ಅಧೀನದಲ್ಲಿ ಸೇನಾಧಿಪತಿಯಾಗಿದ್ದ ಶ್ರೀವಿಜಯನು, ಸ್ವತಃ ಮಹಾನ್ ಕವಿಯಾಗಿದ್ದನು.  ಆತನ ಕೃತಿಗಳು ಲಭ್ಯವಿಲ್ಲದಿದ್ದರೂ, ಆತನು ರಚಿಸಿದ ಮಣ್ಣೆ ತಾಮ್ರ ಫಲಕದ ದಾಖಲೆಯು ಮಹಾನ್ ಮೌಲ್ಯವುಳ್ಳದಾಗಿದ್ದು, ಕಿರು ಮಹಾಕಾವ್ಯವೆಂದು ಪರಿಗಣಿಸಲ್ಪಟ್ಟುದ್ದ, ಆತನ ಸಮಕಾಲೀನರು ಆತನ ಕುರಿತಾಗಿ ನುಡಿದ ಹೊಗಳಿಕೆಯ ಮಾತುಗಳು ಸಮಂಜಸವೆಂದೆನಿಸಿವೆ.

‘ಆದಿಪುರಾಣ, ‘ಶಾಂತಿಪುರಾಣ’, ‘ಅಜಿತಪುರಾಣ’ ಹಾಗೂ ಇತರ ಹಲವಾರು ಜೈನ ಪುರಾಣಗಳನ್ನು ಚಂಪೂ ಶೈಲಿಯಲ್ಲಿ ಬರೆಯಲಾಗಿದೆ. ಶುದ್ಧ ಗದ್ಯ ರೂಪದಲ್ಲಿ ಬರೆದಿರುವ ಪ್ರಥಮ ಕನ್ನಡ ಕೃತಿಯೆಂದರೆ ಬಹುಶಃ ಚಾವುಂಡರಾಯನ ‘ತ್ರಿಶಷ್ಠಿಲಕ್ಷಣಪುರಾಣ’ ಎಂದು ತೋರುತ್ತದೆ. ನಾಗಭಟ್ಟ, ನಾಗವರ್ಮ ಆಚಾರ್ಯ, ಕರ್ಪರಸ, ದಿವಾಕರ, ನಾರಾಯಣಭಟ್ಟ, ಕಮಲಾದಿತ್ಯ ಹಾಗೂ ಇತರರಂತಹ ಜೈನ ಹಾಗೂ ಬ್ರಾಹ್ಮಣ  ಲೇಖಕರ ವೀರೋಚಿತ ಹಾಗೂ ಪ್ರಾಚೀನ ಕೃತಿಗಳೆರಡೂ ಈ ಅವಧಿಯಲ್ಲಿ ರಚಿತವಾದವು.

ಈ ಅವಧಿಯಲ್ಲಿ ಮಹಾಕಾವ್ಯಗಳು ಹಾಗೂ ಪುರಾಣಗಳೊಂದಿಗೆ, ಇತರ ಕೃತಿಗಳನ್ನೂ ರಚಿಸಲಾಯಿತು. ಈಗಾಗಲೇ ಹೇಳಿರುವ ಕವಿತ್ವದ ಬಗೆಗಿನ ನೃಪತುಂಗನ ಕವಿರಾಜಮಾರ್ಗವಲ್ಲದೆ, ಛಂದಶಾಸ್ತ್ರದ ಬಗೆಗಿನ ನಾಗವರ್ಮನ (ಕ್ರಿ.ಶ. ೯೦೦) ‘ಛಂದೋಂಬುಧಿ’ ಕೃತಿಯು ರಚಿತವಾಯಿತು. ವೈಜ್ಞಾನಿಕ ಕೃತಿಗಳಾದ ಚಂದ್ರರಾಜನ (ಕ್ರಿ.ಶ. ೧೦೭೯) ಶೃಂಗಾರದ ಬಗೆಗಿನ ‘ಮದನತಿಲಕ’ ಹಾಗೂ ಪಾಕಶಾಸ್ತ್ರದ ಬಗೆಗಿನ ಸೂಪಶಾಸ್ತ್ರ, ಈ ಕಾಲಕ್ಕೆ ಸೇರಿದ ಕೃತಿಗಳಾಗಿವೆ.

 

ಧಾರ್ಮಿಕ ಪ್ರಚಾರದ ಯುಗ

ಕ್ರಿ.ಶ. ೧೨ - ೧೬ನೆಯ ಶತಮಾನದ ನಡುವಣ ಅವಧಿಯು ಕರ್ನಾಟಕದಲ್ಲಿ ಉತ್ಕಟ ಧಾರ್ಮಿಕ ಅಸ್ಥಿರತೆಯ ಕಾಲವಾಗಿತ್ತು. ತಮ್ಮ ನೂತನ ತತ್ವಚಿಂತನೆ ಹಾಗೂ ಮತಗಳ ಮೂಲಕ ಸಾಂಪ್ರದಾಯಿಕ ಹಿಂದುತ್ವವನ್ನು ಪುನರುಜ್ಜೀವನಗೊಳಿಸಲು ಧಾರ್ಮಿಕ ಗುರುಗಳಾದ ರಾಮಾನುಜ, ಮಧ್ವ, ಬಸವ, ವಿದ್ಯಾರಣ್ಯ ಮುಂತಾದವರು ಯತ್ನಿಸಿದ ಕಾಲವದು. ಧರ್ಮಪ್ರಚಾರಕ ಹುಮ್ಮಸ್ಸಿನೊಂದಿಗೆ, ಈ ಧಾರ್ಮಿಕ ನಾಯಕರು ತಮ್ಮ ಚಿಂತನೆಗಳನ್ನು ಪ್ರಚಾರ ಮಾಡಲು ಪ್ರಯತ್ನಿಸಿದರು. ಸಂಪ್ರದಾಯಸ್ಥ ಹಾಗೂ ಕಟ್ಟಾ ಸಂಪ್ರದಾಯಶೀಲರಾದ ಹಿಂದೂಗಳ ಮನಸ್ಸಿಗೆ ಅಸಂತುಷ್ಟಿ ತರುವ ಹಲವಾರು ಸುಧಾರಣತ್ಮಕ ಬದಲಾವಣೆಗಳನ್ನು ಸಮಾಜದಲ್ಲಿ ಅವರು ತಂದರು. ಹಾಗಾಗಿ, ಇಲ್ಲಿ ಬಹಳಷ್ಟು ಅಸ್ಥಿರತೆ, ವೈಮನಸ್ಯ ಹಾಗೂ ಸ್ಪರ್ಧಾಭಾವವು ವಿರೋಧಿ ಮತಗಳ ನಡುವೆ ಮೂಡಿತು; ಇದರ ಪರಿಣಾಮವಾಗಿ, ಸಮಾಜದ ಸಮಾಜೋ-ಧಾರ್ಮಿಕ ಪರಿಸ್ಥಿತಿಗಳನ್ನು ಇವು ಕಲಕಿ, ಈ ಅವಧಿಯಲ್ಲಿ ಪ್ರಚಾರಕ ಸ್ವರೂಪದ ವಿಶಾಲವಾದ ಸಾಹಿತ್ಯವನ್ನು ರಚಿಸಲಾಯಿತು. 

ಜೈನ ಧರ್ಮ  ಕುರಿತಾಗಿ  ಸಾರ್ವಜನಿಕರಲ್ಲಿ  ಇಳಿಮುಖವಾದ ಆಸಕ್ತಿಯನ್ನು ಪುನರುಜ್ಜೀವನಗೊಳಿಸಲು, ಜೈನ ಬರಹಗಾರರು ತೀರ್ಥಂಕರರನ್ನು ಕುರಿತು ಹಲವಾರು ಪುರಾಣಗಳನ್ನು ಬರೆದರು.  ನಾಗಚಂದ್ರ ಚರಿತ, ಪುಷ್ಪದಂತ ಪುರಾಣ, ಚಂದ್ರಪ್ರಭಾ ಪುರಾಣ, ಅನಂತನಾಥ ಪುರಾಣಗಳಂತಹ ಕೆಲವು ಕೃತಿಗಳನ್ನು ಜೈನ ಲೇಖಕರು ಬರೆದರು. ಬ್ರಾಹ್ಮಣ  ವಿದ್ವಾಂಸರು ಜಗನ್ನಾಥ ವಿಜಯ, ಹರಿಚರಿತ, ಕೃಷ್ಣಲೀಲಾ, ರಾಮಾಯಣ ಹಾಗೂ ಇತರ ಕೃತಿಗಳನ್ನು ಬರೆದರು. ವೀರಶೈವ ಲೇಖಕರಾದ ಹರಿಹರ, ಸಿದ್ಧರಾಮ, ಕೊಂಡಗುಳಿ ಕೇಶಿರಾಜ, ಮಗ್ಗೆಯ ಮಾಯಿದೇವ, ಗುಬ್ಬಿ ಮಲ್ಲಣ್ಣ ಹಾಗೂ ಇತರರೂ ಸಹ ವಿಸ್ತೃತವಾದ ಕೊಡುಗೆಗಳನ್ನು ನೀಡಿದ್ದಾರೆ. ಈ ಕಾಲದ ವಚನಕಾರರು ತಮ್ಮ ಸಾಟಿಯಿಲ್ಲದ ಶೈಲಿ ಹಾಗೂ ವಿಶಿಷ್ಟ ಸ್ವರೂಪದ ಬರವಣಿಗೆಗಳಿಂದ, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಆದರೆ, ಸಾಮಾನ್ಯವಾಗಿ ಈ ಅವಧಿಯ ಬರವಣಿಗೆಗಳು ದ್ವೇಷ, ಅಸಹಿಷ್ಣುತೆ, ಹಗೆತನ ಹಾಗೂ ಟೀಕೆಗಳಿಂದ ಕಳಂಕಿತವಾಗಿದ್ದು, ಅಂದಿನ ಸಮಾಜದ ಸಮಾಜೋ-ಧಾರ್ಮಿಕ ಪರಿಸ್ಥಿತಿಗಳ ಅಭಿವ್ಯಕ್ತತೆಯಾಗಿದೆ.

ಈ ಅವಧಿಯಲ್ಲಿ ಹೊರಬಂದ ಅಗಾಧವಾದ ಧಾರ್ಮಿಕ ಸಾಹಿತ್ಯವು ಹಿಂದಿನ ಅವಧಿಯ ವೈಭವ ಹಾಗೂ ನಯನಾಜೂಕನ್ನು  ಹೊಂದದಿದ್ದರೂ ಜನಪ್ರಿಯವಾಯಿತು - ಕಾರಣ, ಅದರ ಸ್ಪಷ್ಟ ಹಾಗೂ ಸರಳ ಶೈಲಿಯ ಪ್ರಸ್ತುತಪಡಿಸುವಿಕೆ. ತನ್ನ ಚುರುಕುತನ, ಲಯಯುಕ್ತ ಛಂದೋಬದ್ಧಗತಿ (ಸ್ವರಾವರೋಹಣ) , ಶುದ್ಧ ಹಾಗೂ ನಿರಾಡಂಬರ ಪದಪ್ರಯೋಗ ದಿಂದ, ವಚನ ಸಾಹಿತ್ಯವು ಗಣನೀಯವಾದ ಪ್ರಭಾವವನ್ನು ಬೀರಿತು. ಗಾಂಭೀರ್ಯ ಹಾಗೂ ಸೌಂದರ್ಯಗಳು, ಸಾಹಿತ್ಯಕ ಅಭಿವ್ಯಕ್ತತೆಯ ರೂಪವಾದ ಗದ್ಯದಲ್ಲಿ ಪರಿಚಯವಾಯಿತು.

 

 

ಪ್ರತಿಭಟನಾಯುಗ

ಕ್ರಿ.ಶ. ೧೨ನೆಯ ಶತಮಾನದ ಮಧ್ಯದಲ್ಲಿ, ಜೈನ ಹಾಗೂ ವೀರಶೈವ ಬರಹಗಾರರು ಕರ್ನಾಟಕದಲ್ಲಿ ನೂತನ ಸಾಹಿತ್ಯಕ ಚಳವಳಿಗೆ ನಾಂದಿ ಹಾಡಿದರು. ವೀರಶೈವ ಸಿದ್ಧಾಂತದಿಂದ, ಸಮಾಜೋಧಾರ್ಮಿಕ ವಲಯಗಳಲ್ಲಿನ ಪ್ರತಿಭಟನೆಯು ವೇಗವನ್ನು ಪಡೆಯಿತು. ಬಸವೇಶ್ವರರ ನಾಯಕತ್ವದಲ್ಲಿ, ವೀರಶೈವ ಅನುಭಾವಿಗಳು ಹಾಗೂ ಸಂತರು ತಮ್ಮ ಚಿಂತನೆ ಹಾಗೂ ಅಭಿಪ್ರಾಯಗಳನ್ನು ಅಭಿವ್ಯಕ್ತಪಡಿಸಲು, ಸರಳ ಹಾಗೂ ಜನಪ್ರಿಯ ಮಾಧ್ಯಮವಾದ ವಚನಗಳನ್ನು ಆರಿಸಿಕೊಂಡರು. ವೀರಶೈವ ಮತಕ್ಕೆ ಸೇರಿದ ಬಸವ, ಅಲ್ಲಮಪ್ರಭು, ಅಕ್ಕಮಹಾದೇವಿ ಮುಂತಾದವರು ತಮ್ಮ ವಚನಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದರು. ಬಸವನು ಅನನ್ಯ ಭಕ್ತನಾದರೆ, ಅಲ್ಲಮಪ್ರಭುವು ಅನನ್ಯ ಜ್ಞಾನಿಯಾಗಿ(ವಿದ್ವಾಂಸ)ದ್ದು ಅಕ್ಕಮಹಾದೇವಿಯು ಚನ್ನಮಲ್ಲಿಕಾರ್ಜುನ ದೇವನಲ್ಲಿ ತನ್ನ ಚಿರಂತನ ಪ್ರೇಮವನ್ನು ಅರಸಿದಳು.  ಶಿವಶರಣರೆಂದು ಜನಪ್ರಿಯವಾದ ಈ ಚಳವಳಿಯ ಸದಸ್ಯರಲ್ಲಿ ಅನೇಕರು ಸಾಧಾರಣ ವೃತ್ತಿಪರ ಹಿನ್ನೆಲೆಯಿಂದ ಬಂದವರಾಗಿದ್ದು, ಯಾವುದೇ ಶಿಕ್ಷಣ ಅಥವಾ ತರಬೇತಿಯಿಲ್ಲದೆ, ಕೇವಲ ತಮ್ಮ ಜೀವನದ ಶ್ರೀಮಂತ ಅನುಭವ ಹಾಗೂ ಮನದಾಳದ ಆಧ್ಯಾತ್ಮಿಕ ಕಲಿಕೆಗಳ ಆಧಾರದ ಮೇಲೆ, ಅರ್ಥಪೂರ್ಣ ಹಾಗೂ ಪ್ರಬಲವಾದ ಸಾಹಿತ್ಯಕ ರಚನೆಗಳಿಗೆ ಕಾರಣರಾದರು.  ಈ ರೀತಿಯಾಗಿ, ಈ ಅವಧಿಯಲ್ಲಿ ಹೊರಬಂದ ಅನುಭಾವಿ ಸ್ವರೂಪದ ಗದ್ಯ-ಗೇಯ  ರೂಪದ ವಿಶಾಲವಾದ ವಚನ ಸಾಹಿತ್ಯವು, ಕನ್ನಡ ಸಾಹಿತ್ಯದ ಗಮನಾರ್ಹ ಶಾಖೆಯಾಗಿ ಕನ್ನಡ ಭಾಷೆಯ ಬೆಳವಣಿಗೆಗೆ ಅಪಾರವಾದ ಕೊಡುಗೆಯನ್ನು ನೀಡಿತು. ನಯಸೇನನಂತಹ ಜೈನ ಬರಹಗಾರರು ಹಿಂದಿನ ಕಾಲದ ವೈಭವೋಪೇತ ಭಾಷೆಗೆ ಪ್ರತಿಯಾಗಿ ಸರಳ ಕನ್ನಡದಲ್ಲಿ, ಜನಪ್ರಿಯ ಕಥೆಗಳನ್ನು ಬರೆದರು.

ಕ್ರಿ.ಶ. ೧೨ನೆಯ ಶತಮಾನದ ಅಂತ್ಯದ ವೇಳೆಗೆ, ಹೊಸ ಛಂದಸ್ಸಿನ ರೂಪಗಳನ್ನು ಒಳಗೊಂಡ ಕೃತಿಗಳಾದ ರಗಳೆ ಹಾಗೂ ಷಟ್ಪದಿಗಳನ್ನು ಹರಿಹರ ಹಾಗೂ ರಾಘವಾಂಕರಂತಹ ಬರಹಗಾರರು ರಚಿಸಿದರು. ಛಂದಸ್ಸು ಹಾಗೂ ಶೈಲಿಯಲ್ಲಿ ಭಾಷೆಗೆ ಹೊಸ ಉತ್ತೇಜನವನ್ನು ನೀಡಿದರು. ಹರಿಹರನು ಶಿವಶರಣರ ಅನೇಕ ಜೀವನಚರಿತ್ರೆಗಳನ್ನು ಬರೆದನು, ಅದರ ಪೈಕಿ ಬಸವೇಶ್ವರನನ್ನು ಕುರಿತಾಗಿ ಬರೆದ ‘ಬಸವರಾಜ ದೇವರ ರಗಳೆ’ ಕೃತಿಯನ್ನು ಕನ್ನಡ ಸಾಹಿತ್ಯದ ಮೇರು ಕೃತಿಯೆಂದು ಗುರುತಿಸಲಾಗಿದೆ. ರಾಘವಾಂಕನ ಹರಿಶ್ಚಂದ್ರಕಾವ್ಯದಂತಹ ಅಮೂಲ್ಯ ಕೃತಿಯ ಕೇಂದ್ರ ವಿಷಯದ ವೃತ್ತಾಂತ ನೀಡುವಲ್ಲಿ, ಕವಿಯು ತನ್ನ ಕಲಾತ್ಮಕ ಹಾಗೂ ನಾಟಕೀಯ ಕೌಶಲ್ಯವನ್ನು ಮೆರೆದಿದ್ದಾನೆ.

ಕ್ರಿ.ಶ. ೧೨ - ೧೪ನೆಯ ಶತಮಾನದ ನಡುವೆ, ಪ್ರಾಚೀನ ಕಾವ್ಯದ ನಿರ್ದಿಷ್ಟ ಶೈಲಿಯಾದ ಚಂಪೂ ಪ್ರವರ್ಧತೆ ಹೊಂದಿತು. ನೇಮಿಚಂದ್ರ (ಕ್ರಿ.ಶ. ೧೧೭೦), ರುದ್ರಭಟ್ಟ (ಕ್ರಿ.ಶ. ೧೧೮೦), ಜನ್ನ (ಕ್ರಿ.ಶ. ೧೨೦೯) ಹಾಗೂ ಆಂಡಯ್ಯರಂತಹ (ಕ್ರಿ.ಶ. ೧೨೩೫) ವರಿಷ್ಠ ಕವಿಗಳು ತಮ್ಮ ಕೃತಿಗಳಲ್ಲಿ ಈ ಶೈಲಿಯನ್ನು ಬಳಸಿದರು.ವಿಷ್ಣುಪುರಾಣದಿಂದ ಪಡೆದ ಧಾರ್ಮಿಕ ವಿಷಯಗಳಿಗೆ ಈ ಶೈಲಿಯನ್ನು ಬಳಸಿದ ಪ್ರಥಮ ಬ್ರಾಹ್ಮಣ  ಕವಿಯೆಂದರೆ ರುದ್ರಭಟ್ಟ. ಹಿರಿಮೆಯಲ್ಲಿ ಪಂಪ ಹಾಗೂ ರನ್ನರಿಗೆ ಹೋಲಿಸಲ್ಪಡುವ ‘ಯಶೋಧರಚರಿತೆ’ಯ ಕರ್ತೃವಾದ ಜನ್ನನು, ಪ್ರೇಮ ಹಾಗೂ ಕಾಮಗಳನ್ನು ಕುರಿತಾಗಿ ಮಹಾನ್ ಅಂತರ್‌ದೃಷ್ಟಿ ಹಾಗೂ ಗ್ರಹಿಕೆಯೊಂದಿಗೆ ಬರೆದನು. ಕೇವಲ ಕೆಲವು ಸಂಸ್ಕೃತ ಜನ್ಯಪದಗಳನ್ನು  ಹೊರತುಪಡಿಸಿ, ಯಾವುದೇ ಸಂಸ್ಕೃತ ಪದಗಳನ್ನು ಬಳಸದೆ, ಅಚ್ಚ ಕನ್ನಡದಲ್ಲಿ ಆಂಡಯ್ಯನು ‘ಕಬ್ಬಿಗರಕಾವ’ವನ್ನು ಬರೆದನು. ಈ ಕೃತಿಯಲ್ಲಿ, ಪ್ರೇಮದೇವತೆಯಾದ ಕಾಮನು, ತನಗೆ ಸೇರಿದ ಚಂದ್ರನನ್ನು ಶಿವನು ಕದ್ದನೆಂದು ನಂಬಿ, ಶಿವನ ವಿರುದ್ಧ ಸಮರವನ್ನು ಸಾರುತ್ತಾನೆ. ಕೋಪಾವೇಶಗೊಂಡ ಶಿವನು ಕಾಮನನ್ನು ಉಭಯಲಿಂಗಿಯಾಗಿ ಮಾಡುತ್ತಾನೆ. ಈ ವಿಷಯಕ್ಕೆ, ಹಿಂದೂ ಧರ್ಮಗ್ರಂಥಗಳು ಪ್ರೇರಣೆ ನೀಡಿದರೂ, ಅದರ ಸ್ವಂತಿಕೆ, ಕಲ್ಪನೆ ಹಾಗೂ ಕಥನಾಶೈಲಿಯ ಕಾರಣದಿಂದ, ಆ ಕಾಲದ ಅತ್ಯುತ್ತಮ ಕೃತಿಯೆಂಬ ಹೊಗಳಿಕೆಗೆ ಇದು ಪಾತ್ರವಾಗಿದೆ. ಅದೇ ಕಾಲಕ್ಕೆ ಸೇರಿದ ಕೇಶಿರಾಜನು (ಕ್ರಿ.ಶ. ೧೨೬೦) ಉತ್ತಮ ಗುಣಮಟ್ಟದ ಕನ್ನಡ ವ್ಯಾಕರಣ ಕೃತಿಯಾದ ‘ಶಬ್ದಮಣಿದರ್ಪಣ’ವನ್ನು ಬರೆದಿದ್ದಾನೆ.

 

ವೈಭವದ ಯುಗ

ಕ್ರಿ.ಶ. ೧೪ - ೧೬ನೆಯ ಶತಮಾನಗಳ ನಡುವಣ ಅವಧಿಯನ್ನು ವಿಜಯನಗರ ಸಾಮ್ರಾಜ್ಯದ ಸುವರ್ಣ ಯುಗವೆಂದು ಸ್ಮರಿಸಿಕೊಳ್ಳಲಾಗುತ್ತದೆ. ಈ ಅವಧಿಯಲ್ಲಿ, ಎಲ್ಲ ಮತಗಳ ಕವಿಗಳೂ, ತಮ್ಮ ಕೃತಿಗಳೊಂದಿಗೆ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಆ ಅವಧಿಯ ಜನಪ್ರಿಯ ಕವಿಯಾದ ಕುಮಾರವ್ಯಾಸನು (ಕ್ರಿ.ಶ. ೧೪೩೦) ಗದುಗಿನ ಭಾರತವೆಂದು ಜನಪ್ರಿಯವಾದ ಕರ್ನಾಟಕ-ಭಾರತ ಕಥಾಮಂಜರಿಯನ್ನು ಬರೆದನು; ಷಟ್ಪದಿ ಎಂಬ ನಿರ್ದಿಷ್ಟ ಕನ್ನಡ ಛಂದಸ್ಸನ್ನು ಬಳಸಿ ರಚಿಸಲಾದ ಈ ಕೃತಿಯು ಮಹಾಭಾರತದ ಮೊದಲ ಹತ್ತು ಪರ್ವಗಳನ್ನು ಒಳಗೊಂಡಿದೆ.  ಆತನ ವೈವಿಧ್ಯಮಯ ಕಥನಾ ಕೌಶಲ್ಯ ಹಾಗೂ ಸ್ಥಿರ ಶೈಲಿಯಿಂದ, ಕುಮಾರವ್ಯಾಸನನ್ನು ಕನ್ನಡ ಸಾಹಿತ್ಯದ ಅತ್ಯಂತ ಮಹಾನ್ ಕವಿಯೆಂದು ಪರಿಗಣಿಸಲಾಗಿದೆ. ತನ್ನ ಭಾರತದಲ್ಲಿ, ವೈರುಧ್ಯ ಭಾವನೆಗಳ ಮಾನವ ದೃಷ್ಟಿಕೋನವನ್ನು ಪಂಪನು ತೆರೆದಿಟ್ಟರೆ, ಕೃಷ್ಣ ಹಾಗೂ ಇತರರ ವ್ಯಕ್ತಿಚಿತ್ರಣದ ಮೂಲಕ ಮಾನವರ ಜೀವನದಲ್ಲಿ ದೈವಿಕ ಶಕ್ತಿಯ ಪಾತ್ರವನ್ನು ಕುಮಾರವ್ಯಾಸನು ಒತ್ತಿ ಹೇಳುತ್ತಾನೆ.  ಮತ್ತೊಬ್ಬ ಮಹಾನ್ ಕವಿಯಾದ ಕುಮಾರವಾಲ್ಮೀಕಿಯೂ (ಕ್ರಿ.ಶ. ೧೫೦೦)

ಈ ಕಾಲಕ್ಕೆ ಸೇರಿದವನು. ಕನ್ನಡ ಸಾಹಿತ್ಯದ ಅತ್ಯಂತ ಜನಪ್ರಿಯ ಕಥನರೂಪದ ಪದ್ಯವೆಂದು ಪರಿಗಣಿಸಲಾದ ‘ಜೈಮಿನಿ ಭಾರತ’ವನ್ನು ಕವಿ ಲಕ್ಷ್ಮೀಶ ಸು. ಕ್ರಿ.ಶ. ೧೬೦೦ರಲ್ಲಿ ಬರೆದನು.

ಮಧ್ವ ಸಂತರಾದ ಪುರಂದರದಾಸ ಹಾಗೂ ಕನಕದಾಸರು, ವ್ಯಾಸರಾಜರ ಪ್ರೇರಣೆಯಿಂದ, ಸರಳ ಮಾತನಾಡುವ ಕನ್ನಡವನ್ನು ತಮ್ಮ ಅಭಿವ್ಯಕ್ತತೆಯ ಮಾಧ್ಯಮವಾಗಿ ಬಳಸಿ, ಅನೇಕ ಭಕ್ತಿ ಗೀತೆಗಳನ್ನು ರಚಿಸಿದರು. ಕರ್ನಾಟಕದಲ್ಲಿ ಭಕ್ತಿ ಚಳವಳಿಯ ಒಂದು ಭಾಗವಾದ ದಾಸಕೂಟಕ್ಕೆ ಅವರು ಪ್ರೇರಣೆ ನೀಡಿದರು. ತನ್ನ ಭಕ್ತಿಯ ಗುಣದಿಂದ ದಾಸಸಾಹಿತ್ಯವು ಕರ್ನಾಟಕದ ಮನೆಮನೆಗೆ ತಲುಪಿತು. ಇಂದಿಗೂ ಕರ್ನಾಟಕದ ಸಾಂಸ್ಕೃತಿಕ ಗುಣವಿಶೇಷತೆಗಳ  (ಪ್ರಕೃತಿ) ಮೇಲೆ ಅದರ ಪ್ರಭಾವವನ್ನು ಮುಂದುವರೆಸಿದೆ.

ಈ ಅವಧಿಯಲ್ಲಿ, ವೀರಶೈವ ವಚನ ಸಾಹಿತ್ಯದ ವ್ಯವಸ್ಥಿತ ಮರು ವ್ಯವಸ್ಥೀಕರಣವು ಮುಂದುವರಿಯಿತು. ಈ ಅವಧಿಯ ವೀರಶೈವ ಬರಹಗಾರರ ಪೈಕಿ, ಲಕ್ಕಣ್ಣ ದಂಡೇಶ, ನಿಜಗುಣ ಶಿವಯೋಗಿ, ವಿರೂಪಾಕ್ಷ ಪಂಡಿತ, ಚಾಮರಸ ಹಾಗೂ ಇತರರು ಅಮೂಲ್ಯವಾದ ಕೊಡುಗೆಗಳನ್ನು ನೀಡಿದರು.ಚಾಮರಸನ ಪ್ರಭುಲಿಂಗಲೀಲೆಯು ಈ ಅವಧಿಯಲ್ಲಿ ಮೆಚ್ಚುಗೆಗಳಿಸಿದ ಕೃತಿಯಾಗಿದ್ದು ಶಿವಯೋಗಿಯ ವಿವೇಕ-ಚೂಡಾಮಣಿಯು ವಿಶ್ವಕೋಶ ಕೃತಿಯೆಂದು ಪರಿಗಣಿತವಾಗಿದೆ.

ಜೈನ ಮತಕ್ಕೆ ಸೇರಿದ ಮಂಗರಸ, ಸಾಳ್ವ, ರತ್ನಾಕರವರ್ಣಿ ಹಾಗೂ ಇತರ ಪ್ರತಿಷ್ಠಿತ ಬರಹಗಾರರು, ತಮ್ಮ ಪ್ರಶಂಸಾರ್ಹ ಕೃತಿಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.  ರತ್ನಾಕರವರ್ಣಿಯ ಭರತೇಶ-ವೈಭವವು ಸಾಂಗತ್ಯ ಛಂದಸ್ಸಿನ ಉತ್ತಮ ಉದಾಹರಣೆಯಾಗಿದ್ದು ಆ ಅವಧಿಯ ಅತ್ಯಂತ ಮಹಾನ್ ಕಾವ್ಯಗಳಲ್ಲಿ ಒಂದೆಂದು ಹೊಗಳಲಾಗಿದೆ. ಈ ಕೃತಿಯ ಮೂಲಕ ಜಾನಪದ ಸಾಂಗತ್ಯ ಶೈಲಿಯನ್ನು ರತ್ನಾಕರವರ್ಣಿಯು ಸಾಹಿತ್ಯಕ ಕಾವ್ಯದ ಸ್ಥಾನಮಾನಕ್ಕೆ ಏರಿಸಿದರು.  ಚಂಪೂ ಶೈಲಿಯ ಛಂದಸ್ಸಿನ ಕ್ಷೀಣಿಸುವಿಕೆ ಅಥವಾ ಕುಗ್ಗುತ್ತಿರುವ ಪ್ರಭಾವ ಹಾಗೂ ಕನ್ನಡ ಸಾಹಿತ್ಯದ ಜನಪ್ರಿಯ ರೂಪವಾಗಿ, ಷಟ್ಪದಿ ಹಾಗೂ ಸಾಂಗತ್ಯ ಶೈಲಿಗಳ ಉದಯವು ಈ ಅವಧಿಯ ಹೆಗ್ಗುರುತಾಗಿದೆ.

 

ಪುನರುಜ್ಜೀವನ ಯುಗ

ಕ್ರಿ.ಶ. ೧೭ - ೧೯ನೆಯ ಶತಮಾನದ ನಡುವೆ, ಗದ್ಯ ಹಾಗೂ ಪದ್ಯ ರಚನೆಯ ಪ್ರಾಚೀನ  ರೂಪ ಹಾಗೂ ಚಂಪೂ ಶೈಲಿಗಳು ಪುನರುಜ್ಜೀವನ ಪಡೆದವು. ಮೈಸೂರು ಅರಸರಾದ ಚಿಕ್ಕದೇವರಾಜರ ಆಶ್ರಯದಲ್ಲಿ, ಈ ಅವಧಿಯ ಹೆಸರಾಂತ ಬರಹಗಾರರಾದ ತಿರುಮಲರಾಯ ಹಾಗೂ ಚಿಕ್ಕುಪಾಧ್ಯಾಯರು ಕನ್ನಡದಲ್ಲಿ ಶ್ರೀವೈಷ್ಣವ ಆಖ್ಯಾಯಿಕೆ ಅಥವಾ ಐತಿಹ್ಯ ಹಾಗೂ ಜೀವನಚರಿತ್ರೆಗಳನ್ನು ಬರೆದು, ಶ್ರೀವೈಷ್ಣವ ವಿಷಯ ಹಾಗೂ ತಿಳಿವಳಿಕೆಗಳಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ತಿರುಮಲರಾಯನು ಸಮಕಾಲೀನ ಇತಿಹಾಸವನ್ನೂ ಬರೆದು, ತನಗೆ ಆಶ್ರಯ ನೀಡಿದ ರಾಜನಿಗೆ, ಚಿಕ್ಕದೇವರಾಯ-ವಿಜಯದಲ್ಲಿ ಉಜ್ವಲವಾದ ಶ್ಲಾಘನೆಯನ್ನು ಸಲ್ಲಿಸಿದ್ದಾನೆ. 

ʼಸರ್ವಜ್ಞನ-ಪದಗಳು’ ಕನ್ನಡ ಸಾಹಿತ್ಯಕ್ಕೆ ಸರ್ವಜ್ಞನು ನೀಡಿರುವ ಅಭೂತಪೂರ್ವ ಕೊಡುಗೆ ಎಂದೇ ಜನಪ್ರಿಯವಾಗಿವೆ. ಇದನ್ನು ತ್ರಿಪದಿ, ಅಂದರೆ ಮೂರು-ಸಾಲಿನ ವೃತ್ತ ಅಥವಾ ಶ್ಲೋಕಗಳಲ್ಲಿ ರಚಿಸಲಾಗಿದೆ. ಆತನ ರಚನೆಗಳು ಮಹಾನ್ ವಿವೇಕ ಹಾಗೂ ಚತುರೋಕ್ತಿಗಳ ಆಗರಗಳಾಗಿದ್ದು, ಇಂದಿಗೂ ಅಸಂಖ್ಯಾತ ಕನ್ನಡಿಗರ ನಾಲಗೆಯ ಮೇಲೆ ನಲಿದಾಡುತ್ತಿವೆ.

ಈ ಕಾಲದ ಮತ್ತೊಬ್ಬ ಉತ್ತಮ ಶರಣ ಸಾಹಿತ್ಯ ಬರಹಗಾರ ಷಡಕ್ಷರದೇವ. ಆತನ ಕೃತಿಗಳಾದ ‘ರಾಜಶೇಖರ-ವಿಳಾಸ’ (ಕ್ರಿ.ಶ. ೧೬೫೭), ವೃಷಭೇಂದ್ರ-ವಿಜಯ (ಕ್ರಿ.ಶ. ೧೬೭೧) ಹಾಗೂ ಶಬರ-ಶಂಕರ-ವಿಲಾಸಗಳು, ಪ್ರಾಚೀನ ಕನ್ನಡ ಭಾಷೆಯ ಮೇಲಿನ ಲೇಖಕನ ಹಿಡಿತವನ್ನು ಪ್ರತಿಬಿಂಬಿಸುವ ಅದ್ಭುತ ರಚನೆಗಳಾಗಿವೆ.

ಕ್ರಿ.ಶ. ೧೮ನೆಯ ಶತಮಾನದಲ್ಲಿ ಯಕ್ಷಗಾನ ಎಂಬ ಜಾನಪದ ಕಲೆಯು ಜನಪ್ರಿಯವಾಯಿತು. ಕನ್ನಡ ಸಾಹಿತ್ಯದ ‘ಉದಯೋನ್ಮುಖ ತಾರೆ’ ಎಂದು ಹೊಗಳಲ್ಪಟ್ಟ ಮುದ್ದಣನು ತನ್ನ ಸುಪ್ರಸಿದ್ಧ ಗದ್ಯ ಕೃತಿಯಾದ ‘ರಾಮಾಶ್ವಮೇಧ’ವನ್ನು ೧೯ನೆಯ ಶತಮಾನದಲ್ಲಿ ಬರೆದನು; ಮಾನವೀಯ ಹಾಗೂ ದೈವಿಕಗಳೆರಡಕ್ಕೂ ಪ್ರೇಮದ ಭಾವನೆಯನ್ನು ತುಂಬಿದನು. ಭಾರತದ ಮಹಾಕಾವ್ಯವಾದ ರಾಮಾಯಣದ ರಾಮನ ಜೀವನದ ಅಧ್ಯಾಯವೊಂದನ್ನು ಈ ಕೃತಿಯು ಆಧಾರವಾಗಿಸಿಕೊಂಡು ರಚಿಸಲ್ಪಟ್ಟಿದೆ.

ಜಾತ್ಯತೀತ ಹಾಗೂ ಧಾರ್ಮಿಕ ಕೃತಿಗಳನ್ನು ಹೊರತುಪಡಿಸಿ, ದೀರ್ಘಾವಧಿಯಲ್ಲಿ ವಿಜ್ಞಾನ, ಜ್ಯೋತಿಶ್ಯಾಸ್ತ್ರ, ಔಷಧ, ಗಣಿತ, ನೈತಿಕತೆ ಹಾಗೂ ತತ್ವಜ್ಞಾನ ಕುರಿತಾದ ಪುಸ್ತಕಗಳನ್ನೂ ಕನ್ನಡದ ಲೇಖಕರು ಬರೆದರು. ದಾಖಲಿತ ಇತಿಹಾಸದಿಂದ ೧,೦೦೦ಕ್ಕೂ ಅಧಿಕ ಲೇಖಕರನ್ನು ಗುರುತಿಸಬಹುದು - ಇದು, ಕನ್ನಡ ಸಾಹಿತ್ಯದ ಅಪಾರ ಸಂಪತ್ತಿನ ಕಲ್ಪನೆಯನ್ನು ಕಟ್ಟಿಕೊಡುತ್ತದೆ.

 

ಹಳೆ ಹಾಗೂ ನಡುಗನ್ನಡ ಸಾಹಿತ್ಯ

ಕನ್ನಡ ಸಾಹಿತ್ಯದ ಶ್ರೀಮಂತ ಸಂಪ್ರದಾಯದ ಕಿರು ಸಮೀಕ್ಷೆ ಕೈಗೊಂಡಾಗ ಹಲವಾರು ಮಾದರಿ ರೂಪ ಹಾಗೂ ಶೈಲಿಗಳನ್ನು ಬಳಸಿದ ಅನುಕ್ರಮದ ಬರಹಗಳು ಕನ್ನಡ ಭಾಷೆ ಹಾಗೂ ಸಾಹಿತ್ಯವನ್ನು ಸದೃಢಗೊಳಿಸಿತೆಂದು ತಿಳಿದುಬರುತ್ತದೆ. ಚಂಪೂ, ವಚನ, ರಗಳೆ, ಸಾಂಗತ್ಯ ಹಾಗೂ ಷಟ್ಪದಿಗಳಂತಹ ಸಾಹಿತ್ಯಕ ರೂಪಗಳು ಭಾಷೆಯ ರಚನೆಗೆ ವೈವಿಧ್ಯತೆ ಹಾಗೂ ಅದರ ಸಾಹಿತ್ಯಕ್ಕೆ ಸೌಂದರ್ಯವನ್ನೂ ನೀಡಿದವು. ಪುರಾಣ, ಇತಿಹಾಸ ಹಾಗೂ ಧಾರ್ಮಿಕ ಕಥೆಗಳಿಂದ ಅಥವಾ ಧರ್ಮಗ್ರಂಥಗಳಿಂದ ಪಡೆದುಕೊಂಡ ಕೇಂದ್ರ ವಿಷಯಗಳು ಕರ್ನಾಟಕ ಇತಿಹಾಸದ ವಿವಿಧ ಕಾಲಾವಧಿಯಲ್ಲಿ ಜನಪ್ರಿಯವಾಗಿದ್ದವು. ತಮ್ಮದೇ ಕಲಾತ್ಮಕ ಚಿಂತನೆ ಹಾಗೂ ಕಲ್ಪನೆಗಳ ಮೂಲಕ, ಹಳೆಯ ವಿಷಯಗಳ ಪುನಾರರಚನೆ ಮಾಡುವಲ್ಲಿ ಕನ್ನಡದ ಬರಹಗಾರರ ಮೌಲ್ಯವು ಅಡಗಿದೆ. ಸಾಹಿತ್ಯದ ಉತ್ತಮ ಕೃತಿಯಾಗಲು ಅಗತ್ಯವಾದ ಕಥಾವಸ್ತು ನಿರ್ಮಾಣ ಹಾಗೂ ಪಾತ್ರಚಿತ್ರಣಗಳಿಗೆ ಪಂಪ-ಭಾರತ ಹಾಗೂ ಗದಾಯುದ್ಧಗಳು ಉತ್ತಮ ಉದಾಹರಣೆಗಳಾಗಿವೆ. ಕಣ್ಣಿಗೆ ಕಟ್ಟುವಂಥ ಉತ್ಕಟಪಾತ್ರಗಳನ್ನು ರೂಪಿಸುವ ಸಾಮರ್ಥ್ಯ ಹೊಂದಿದ ಪಂಪ, ರನ್ನ, ನಾಗಚಂದ್ರ, ಹರಿಹರ, ಕುಮಾರವ್ಯಾಸ, ರತ್ನಾಕರವರ್ಣಿ ಮುಂತಾದವರು ಅತ್ಯದ್ಭುತ ಹಾಗೂ ಶ್ಲಾಘನೀಯ ಲೇಖಕರು. ಮಹಾಕಾವ್ಯದ ದುರ್ಯೋಧನ, ಕರ್ಣ, ರಾವಣ ಮುಂತಾದಂತಹ ಪಾತ್ರಗಳನ್ನು ತಮ್ಮದೇ ಆದ ನಿರ್ದಿಷ್ಟ ಶೈಲಿ ಹಾಗೂ ಕಲ್ಪನೆಗಳಿಂದ ಈ ಉತ್ಕೃಷ್ಟ ಬರಹಗಾರರು ನಿರೂಪಣೆ ಮಾಡಿದ್ದಾರೆ. 

ಜನಪ್ರಿಯ ಪದ್ಯ-ಗದ್ಯಗಳಿಗಿಂತ ಪ್ರಾಚೀನ ಕನ್ನಡ ಸಾಹಿತ್ಯದ ಮೇಲೆ ಸಂಸ್ಕೃತದ ಪ್ರಭಾವವು ಹೆಚ್ಚು ಎದ್ದು ಕಾಣುವಂತಿದೆ. ತಮ್ಮ ಕೃತಿಗಳ ಮೌಲ್ಯವನ್ನು ಹೆಚ್ಚಿಸಲು, ಪ್ರಾಚೀನ ಬರಹಗಾರರು ಸಂಸ್ಕೃತ ಪದ ಹಾಗೂ ನುಡಿಗಟ್ಟುಗಳನ್ನು ಧಾರಾಳವಾಗಿ ಬಳಕೆ ಮಾಡಿದ್ದಾರೆ.

 

ಆಧುನಿಕ ಕನ್ನಡ

೧೯ನೆಯ ಶತಮಾನದ ನಂತರದ ಭಾಗದಲ್ಲಿ ಪ್ರಾರಂಭವಾದ ಆಧುನಿಕ ಕನ್ನಡವು, ೨೦ನೆಯ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದಿತು.ಅನುವಾದ ಹಾಗೂ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ಮುದ್ರಣ ಹಾಗೂ ಶಿಕ್ಷಣದ ಹೆಚ್ಚಿನ ಹರಡುವಿಕೆಯಿಂದಾಗಿ ಕನ್ನಡ ಬರವಣಿಗೆಗೆ ವಿಸ್ತೃತ ಹರವು ದೊರಕಿತು. ಸಮಾಜದ ಎಲ್ಲ ವರ್ಗ ಹಾಗೂ ಜೀವನದ ಎಲ್ಲ ಸ್ತರಗಳಿಂದ ಬಂದ ಕನ್ನಡ ಬರಹಗಾರರನ್ನು ಇದು ಮತ್ತಷ್ಟು ಪೋಷಿಸಲು ನೆರವಾಯಿತು. ೨೦ನೆಯ ಶತಮಾನದ ಉತ್ತರಾರ್ಧದಲ್ಲಿ ಭಾಷೆಯಾಗಿ ಹಾಗೂ ಸಾಹಿತ್ಯವಾಗಿ ಕನ್ನಡವು ವೇಗವಾಗಿ ಪ್ರಗತಿ ಹೊಂದಿತು. ಮುಕ್ತವಾಗಿ ಹಾಗೂ ಭಾವೋದ್ವೇಗವಾಗಿ ಅಭಿವ್ಯಕ್ತಪಡಿಸುವ ಸ್ವಾತಂತ್ರ್ಯವು ಭಾಷೆಯ ಪ್ರಗತಿಯನ್ನು ಬಹಳಷ್ಟು ಹಂತದವರೆಗೂ ಕೊಂಡೊಯ್ಯಲು ನೆರವಾಯಿತು. ಕಾವ್ಯದ ಎರಡೂ ರೂಪಗಳು, ಅಂದರೆ ಪ್ರಣಯ ಹಾಗೂ ಅಧುನಿಕ ಕಾವ್ಯಗಳು, ಅಭಿವ್ಯಕ್ತತೆಯ ಸ್ವಾತಂತ್ರ್ಯ ಹಾಗೂ ವೈವಿಧ್ಯತೆಯ ಉತ್ತಮ ಬಳಕೆಯನ್ನು ಮಾಡಿದವು. ಬಾಹ್ಯ ಪ್ರಭಾವಗಳಿಂದ ಪ್ರೇರಿತವಾದ, ಆದರೆ ಭಾರತೀಯ ಸಂದರ್ಭಕ್ಕೆ ಅಳವಡಿಸಲಾದ ಹೊಸ ವಿಷಯಗಳು ಹಾಗೂ ಛಂದಸ್ಸುಗಳ ವಿಸ್ತೃತವಾದ ಬಳಕೆಯು, ಕನ್ನಡ ಸಾಹಿತ್ಯ ಮತ್ತಷ್ಟು ಬೆಳೆಯುವಂತೆ ಮಾಡಿದವು.

ಪುರಾತನ ಸಾಹಿತ್ಯಕ ರೂಪಗಳನ್ನು ಸಂಗ್ರಹ ಮಾಡುವಲ್ಲಿ ಕರ್ನಾಟಕದ ಜನರಲ್ಲಿ ನಿಶ್ಚಯವಾಗಿ ಅರಿವು ಹೆಚ್ಚುತ್ತಿದೆ. ಹಲವಾರು ಸಾರ್ವಜನಿಕ ಹಾಗೂ ಸರ್ಕಾರಿ ಸಂಸ್ಥೆಗಳು ಹಾಗೂ ವಿಶ್ವವಿದ್ಯಾನಿಲಯಗಳಿಂದ ಇದಕ್ಕೆ ನೆರವು ದೊರೆತಿದೆ.  ಧರ್ಮ, ಜಾತಿ ಹಾಗೂ ಕುಲಗಳಲ್ಲಿ ವಿಸ್ತೃತವಾದ ವೈವಿಧ್ಯತೆ ಇದ್ದರೂ, ಸಾಂಸ್ಕೃತಿಕ ವಲಯದಲ್ಲಿ ಕನ್ನಡ ಭಾಷೆಯು ಕರ್ನಾಟಕದ ಜನತೆಯನ್ನು ಯಶಸ್ವಿಯಾಗಿ ಒಂದುಗೂಡಿಸಿದೆ. ಕನ್ನಡದ ಕೆಲವು ಆಧುನಿಕ ಕೃತಿಗಳನ್ನು ಕಲೆ ಹಾಗೂ ಗುಣಗಳ ಮೇರುಕೃತಿ ಎಂದು ಪರಿಗಣಿಸಲಾಗಿದೆ. ಇವನ್ನು ಇತರ ಭಾರತೀಯ ಭಾಷೆಗಳೂ ಸೇರಿದಂತೆ ಆಂಗ್ಲ ಭಾಷೆಗೆ ಯಶಸ್ವಿಯಾಗಿ ಭಾಷಾಂತರಗೊಳಿಸಲಾಗಿದೆ, ಈ ರೀತಿಯಲ್ಲಿ ಕರ್ನಾಟಕವಷ್ಟೇ ಅಲ್ಲ, ಭಾರತದ ಭವ್ಯ ಸಾಹಿತ್ಯಕ ಸಂಪ್ರದಾಯಕ್ಕೂ ಇದು ಗಣನೀಯ ಕೊಡುಗೆಯನ್ನು ನೀಡಿದೆ. ಕ್ರಿ.ಶ. ೧೭೯೯ - ೧೮೩೧ರ ನಡುವೆ ರಾಜ್ಯವಾಳಿದ ಮೈಸೂರು ಮಹಾರಾಜರಾದ ಮೂರನೆಯ ಕೃಷ್ಣರಾಜ ಒಡೆಯರ ಕಾಲದಿಂದ ಆಧುನಿಕ ಕನ್ನಡದ ಹೊಸ ಚಳವಳಿಯು ಪ್ರಾರಂಭವಾಯಿತು.

ಮುಮ್ಮಡಿ ಕೃಷ್ಣರಾಜ ಒಡೆಯರು ತಮ್ಮ ಹಿಂದಿನವರ ಸಂಪ್ರದಾಯವನ್ನು ಮುಂದುವರಿಸಿದರು. ಅವರು ಸ್ವತಃ ಉತ್ತಮ ಬರಹಗಾರರಿದ್ದು, ಅನೇಕ ಲೇಖಕರಿಗೆ ಆಶ್ರಯವನ್ನು ನೀಡಿದರು.  ಕೆಂಪುನಾರಾಯಣನ ಮುದ್ರಾಮಂಜೂಷವನ್ನು ಇಲ್ಲಿ ವಿಶೇಷವಾಗಿ ಸ್ಮರಿಸಬೇಕಾಗಿದೆ. ಕ್ರಿ.ಶ. ೧೮೩೩ರಲ್ಲಿ ಒಡೆಯರ್‌ರವರು ಆಂಗ್ಲ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಿದರು. ಏತನ್ಮಧ್ಯೆ ಧರ್ಮಪ್ರಚಾರಕ ಚಟುವಟಿಕೆಗಳ ಹರಡುವಿಕೆಯು ಕನ್ನಡ ಸಾಹಿತ್ಯದ ಮೇಲೆ ಪಾಶ್ಚಿಮಾತ್ಯ ಪ್ರಭಾವದ ಹೆಚ್ಚಳಕ್ಕೆ ಕಾರಣವಾಯಿತು. ೧೯ನೆಯ ಶತಮಾನದ ಕೊನೆಯ ಎರಡು ದಶಕಗಳ ಚಾಮರಾಜ ಒಡೆಯರ ಆಳ್ವಿಕೆ ಹಾಗೂ ೨೦ನೆಯ ಶತಮಾನದ ಮೊದಲ ಎರಡು ದಶಕಗಳ ೪ನೆಯ ಕೃಷ್ಣರಾಜ ಒಡೆಯರರವರ ಆಳ್ವಿಕೆಯು ಕನ್ನಡ ಸಾಹಿತ್ಯದ ಹೊಸ ಯುಗಕ್ಕೆ ನಾಂದಿ ಹಾಡಿದವು. ಎಂ.ಎಸ್. ಪುಟ್ಟಣ್ಣನವರ ‘ಮಾಡಿದ್ದುಣ್ಣೋ ಮಹರಾಯʼ, ಡಿ. ವೆಂಕಟಾಚಲಯ್ಯ ಹಾಗೂ ಡಾ. ಬಿ.ವಿ. ವೆಂಕಟೇಶಯ್ಯನವರ ಪತ್ತೇದಾರಿ ಕಾದಂಬರಿಗಳಾದ ‘ಪರಿಮಳ’ ಹಾಗೂ ‘ಅರಿಂದಮನ ಸಾಹಸಗಳುʼ, ಗಳಗನಾಥರ ಸಾಮಾಜಿಕ ಹಾಗೂ ಚಾರಿತ್ರಿಕ ಕಾದಂಬರಿಗಳು, ಕಿಟ್ಟೆಲ್‌ರ ಕನ್ನಡ-ಆಂಗ್ಲ ನಿಘಂಟು, ಚ.ವಾಸುದೇವರಾಯರ ‘ಬಾಲಬೋಧೆ’ಗಳು ಈ ಕಾಲಕ್ಕೆ ಸೇರಿದವು.  ಬಿ. ವೆಂಕಟಾಚಾರ್ಯ ಹಾಗೂ ಗಳಗನಾಥರ ಬಹುತೇಕ ಚಾರಿತ್ರಿಕ ಕಾದಂಬರಿಗಳ ಅನುವಾದಗಳು ಓದುಗರ ಮೇಲೆ ಆಳವಾದ ಪ್ರಭಾವವನ್ನು ಬೀರಿದವು.

೧೯೨೧ರಲ್ಲಿ, ಬಿ.ಎಂ.ಶ್ರೀಕಂಠಯ್ಯನವರು ನವೋದಯ ಚಳುವಳಿಯ ಹರಿಕಾರರಾದರು. ಅವರ ‘ಇಂಗ್ಲೀಷ್ ಗೀತೆಗಳು’ ಎಂಬ ಕೃತಿಯು ಕೆಲವು ಮಹಾನ್ ಇಂಗ್ಲೀಷ್ ಕಾವ್ಯಗಳ ಮುಕ್ತ ಪ್ರಸ್ತುತಿಯಾಗಿದೆ.  ಈ ಅವಧಿಯಲ್ಲಿಯೇ, ಕೆ.ವಿ. ಪುಟ್ಟಪ್ಪನವರು (ಕುವೆಂಪು) ಆಂಗ್ಲಭಾಷೆಯಿಂದ ಕನ್ನಡ ಬರವಣಿಗೆಯನ್ನು ಪ್ರಾರಂಭಿಸಿದರು. ಸರಳ ರಗಳೆಯಲ್ಲಿ ಬರೆದ ‘ಶ್ರೀ ರಾಮಾಯಣ ದರ್ಶನಂ’ ಎಂಬ ಕೃತಿಯಲ್ಲಿ ಅವರ ಪ್ರತಿಭೆ ಹೊರಹೊಮ್ಮಿತು. ಅವರ ಸಾಮಾಜಿಕ ಕಾದಂಬರಿಗಳಾದ ‘ಕಾನೂರು ಸುಬ್ಬಮ್ಮ ಹೆಗ್ಗಡತಿ’ ಹಾಗೂ ‘ಮಲೆಗಳಲ್ಲಿ ಮದುಮಗಳು’, ಅಷ್ಟೇ ಖ್ಯಾತಿಯನ್ನು ಪಡೆದಿವೆ.  ಮೂವತ್ತರ ದಶಕದಲ್ಲಿ ಬಂದ ಕೃತಿಗಳಲ್ಲಿ, ಡಿ.ವಿ. ಗುಂಡಪ್ಪನವರ ‘ಮಂಕುತಿಮ್ಮನ ಕಗ್ಗವು ಹೊಳೆಯುವ ವಜ್ರದಂತೆ. ಅದನ್ನು ಅಪರೂಪವಾದ ಕೃತಿಯೆಂದು ಪರಿಗಣಿಸಲಾಗಿದೆ. ಏಕೆಂದರೆ ಅದು ನೈತಿಕ ತತ್ವ, ತಾತ್ವಿಕ ಸತ್ಯ ಹಾಗೂ ಜೀವನಾನುಭವಗಳನ್ನು ಒಳಗೊಂಡಿದೆ. ಸಂಸ ಅವರು ಹಳೆಗನ್ನಡದಲ್ಲಿ ಹಲವಾರು ನಾಟಕಗಳನ್ನು ಬರೆದಿದ್ದಾರೆ, ಅವುಗಳಲ್ಲಿ ಉತ್ತಮ ಉದಾಹರಣೆಯೆಂದರೆ ‘ವಿಗಡ ವಿಕ್ರಮರಾಯ’.

ಅತ್ಯುತ್ತಮ ಲೇಖಕರಿಗೆ ನೀಡುವ ಪ್ರತಿಷ್ಠಿತ ಭಾರತೀಯ ಜ್ಞಾನಪೀಠ ಪ್ರಶಸ್ತಿಯನ್ನು ಅತ್ಯಧಿಕ ಸಂಖ್ಯೆಯಲ್ಲಿ ಪಡೆದುಕೊಂಡ ಅಪರೂಪದ ಹೆಗ್ಗಳಿಕೆಯು ಕನ್ನಡ ಸಾಹಿತ್ಯಕ್ಕೆ ಸಲ್ಲುತ್ತದೆ. ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಹಾಗೂ  ಚಂದ್ರಶೇಖರ ಕಂಬಾರರನ್ನು ಹೊರತುಪಡಿಸಿ, ಎಂಟರಲ್ಲಿ ಮಿಕ್ಕ ಐದು ಜ್ಞಾನಪೀಠ ಪ್ರಶಸ್ತಿ ವಿಜೇತರೆಂದರೆ- ಕುವೆಂಪು, ದ.ರಾ.ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹಾಗೂ ವಿ.ಕೃ. ಗೋಕಾಕ್ ಅವರು - ನವೋದಯ ಕಾಲದಿಂದ ಬರೆಯುತ್ತಿದ್ದವರು.  ತಮ್ಮ ತತ್ವ ಜಿಜ್ಞಾಸೆಯ  ಕಾವ್ಯಕೃತಿಯಾದ ‘ನಾಕುತಂತಿ’ ಕೃತಿಗೆ ದ.ರಾ.ಬೇಂದ್ರೆಯವರಿಗೆ ಪ್ರಶಸ್ತಿ ಬಂದರೂ, ಜಾನಪದ ಸಂಸ್ಕೃತಿಯಿಂದ ಪಲ್ಲವಿಸಿದ ಬರಹಗಳಿಂದ ಅವರ ಜನಪ್ರಿಯತೆಯು ಹೆಚ್ಚು ನಿಂತಿದೆ. ವಿಶ್ವಕೋಶದಿಂದ ಹಿಡಿದು, ಕಾದಂಬರಿ, ಪ್ರಬಂಧ, ನಾಟಕ ಹಾಗೂ ಕಾವ್ಯಗಳವರೆಗೂ ಶಿವರಾಮ ಕಾರಂತರ ಬರವಣಿಗೆಯು ವಿಸ್ತರಿಸಿದೆ. ಅವರ ಕಾದಂಬರಿಗಳ ಪೈಕಿ, ಮರಳಿ ಮಣ್ಣಿಗೆ ಎಂಬ ಕೃತಿ ಕುರಿತಾಗಿ ಹೆಚ್ಚು ಮಾತನಾಡಿದರೂ ಬೆಟ್ಟದ ಜೀವ, ಚೋಮನ ದುಡಿ ಹಾಗೂ ಮೂಕಜ್ಜಿಂಯ ಕನಸುಗಳು ಕೃತಿಗಳೂ ಕೂಡ ಗಮನಾರ್ಹವಾದವು. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರನ್ನು ಮುಖ್ಯವಾಗಿ ಸಣ್ಣ ಕಥೆಗಳ ಬರಹಗಾರರೆಂದು ಗುರುತಿಸಲಾಗಿದೆ. ಅವರ ಚನ್ನಬಸವ ನಾಯಕ ಹಾಗೂ ಚಿಕ್ಕವೀರರಾಜೇಂದ್ರ, ಚಾರಿತ್ರಿಕ ಕೃತಿಗಳಾಗಿದ್ದು, ಅದು ರಾಜಪ್ರಭುತ್ವದ ಅವನತಿಯ ವಿಷಯವನ್ನು  ಒಳಗೊಂಡಿದೆ; ಸುಬ್ಬಣ್ಣ ಎಂಬುದು ದೀರ್ಘ ಕಥೆಯಾಗಿ ತತ್ವಜಿಜ್ಞಾಸೆಯ ಎತ್ತರವನ್ನು ತಲುಪುತ್ತದೆ. ನವೋದಯ ಕವಿಯಾಗಿ ತಮ್ಮ ಬರವಣಿಗೆಯನ್ನು ಪ್ರಾರಂಭಿಸಿದ ವಿ.ಕೃ.ಗೋಕಾಕ್ ಅವರು, ತಮ್ಮ ಮೇರು ಕೃತಿ ‘ಭಾರತ ಸಿಂಧು ರಶ್ಮಿ’ಯಲ್ಲಿ, ಆಧುನಿಕ ಮಾನವನ ತೊಳಲಾಟಗಳಿಗೆ ಪುರಾತನ ಮಹಕಾವ್ಯಗಳಲ್ಲಿ ಉತ್ತರಗಳನ್ನು ಹುಡುಕುವ ಪ್ರಯತ್ನಗಳನ್ನು ಮಾಡಿದ್ದಾರೆ. ಗಮನಾರ್ಹ ಅಂಶವೆಂದರೆ ಯು. ಆರ್.ಅನಂತಮೂರ್ತಿಯ ‘ಸಂಸ್ಕಾರ’ವೂ ಪುರಾತನ ಮಹಾಕಾವ್ಯಗಳಿಂದ ಪ್ರೇರಣೆಯನ್ನು ಪಡೆದುದಾಗಿರುವುದು.  ಮೂಲಭೂತವಾಗಿ, ಗಿರೀಶ್ ಕಾರ್ನಾಡರು ನಾಟಕಕಾರರಾಗಿದ್ದು, ಅವರ ನಾಟಕಗಳನ್ನು ವಿಶ್ವದಾದ್ಯಂತ  ಪ್ರದರ್ಶಿಸಲಾಗಿದ್ದು ಹಲವಾರು ಭಾರತೀಯ ಹಾಗೂ ವಿದೇಶೀ ಭಾಷೆಗಳಿಗೆ ಭಾಷಾಂತರಿಸಲಾಗಿದೆ. 

ಪ್ರೇಮ ಹಾಗೂ ವಿರಹದ ವಿಷಯಗಳನ್ನು ಒಳಗೊಂಡ ಕವನಗಳ ಸಂಗ್ರಹವಾದ ಕೆ.ಎಸ್. ನರಸಿಂಹ ಸ್ವಾಮಿಯವರ ಮೈಸೂರು ಮಲ್ಲಿಗೆಯು, ನವೋದಯ ಕಾಲದ ಹೆಗ್ಗುರುತಾಗಿದೆ. ಕುಡುಕನ ಅಸಂಬದ್ಧ ಪ್ರಲಾಪದಲ್ಲಿ ಸತ್ಯ ಹಾಗೂ ಸೌಂದರ್ಯವನ್ನು ಕಾಣುವ ಮೂಲಕ, ಜಿ.ಪಿ.ರಾಜರತ್ನಂ ಅವರ ‘ರತ್ನನ ಪದಗಳು’ ವಿಶ್ವ ಸಾಹಿತ್ಯದಲ್ಲಿ ಅನನ್ಯ ಸ್ಥಾನವನ್ನು ಗಳಿಸಿದೆ.  ಪು.ತಿ.ನರಸಿಂಹಾಚಾರ್ಯರ ‘ಗೋಕುಲ ನಿರ್ಗಮನ’ ಕೃಷ್ಣ-ರಾಧೆಯರ ವಿರಹದ ವಿಷಯವನ್ನು

ಒಳಗೊಂಡಿದ್ದು, ಇದೂ ಸಹ ಆಧ್ಯಾತ್ಮಿಕ ಔನ್ನತ್ಯವನ್ನು ಸಾಧಿಸಿದೆ. ಗೋರೂರು ರಾಮಸ್ವಾಮಿ ಅಯ್ಯಂಗಾರ್ ಗ್ರಾಮೀಣ ಕರ್ನಾಟಕದ ಜನಜೀವನವನ್ನು ಚಿತ್ರಿಸಲು ಪ್ರಬಂಧದ ರೂಪವನ್ನು ಅನುಸರಿಸಿದ್ದಾರೆ. ‘ಹಳ್ಳಿಯ ಚಿತ್ರಗಳು’, ಅವರ ಬರವಣಿಗೆಗೆ ಉತ್ತಮ ಉದಾಹರಣೆಯಾಗಿದೆ. ಎ.ಎನ್.ಮೂರ್ತಿರಾಯರ ‘ಹಗಲುಗನಸುಗಳು’ ಹಾಗೂ ಎಮ್.ಆರ್.ಶ್ರೀನಿವಾಸಮೂರ್ತಿಗಳ ‘ರಂಗಣ್ಣನ ಕನಸಿನ ದಿನಗಳು’ ಕೃತಿಗಳಲ್ಲಿ ಈ ಸಂಪ್ರದಾಯವನ್ನು ಮುಂದುವರಿಸಲಾಯಿತು.

ಈ ಅವಧಿಯಲ್ಲಿ ಸಾಹಿತ್ಯ ವಿಮರ್ಶೆಯ ಕೃತಿಗಳ ಮಹಾಪೂರವೇ ಹರಿಯಿತು. ಇವುಗಳ ಪೈಕಿ, ತೀ.ನಂ.ಶ್ರೀಕಂಠಯ್ಯನವರ ‘ಭಾರತೀಯ ಕಾವ್ಯ ಮೀಮಾಂಸೆಯನ್ನು ಶ್ರೇಷ್ಠವೆಂದು ಪರಿಗಣಿಸಲಾಗಿದೆ. ‘ಪ್ರಬುದ್ಧ ಕರ್ನಾಟಕ’ ಎಂಬ ನಿಯತಕಾಲಿಕವನ್ನು ಹೊರತಂದ ಸೆಂಟ್ರಲ್ ಕಾಲೇಜ್‌ನ ಕನ್ನಡ ಸಂಘದ ಮೂಲಕ ಎ.ಆರ್.ಕೃಷ್ಣಶಾಸ್ತ್ರಿಗಳು ಒಂದು ತಲೆಮಾರಿನ ಬರಹಗಾರರಿಗೆ ಸಂಪೂರ್ಣ ಪ್ರೋತ್ಸಾಹ ನೀಡಿದರು; ನಂತರ, ಈ ನಿಯತಕಾಲಿಕದ ಪ್ರಕಟಣೆಯನ್ನು ಮೈಸೂರು ವಿಶ್ವವಿದ್ಯಾನಿಲಯವು ಮುಂದುವರೆಸಿತು. ‘ರಂಗಬಿನ್ನಪ’ದ ಮೂಲಕ ತಮ್ಮನ್ನು ಕನ್ನಡ ಬರಹಗಾರರಾಗಿ ಸ್ಥಾಪಿಸಿಕೊಂಡ ಆಂಗ್ಲ ಪ್ರೊ.ಸರ್ ಎಸ್.ವಿ. ರಂಗಣ್ಣನವರು ವಿಭಿನ್ನ ಶೈಲಿ ಹಾಗೂ ರುಚಿಗಳಲ್ಲಿ ಸಾಹಿತ್ಯ ವಿಮರ್ಶೆಯನ್ನು ಬರೆದರು, 'ಹಣ ಪ್ರಪಂಚ ಎಂಬ ಆರ್ಥಿಕ ಪ್ರಕರಣ ಗ್ರಂಥ ಅಥವಾ ಪ್ರಬಂಧದಿಂದ ಹಿಡಿದು, ‘ಪಂಪ ಯಾತ್ರೆ’ಯೆಂಬ ಪ್ರವಾಸ ಕಥನ,ಕಾವ್ಯ ಹಾಗೂ ಸಾಹಿತ್ಯ ವಿಮರ್ಶೆಯವರೆಗಿನ ಹಲವಾರು ರೀತಿಯ ಬರವಣಿಗೆಗಳನ್ನು ರಚಿಸಿದರು. ಕನ್ನಡ ಸಾಹಿತ್ಯದ ಸಂಕ್ಷಿಪ್ತ ಹಾಗೂ ಸಮತೋಲಿತ ಇತಿಹಾಸವಾಗಿ ರಂ.ಶಿ. ಮುಗಳಿ ಅವರು ‘ಕನ್ನಡ ಸಾಹಿತ್ಯ ಚರಿತ್ರೆಯನ್ನು ಬರೆದರು.

ನಲವತ್ತರ ದಶಕದ ಮಧ್ಯಭಾಗದಲ್ಲಿ, ನವೋದಯ ಚಳವಳಿಯು ಪ್ರಗತಿಶೀಲ ಚಳವಳಿಗೆ ದಾರಿ ಮಾಡಿಕೊಟ್ಟಿತು. ವಾಸ್ತವದಿಂದ ದೂರ ಉಳಿದ ಬರಹಗಾರರನ್ನು ಅ.ನ. ಕೃಷ್ಣರಾಯರು ಈ ಚಳವಳಿಯೊಂದಿಗೆ ಜೋಡಿಸಿದ ರೂವಾರಿಯಾದರು.  ಅ.ನ. ಕೃಷ್ಣರಾಯರ ಕಿರು ಕಥೆಗಳು ಈ ಶೈಲಿಯ ಬರವಣಿಗೆಗೆ ಉತ್ತಮ ಉದಾಹರಣೆಗಳಾಗಿದ್ದು ಜನಪ್ರಿಯ ಕಾದಂಬರಿಗಳಾದ ‘ಸಂಧ್ಯಾರಾಗ’, ‘ಉದಯರಾಗ’, ‘ನಟ ಸಾರ್ವಭೌಮ’, ‘ಗೃಹಿಣಿ’ ‘ಕಣ್ಣೀರು’ ಮುಂತಾದ ಕೃತಿಗಳ ಮೂಲಕ ಅವರು ಹೆಸರುವಾಸಿಯಾಗಿದ್ದಾರೆ.  ಉತ್ತರ ಕರ್ನಾಟಕದ ಬಸವರಾಜ ಕಟ್ಟೀಮನಿಯವರು ‘ಕಾವಿ ಹಾಗೂ ಖಾಕಿ’ ವಸ್ತ್ರಗಳ ಹಿಂದಿನ ಗುಪ್ತಪ್ರಪಂಚವನ್ನೂ ‘ನೀ ನನ್ನ ಮುಟ್ಟಬೇಡ’, ‘ಶಿವದಾರ ಜನಿವಾರ’ ಹಾಗೂ ‘ನಾನೂ ಪೋಲೀಸನಾಗಿದ್ದೆ’ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ಪ್ರಗತಿಪರ ಬರಹಗಾರರಾದ ತ.ರಾ.ಸು ಅವರು ‘ಹಂಸಗೀತೆ’, ‘ಮಸಣದ ಹೂವು’ ಹಾಗೂ ‘ಮುಂಜಾವಿಂದ ಮುಂಜಾವು’ ಎಂಬ ಕಾದಂಬರಿಗಳನ್ನು ಬರೆದರು. ಆದರೆ ಅವರ ಜನ್ಮಸ್ಥಳವಾದ ಚಿತ್ರದುರ್ಗದ ಸುತ್ತ ಹೆಣೆದ ಐತಿಹಾಸಿಕ ಕಾದಂಬರಿಗಳಲ್ಲಿ ಅವರ ಬಲ-ಸಾಮರ್ಥ್ಯಗಳನ್ನು ಕಂಡುಕೊಂಡರು; ಅವರ ಬರವಣಿಗೆಯ ಅತ್ಯುತ್ತಮ ಉದಾಹರಣೆಯನ್ನು ದುರ್ಗಾಸ್ತಮಾನದಲ್ಲಿ ನೋಡಬಹುದು.  ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯ ಕಮ್ಯುನಿಸ್ಟ್ ಆಗಿದ್ದ ನಿರಂಜನ ಅವರು ವಾಸ್ತವಕ್ಕೆ ಹತ್ತಿರವಾದ ಕಾದಂಬರಿಗಳಾದ ‘ದೂರದ ಬೆಟ್ಟ’ ‘ರಂಗಮ್ಮನ ವಠಾರ’, ಹಾಗೂ ಕೃಷಿ ಚಳುವಳಿ ಆಧಾರಿತ ಹೊಂದಿದ ‘ಚಿರಸ್ಮರಣೆ’ಗಳನ್ನು ಬರೆದರೂ ಈಜಿಪ್ತಿನ ಇತಿಹಾಸದ ವಿಷಯವನ್ನು ಒಳಗೊಂಡ ‘ಮೃತ್ಯುಂಜಯ’ ಕಾದಂಬರಿಯನ್ನು ಅವರ ಮೇರು ಕೃತಿಯೆಂದು ಪರಿಗಣಿಸಲಾಗಿದೆ.  ವಿವಾಹೇತರ ಪ್ರೇಮ ಸಂಬಂಧಗಳ ವಿಷಯವನ್ನು ಹೊಂದಿದ ‘ಸರ್ವಮಂಗಳ’ ಹಾಗೂ ‘ಉಯ್ಯಾಲೆ’ ಕೃತಿಗಳನ್ನು ಚದುರಂಗರು  ರಚಿಸಿದರು. ಸ್ವಾರಸ್ಯವೆಂದರೆ, ಹಲವಾರು ದಶಕಗಳ ನಂತರ ಬರೆದ, ಗ್ರಾಮೀಣ ಹಿನ್ನೆಲೆಯನ್ನು ಹೊಂದಿರುವ ಅವರ ‘ವೈಶಾಖ’ ಮತ್ತು ‘ಹೆಜ್ಜಾಲ’ ಎಂಬ ಕಾದಂಬರಿಗಳೂ ಇದೇ ವಿಷಯವನ್ನು ಕುರಿತದ್ದಾಗಿವೆ.

ಬರಹಗಾರ್ತಿಯರ ಕೃತಿಗಳ ಪೈಕಿ, ತ್ರಿವೇಣಿಯವರ ಕಾದಂಬರಿಗಳಾದ ಬೆಕ್ಕಿನ ಕಣ್ಣು, ಶರಪಂಜರ ಹಾಗೂ ಮುಚ್ಚಿದ ಬಾಗಿಲು, ಮೂಲಭೂತವಾಗಿ ಮಾನಸಿಕ ವಿಶ್ಲೇಷಣೆಗಳಾಗಿದ್ದವು. ಅರಣ್ಯದಲ್ಲೊಂದು ಅರಗಿಣಿ ಎಂಬಂತಹ ಕಥೆಗಳಲ್ಲಿ, ವೈದ್ಯೆಯಾಗಿ ತಮ್ಮ ಸಿರಿವಂತ ಅನುಭವದಿಂದ ಅನುಪಮಾರವರು ವಿಷಯಗಳನ್ನು ಪಡೆದುಕೊಂಡರು. ‘ಫಣಿಯಮ್ಮ’ದಂತಹ ಕಾದಂಬರಿಗಳಲ್ಲಿ ಮಲೆನಾಡಿನ ಜೀವನವನ್ನು ಚಿತ್ರಿಸಿರುವ ಎಂ.ಕೆ.ಇಂದಿರಾ ಅವರ ಬಲವೂ ಇದೇ ಆಗಿತ್ತು. ಇವರೆಲ್ಲರೂ ಪ್ರಗತಿಪರ ಚಳವಳಿಯ ಭಾಗವಾಗಿದ್ದರು.

ಪ್ರಗತಿಪರ ಚಳವಳಿಯ ನಂತರ ಬಂದದ್ದು ನವ್ಯ ಚಳವಳಿ. ಇದು ಬಹುತೇಕ ಯುದ್ಧಾ-ನಂತರದ ಆಂಗ್ಲ ಬರಹಗಾರರಾದ ಟಿ.ಎಸ್.ಎಲಿಯಟ್, ಆಡೆನ್, ಎಜ್ರಾ ಪೌಂಡ್, ಡಿ.ಎಚ್.ಲಾರೆನ್ಸ್, ಸಾರ್ತ್ರ ಹಾಗೂ ಕಾಮು ಮುಂತಾದವರಿಂದ ಪ್ರಭಾವಿತವಾಯಿತು. ಗೋಪಾಲಕೃಷ್ಣ ಅಡಿಗರು ಈ ನವ್ಯ ಚಳವಳಿಯ ಪ್ರಪ್ರಥಮ ಪ್ರತಿಪಾದಕರಾಗಿದ್ದು ಅವರ ಭೂಮಿಗೀತ, ಟಿ.ಎಸ್.ಎಲಿಯಟ್‌ರ ‘ವೇಸ್ಟ್ ಲ್ಯಾಂಡ್’ನಿಂದ ಪ್ರಭಾವಿತವಾಗಿದೆ ಎಂದು ಹೇಳಲಾಗಿದೆ.ಪಿ. ಲಂಕೇಶರ ಕಥಾ ಸಂಗ್ರಹ ಕುರುಡು ಕಾಂಚಾಣ ಹಾಗೂ ಅವರ ಹಾಸ್ಯ ನಾಟಕವಾದ ತೆರೆಗಳು, ಶ್ರೀಕೃಷ್ಣ ಆಲನಹಳ್ಳಿಯವರ ನೀಳ್ಗತೆ ‘ಕಾಡು’, ಶಾಂತಿನಾಥ ದೇಸಾಯಿಯವರ ‘ವಿಕ್ಷೇಪ’, ಪೂರ್ಣಚಂದ್ರ ತೇಜಸ್ವಿಯವರ ‘ನಿಗೂಢ ಮನುಷ್ಯರು’, ನಿಸ್ಸಾರ್ ಅಹ್ಮದ್‌ರ ಕವನಗಳಾದ ‘ಮಾಸ್ತಿ’ ಹಾಗೂ ‘ರಾಮ ಸತ್ತ ದಿನ’, ಯು.ಆರ್.ಅನಂತಮೂರ್ತಿ ಅವರ ಕಥೆಗಳಾದ ‘ಪ್ರಶ್ನೆ’ ಹಾಗೂ ‘ಕ್ಲಿಪ್ ಜಾಯಿಂಟ್’, ಯಶವಂತ ಚಿತ್ತಾಲರ ‘ಶಿಕಾರಿ’ ಹಾಗೂ ವ್ಯಾಸರಾಯ ಬಲ್ಲಾಳರ ‘ಬಂಡಾಯ’ ಮುಂತಾದ ಕೃತಿಗಳು ಕನ್ನಡದ ನವ್ಯ ಬರಹಗಳ ಕೆಲವು ಉದಾಹರಣೆಗಳು. ಜಾನಪದ ಕಾವ್ಯದ ಪದಪ್ರಯೋಗ ಹಾಗೂ ಧಾಟಿ ಗಳ ಮೇಲಿನ ಹಿಡಿತವನ್ನು ಬಳಸಿಕೊಂಡು, ಸಂಪ್ರದಾಯ ಹಾಗೂ ನೂತನ ಸಂಸ್ಕೃತಿಯ ನಡುವೆ ಸಿಲುಕಿಕೊಂಡ ಜೀವನದ ಒತ್ತಡಗಳನ್ನು ಕಂಬಾರರು ಅನಾವರಣಗೊಳಿಸಿದ್ದಾರೆ . ಕವಿ, ಕಾದಂಬರಿಕಾರ ಹಾಗೂ ನಾಟಕಾರರಾಗಿ ಅವರ ಛಾಪನ್ನು ಮೂಡಿಸಿದ್ದಾರೆ. ಅವರ ‘ಜೋಕುಮಾರಸ್ವಾಮಿ’ಯು ಅತ್ಯಂತ ಜನಪ್ರಿಯ ನಾಟಕವಾಗಿದೆ. ಅತ್ಯದ್ಭುತ ಕವಿಯಾದ ಎ.ಕೆ. ರಾಮಾನುಜನ್‌ರವರು ತೋರಿಕೆಯ ಅನಾದರದೊಂದಿಗೆ ಸ್ಪಷ್ಟ ಸ್ಫುಟವಾದ ಚಿತ್ರಣಗಳನ್ನು ಪ್ರಸ್ತುತ ಪಡಿಸಿದ್ದಾರೆ. ವಂಶವೃಕ್ಷ ಕಾದಂಬರಿಯೊಂದಿಗೆ ಪ್ರಸಿದ್ಧಿಯನ್ನು ಪಡೆದ ಎಸ್.ಎಲ್.ಭೈರಪ್ಪನವರು, ಯಾವುದೇ ಚೌಕಟ್ಟಿಗೂ ಸಿಲುಕದಂತೆ ಎಚ್ಚರ ವಹಿಸಿರುವ ಒಬ್ಬ ಲೇಖಕರು. ಅವರ ಕೆಲವು ಪ್ರಸಿದ್ಧ ಕೃತಿಗಳ ಪೈಕಿ, ಅನ್ವೇಷಣೆ, ಗೃಹಭಂಗ, ತಬ್ಬಲಿಯು ನೀನಾದೆ ಮಗನೆ, ತಂತು, ನೆಲೆ, ಮಂದ್ರ, ಸಾರ್ಥ, ಕವಲು ಹಾಗೂ ‘ಆವರಣ’ ಸೇರಿವೆ.

ನವ್ಯ-ನಂತರದ ಸಾಹಿತ್ಯವನ್ನು ಕೆಲವೊಮ್ಮೆ ನವ್ಯೋತ್ತರ ಸಾಹಿತ್ಯ, ಬಂಡಾಯ ಸಾಹಿತ್ಯ ಅಥವಾ ದಲಿತ ಸಾಹಿತ್ಯವೆಂದೂ ಕರೆಯಲಾಗುತ್ತದೆ.ಈ ಚಳವಳಿಗೆ ಸೇರಿದ ಬರಹಗಾರರು, ತಮ್ಮ ಕಷ್ಟ-ಕಾರ್ಪಣ್ಯಗಳ ಕುರಿತಾಗಿ ಕೇವಲ ದಲಿತರು ಮಾತ್ರ ನೈಜವಾಗಿ ಬರೆಯಬಹುದೇ ವಿನಃ, ಇತರರು ಎಷ್ಟೇ ಮನ ನಾಟುವಂತೆ ಬರೆದರೂ, ಅದು ದ್ವಿತೀಯ ಮೂಲದ ಅನುಭವವಾಗಿಯೇ ಉಳಿಯುವುದೆಂದು ಬಲವಾಗಿ ನಂಬಿದ್ದಾರೆ. ತಮ್ಮನ್ನು ತಾವು ಯಾವುದೇ ‘ಇಸಂ’ನೊಂದಿಗೆ ಗುರುತಿಸಿಕೊಳ್ಳಲು ಇಚ್ಛಿಸದ ದೇವನೂರು ಮಹಾದೇವ ದಲಿತ ಸಾಹಿತ್ಯದ ಕೆಲವು ಅತ್ಯುತ್ತಮ ಕೃತಿಗಳನ್ನು ಬರೆದಿದ್ದಾರೆ. ಅವರ ‘ಒಡಲಾಳ’ ಹಾಗೂ ‘ಕುಸುಮ ಬಾಲೆ’ಗಳು ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಂಡಿವೆ. ಚನ್ನಣ್ಣ ವಾಲೀಕಾರ, ಸಿದ್ದಲಿಂಗಯ್ಯ, ಬಿ.ಟಿ. ಲಲಿತಾ ನಾಯಕ್, ಅರವಿಂದ ಮಾಲಗತ್ತಿ ಹಾಗೂ ಗೀತಾ ನಾಗಭೂಷಣರಂತಹ ಬರಹಗಾರರು, ತಮ್ಮ ದಲಿತ ಸಾಹಿತ್ಯ ಕೃತಿಗಳಿಗಾಗಿ ಹೆಸರುವಾಸಿಯಾಗಿದ್ದಾರೆ. ಇಂತಹ ಯಾವುದೇ ರೀತಿಯ ಚಳವಳಿಯು ಪ್ರಾರಂಭವಾಗುವ ಮುನ್ನವೇ, ದಲಿತ ಜನರ ಕಷ್ಟ-ಕಾರ್ಪಣ್ಯ ಹಾಗೂ ಅವರ ಸಂತಸಗಳನ್ನು ಕುರಿತಾಗಿ ೧೯೪೦ರಷ್ಟು ಮೊದಲೇ, ಮದ್ದೂರು ತಾಲ್ಲೂಕಿನ ಜಿ. ವೆಂಕಟಯ್ಯನವರು ಕೆಲವು ಪುಸ್ತಕಗಳನ್ನು ಬರೆದಿದ್ದಾರೆ.

ದಲಿತ ಚಳವಳಿಯ ನಂತರ, ಮಹಿಳಾ ಚಳವಳಿಯು ಪ್ರಾರಂಭವಾಯಿತು. ಮಹಿಳಾ ಬರಹಗಾರರು ಪ್ರತ್ಯೇಕ ಮಜಲು ಹಾಗೂ ದೃಷ್ಟಿಕೋನವನ್ನು ಹೊಂದಿದ, ತಮ್ಮದೇ ಆದ ಅನುಭವಗಳನ್ನು  ಸ್ವತಂತ್ರವಾಗಿ ಬರೆಯಲು ಪ್ರಾರಂಭಿಸಿದರು.  ಸಮಾಜದಲ್ಲಿ ಪುರುಷರ ಸಾರ್ವಭೌಮತ್ವವನ್ನು ಅವರು ಪ್ರಶ್ನೆ ಮಾಡಿದ್ದು ಮಾತ್ರವಲ್ಲದೆ, ಪುರುಷರೊಂದಿಗೆ ಸಮಾನತ್ವವನ್ನು ಸಾಧಿಸಲು ಯತ್ನಿಸಿದರು. ೪೨ ವರ್ಷಗಳ ಕಾಲ ‘ಸರಸ್ವತಿ’ ಎಂಬ ಮಾಸಿಕವನ್ನು ಪ್ರಕಟಿಸಿದ ಆರ್. ಕಲ್ಯಾಣಮ್ಮ, ‘ಸತಿ ಹಿತೈಷಿಣಿ' ಹಾಗೂ ನಂತರ ‘ಕರ್ನಾಟಕ ನಂದಿನಿ’ಯನ್ನು ಪ್ರಕಟಿಸಿದ ನಂಜನಗೂಡು ತಿರುಮಲಾಂಬ, ಮಹಿಳೆಯರಿಗಾಗಿ ಆಧುನಿಕ ಶಿಕ್ಷಣದ ಕನಸನ್ನು ಕಂಡ ಸರಸ್ವತಿ ಬಾಯಿ ರಾಜವಾಡೆ (ಗಿರಿ ಬಾಲೆ), ಕೊಡಗಿನ ಗೌರಮ್ಮ, ಬೆಳಗೆರೆ ಜಾನಕಮ್ಮ, ಶ್ಯಾಮಲ ದೇವಿ ಬೆಳಗಾಂವ್‌ಕರ್ ಹಾಗೂ ಇತರರು ೮೦ ರ ದಶಕದಲ್ಲಿ ಹಾಗೂ ನಂತರ, ತಮ್ಮ ಮಹಿಳಾವಾದಿ ಬರವಣಿಗೆಗಳ ಮೂಲಕ ಪ್ರಾಮುಖ್ಯತೆಯನ್ನು ಪಡೆದರು. ಈ ಅವಧಿಯಲ್ಲಿ, ಅನೇಕ ಕವಯತ್ರಿಯರು ಇದ್ದರು. ಈ ಚಳವಳಿ ಮಹಿಳೆಯರಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹುಟ್ಟು ಹಾಕಿದ ಮಹತ್ವದ ಚಳವಳಿಯಾಗಿದೆ.

ಎಂ.ಕೆ. ಇಂದಿರಾ ಅವರ ಫಣಿಯಮ್ಮ, ವಿಜಯಾ ದಬ್ಬೆ ಅವರ ‘ಇತಿಗೀತಿಕೆ’, ವೀಣ ಶಾಂತೇಶ್ವರ ಅವರ ‘ಗಂಡಸರು’, ಸಾರಾ ಅಬೂಬಕರ್ ಅವರ ‘ಸಹನ’, ಎಚ್.ವಿ. ಸಾವಿತ್ರಮ್ಮನವರ ‘ಸೀತ ರಾಮ ರಾವಣ’ ಮುಂತಾದವು ಶ್ಲಾಘನೀಯ ಕೃತಿಗಳಾಗಿವೆ. ೧೯೭೮ರಲ್ಲಿ ಸ್ಥಾಪನೆಗೊಂಡ ಕರ್ನಾಟಕ ಲೇಖಕಿಯರ ಸಂಘವು, ಸಾಮಾಜಿಕ ಮೌಲ್ಯಗಳಿಗೆ ಮಹಿಳಾವಾದದ ಲೇಪನವನ್ನು ನೀಡಿ ಮಹಿಳೆಯರ ಕೃತಿಗಳಲ್ಲಿ ಅದನ್ನು ಪ್ರತಿಬಿಂಬಿಸುವ ಮೂಲಕ, ಪ್ರಮುಖ ಪಾತ್ರವನ್ನು ವಹಿಸಿತು. ಬಿ.ಎನ್. ಸುಮಿತ್ರಾಬಾಯಿ ಹಾಗೂ ಎನ್. ಗಾಯತ್ರಿ ಅವರು ಸಂಪಾದಿಸಿದ ‘ಸ್ತ್ರಿÃವಾದಿ ಪ್ರವೇಶಿಕೆ’ಯು ಗಮನಾರ್ಹವಾದುದು. ಮಹಿಳಾ ದೃಷ್ಟಿಕೋನದಿಂದ ಹಲವಾರು ಮಹಿಳೆಯರು ವಿವಿಧ ಕ್ಷೇತ್ರಗಳ ಬಗ್ಗೆ ಪುಸ್ತಕಗಳನ್ನು ಬರೆದರು. ಅವರ ಪೈಕಿ, ಹೇಮಲತಾ ಮಹಿಷಿ (ಕಾನೂನು), ಎಚ್.ಗಿರಿಜಮ್ಮ ಹಾಗೂ ಲೀಲಾವತಿ ದೇವದಾಸ (ಆರೋಗ್ಯ), ವಿಜಯಾ ಹಾಗೂ ಎಸ್. ಮಾಲತಿ (ನಾಟಕರಂಗ), ನೇಮಿಚಂದ್ರ (ವಿಜ್ಞಾನ ಹಾಗೂ ಕಾದಂಬರಿ) ಹಾಗೂ ವೈದೇಹಿ (ಕಾದಂಬರಿ) ಇದ್ದಾರೆ. ಬಿ.ಎನ್. ಸುಮಿತ್ರಾಬಾಯಿ, ವಿಜಯಾ ದಬ್ಬೆ ಹಾಗೂ ಇತರ ಅನೇಕರು ಉತ್ತಮ ಮಹಿಳಾವಾದಿ ವಿಮರ್ಶಕರಾಗಿದ್ದಾರೆ.

ಯಾವುದೇ ನಿರ್ದಿಷ್ಟ ಶೈಲಿ ಅಥವಾ ಚಳವಳಿಯನ್ನು ಪ್ರತಿನಿಧಿಸದಿದ್ದರೂ, ಅಪಾರವಾದ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾದ ಕೆಲವು ಲೇಖಕರನ್ನು ಕುರಿತಾಗಿ ಮಾತನಾಡದಿದ್ದರೆ, ಕನ್ನಡ ಸಾಹಿತ್ಯದ ಯಾವುದೇ ಸಮೀಕ್ಷೆಯು ಅಪೂರ್ಣವಾಗುತ್ತದೆ. ಅವರ ಪೈಕಿ, ಕೃಷ್ಣಮೂರ್ತಿ ಪುರಾಣಿಕರು ಒಬ್ಬರು. ‘ಧರ್ಮದೇವತೆ’ಯಂತಹ ಅವರ ಕಾದಂಬರಿಗಳಲ್ಲಿ, ಹಳೆಂಯ ಮೈಸೂರು ಅಥವಾ ಹೈದರಬಾದ್ ಕರ್ನಾಟಕ ಅಥವಾ ಮುಂಬಯಿ ಕರ್ನಾಟಕದ ಮಧ್ಯಮ ವರ್ಗದ ಜೀವನವನ್ನು ಯಥಾವತ್ತಾಗಿ ಚಿತ್ರಿಸಿದ ಅವರು, ಮಹಿಳಾ ಓದುಗರಲ್ಲಿ ಅಪಾರವಾದ ಜನಪ್ರಿಯತೆಯನ್ನು ಪಡೆದರು. ಅದೇ ರೀತಿ, ‘ಪತ್ತೇದಾರ ಪುರುಷೋತ್ತಮನ ಸಾಹಸಗಳು’ ಎಂಬ ಸರಣಿಯ ಅಡಿಯಲ್ಲಿ ಎನ್.ನರಸಿಂಹಯ್ಯ ಅವರು ಬರೆದ ಪತ್ತೇದಾರಿ ಕಥೆಗಳು ಎಷ್ಟು ಯಶಸ್ಸನ್ನು ಕಂಡವೆಂದರೆ, ೧೦೦ಕ್ಕೂ ಹೆಚ್ಚಿನ ಶೀರ್ಷಿಕೆಗಳನ್ನು ಇದು ಒಳಗೊಂಡಿದೆ. ಅವರ ಪುಸ್ತಕಗಳು ಶಾಲಾ ಮಕ್ಕಳಲ್ಲಿ ಓದುವ ಹವ್ಯಾಸವನ್ನು ರೂಢಿಸಿತು. ಮಂಡ್ಯ ಜಿಲ್ಲೆಯ ಮ.ರಾಮಮೂರ್ತಿ ಕೂಡ ಪತ್ತೇದಾರಿ ಕಾದಂಬರಿಗಳನ್ನು ಬರೆದರು. 

ಮತ್ತೊಂದೆಡೆ, ಹಾಸ್ಯ ಹಾಗೂ ವಿಜ್ಞಾನದ ಬರವಣಿಗೆಯನ್ನು ಬಹಳ ಪರಿಣಾಮಕಾರಿಯಾಗಿ ಬಿ.ಜಿ.ಎಲ್. ಸ್ವಾಮಿಯವರು ಬೆಳೆಸಿದರು. ಅದು ಪ್ರಕಟವಾದ ಹಲವಾರು ದಶಕಗಳ ನಂತರವೂ, ಸಸ್ಯ ಸಂಪತ್ತನ್ನು ಕುರಿತಾದ ಅವರ ‘ಹಸಿರು ಹೊನ್ನು’, ಶ್ರೇಷ್ಠ ಕೃತಿಯಾಗೇ ಉಳಿದಿದೆ. ಕಾಲೇಜು ಶಿಕ್ಷಕರಾಗಿ ಅವರ ಅನುಭವಗಳನ್ನು ಹೊಂದಿದ ‘ಕಾಲೇಜು ರಂಗ’ ಹಾಗೂ ‘ಕಾಲೇಜು ತರಂಗ’ಗಳು ಹಾಸ್ಯ ಪ್ರಧಾನವಾದ ಅತ್ಯುತ್ತಮ ಕೃತಿಗಳಾಗಿವೆ. ನಾಟಕ ರಂಗದಲ್ಲಿ, ಗಿರೀಶ್ ಕಾರ್ನಾಡರ ನಾಟಕಗಳು ಹಾಗೂ ಅವುಗಳ ಪ್ರದರ್ಶನಗಳು ರಾಷ್ಟ್ರೀಯ ಪ್ರಸಿದ್ಧಿಯನ್ನು ಪಡೆದಿವೆ. ಎಲ್ಲ ನಾಟಕೀಯ ಅಂಶಗಳನ್ನು ಹೊಂದಿದ ಅವರ ತುಘಲಕ್ ಹಾಗೂ ನಾಗಮಂಡಲಗಳು ಗಾಢವಾದ ಪರಿಣಾಮವನ್ನು ಬೀರಿವೆ. ಕಾರ್ನಾಡರ ಬಹುತೇಕ ನಾಟಕಗಳು ಚರಿತ್ರೆ, ಜಾನಪದ ಕಥೆ ಹಾಗೂ ಮಹಾಕಾವ್ಯಗಳಿಂದ ಪ್ರೇರಣೆಯನ್ನು ಪಡೆದಿವೆ. ಅದೇ ರೀತಿ ಸಿ.ಕೆ. ನಾಗರಾಜರಾವ್, ಮಾ.ನ. ಮೂರ್ತಿ, ದೇವುಡು ನರಸಿಂಹ ಶಾಸ್ತ್ರಿ ಹಾಗೂ ಕೆ.ವಿ.ಅಯ್ಯರ್‌ರವರು ‘ಪಟ್ಟಮಹಿಷಿಶಾಂತಲಾ’, ‘ಶಾಂತಲಾ’, ‘ಮಹಾಬ್ರಾಹ್ಮಣ ’ ಹಾಗೂ ‘ಮಹಾಕ್ಷತ್ರಿಯ’, ಹಾಗೂ ‘ರೂಪದರ್ಶಿ’ಯಂತಹ  ಪಾಂಡಿತ್ಯಪೂರ್ಣ ಕಾದಂಬರಿಗಳನ್ನು ಬರೆದಿದ್ದಾರೆ. 

ಹಲವಾರು ಪ್ರವಾಸ ಕಥನಗಳನ್ನೂ ಬರೆಯಲಾಗಿದ್ದು, ಅವುಗಳ ಪೈಕಿ ಶಿವರಾಮ ಕಾರಂತರ ‘ಅಪೂರ್ವ ಪಶ್ಚಿಮ’, ಎ.ಎನ್. ಮೂರ್ತಿರಾಯರ ‘ಅಪರ ವಯಸ್ಕನ ಅಮೇರಿಕಾ ಯಾತ್ರೆ’, ಗೊರೂರು ರಾಮಸ್ವಾಮಿ ಅಯ್ಯಂಗಾರರ ‘ಅಮೇರಿಕಾದಲ್ಲಿ ಗೊರೂರು’, ಜನಪ್ರಿಯ ಪತ್ತೇದಾರಿ ಕಥೆಗಳನ್ನು ಬರೆದ ಟಿ.ಕೆ.ರಾಮರಾಯರ ‘ಗೋಳದ ಮೇಲೊಂದು ಸುತ್ತು’, ಎನ್. ಲಕ್ಷ್ಮಿನಾರಾಯಣರ ‘ನಿರ್ದೇಶಕನ ವಿದೇಶೀ ಯಾತ್ರೆ’, ದೇ. ಜವರೇಗೌಡರ ‘ವಿದೇಶದಲ್ಲಿ ನಾಲ್ಕು ವಾರ’, ಕೃಷ್ಣಾನಂದ ಕಾಮತ್‌ರ ‘ನಾನೂ ಅಮೇರಿಕಕ್ಕೆ ಹೋಗಿದ್ದೆ’, ನವರತ್ನರಾಮ್‌ರವರ ‘ಪ್ಯಾರಿಸ್ಸಿನಿಂದ ಪ್ರೇಯಸಿ’ಗೆ, ಕೆ. ಅನಂತರಾಮು ಅವರ ‘ಉದಯ ರವಿಯ ನಾಡಿನಲ್ಲಿ’, ಸುಶೀಲ ಕೊಪ್ಪರ್‌ರವರ ‘ಪಡುವಣದ ಪತ್ರಮಾಲೆಗಳು’ ಮುಂತಾದವನ್ನು ಹೆಸರಿಸಬಹುದು. ಇತ್ತೀಚೆಗೆ ಪ್ರವಾಸ ಕಥನಗಳು ಸಮೃದ್ಧಿಯಾಗಿ ರಚನೆಯಾಗುತ್ತಿವೆ.

ಐತಿಹಾಸಿಕ ಸಂಶೋಧನಾ ಅಧ್ಯಯನಗಳೂ ಸಹ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆಯನ್ನು ನೀಡಿವೆ.  ಅವುಗಳ ಪೈಕಿ, ಎಂ.ಗೋವಿಂದ ಪೈ, ಪಂಜೆ ಮಂಗೇಶ ರಾಯರು, ಆರ್.ಎಸ್. ಪಂಚಮುಖಿ, ಎಸ್.ಸಿ.ನಂದೀಮಠ, ಕೆ.ಜಿ.ಕುಂದಣಗಾರ, ಎಫ್.ಜಿ. ಹಳಕಟ್ಟಿ, ಎಸ್.ಎಸ್. ಬಸವನಾಳ, ಆರ್.ಸಿ. ರಾಜ ಪುರೋಹಿತ್, ಕಪಟರಾಳ ಕೃಷ್ಣರಾವ್, ಆರ್.ವಿ. ಧಾರವಾಡ್‌ಕರ್‌ರವರು ಹೆಸರುವಾಸಿಯಾದವರು. ಇತ್ತೀಚಿನ ವಿದ್ವಾಂಸರ ಪೈಕಿ, ಎಂ.ಚಿದಾನಂದ ಮೂರ್ತಿ, ಎಂ.ಎಂ. ಕಲಬುರ್ಗಿ, ಟಿ.ವಿ. ವೆಂಕಟಾಚಲ ಶಾಸ್ತ್ರಿ, ಹಂಪ ನಾಗರಾಜಯ್ಯ, ಶ್ರೀನಿವಾಸ ರಿತ್ತಿ, ಬಿ.ಆರ್. ಗೋಪಾಲ್, ಕೆ.ಕೆ.ಕುಲಕರ್ಣಿ, ಶ್ರೀನಿವಾಸ ಹಾವನೂರು, ಸೂರ್ಯನಾಥ ಕಾಮತ್, ಲಕ್ಷ್ಮಣ ತೆಲಗಾವಿ ಹಾಗೂ ಇತರರು ಈ ಅಧ್ಯಯನಗಳಲ್ಲಿ ತೊಡಗಿಸಿಕೊಂಡವರು.

 

ಜಾನಪದ ಸಾಹಿತ್ಯ

ಕನ್ನಡ ಸಾಹಿತ್ಯವು ವಿಸ್ತೃತ ಶ್ರೇಣಿಯ ಜಾನಪದ ಸಾಹಿತ್ಯವನ್ನು ಹೊಂದಿದೆಯೆಂದು ಹೆಮ್ಮೆಯಿಂದ ಘೋಷಿಸಿಕೊಳ್ಳಬಹುದು. ಈ ಜಾನಪದ ಹಾಡು ಹಾಗೂ ಪದ್ಯಗಳ ವಸ್ತುವಿಷಯವು, ಕನ್ನಡ ಜನರ ಗೃಹ ಹಾಗೂ ಸಾಮಾಜಿಕ ಜೀವನದ ಸುತ್ತ ಹೆಣೆದಿದೆ. ‘ಗೀತೆಗಳ ಕಿರುಸ್ವರೂಪ’(ಮಿನಿಯೇಚರ್)  ಎಂದು ಇದನ್ನು ಹೇಳಿದರೂ, ಕೆಲವೊಮ್ಮೆ ಅವುಗಳ ಶೈಲಿ ಹಾಗೂ ಪೂರ್ಣತೆಯ ಧಾಟಿಯಿಂದ, ಗಂಭೀರ ಶೈಲಿಯ ಸಾಹಿತ್ಯಕ್ಕೆ ಸಮನಾಗಿ ಇತ್ತು ಎಂದು ಹೇಳಬಹುದು. ಗುಂಪು ಹಾಡುಗಳು, ನಾಡಪದ (ಲಾವಣಿ) , ತ್ರಿಪದಿಗಳು (ಮೂರು ಸಾಲಿನ ಹಾಡುಗಳು), ಲಾಲಿ ಹಾಡು ಹಾಗೂ ಇತರ ಹಾಡುಗಳು, ಕನ್ನಡ ಜಾನಪದ ಸಾಹಿತ್ಯಕ್ಕೆ ವೈವಿಧ್ಯತೆ ಹಾಗೂ ಶ್ರೀಮಂತಿಕೆಯನ್ನು ನೀಡಿ, ಅದನ್ನು ಕನ್ನಡ ಸಾಹಿತ್ಯದ ನಿರ್ದಿಷ್ಟ ಹಾಗೂ ಗಣನೀಯ ಶಾಖೆಗಳಲ್ಲಿ ಒಂದನ್ನಾಗಿಸಿದೆ.

ಬೇರೆಲ್ಲೆಡೆ ಇರುವಂತೆ, ಕರ್ನಾಟಕದ ಜಾನಪದ ಸಂಪ್ರದಾಯವು ಮೌಖಿಕವಾಗಿ ಪ್ರಾರಂಭವಾಯಿತು. ಜಾನಪದ ಸಾಹಿತ್ಯದ ವ್ಯವಸ್ಥಿತ ಅಧ್ಯಯನವನ್ನು ಐರೋಪ್ಯ ವಿದ್ವಾಂಸರು ಪ್ರಾರಂಭಿಸಿದರು.  ಕಿಟ್ಟೆಲ್ ನಿಘಂಟಿನಲ್ಲಿ ಹೇರಳವಾದ ನಾಣ್ಣುಡಿಗಳ ಸಂಗ್ರಹವಿದ್ದು, ಅವು ಬಹುತೇಕ ಜಾನಪದ ಮೂಲವನ್ನು ಹೊಂದಿದೆ. ಬಾಸೆಲ್ ಮಿಷನ್ ಇಗರ್ಜಿಯಲ್ಲಿದ್ದ ಹಿರಿಯ ಅಧಿಕಾರಿ ರೆವೆರೆಂಡ್ ಮೋಗ್ಲಿಂಗ್ ಈ ಯತ್ನದಲ್ಲಿ ಕಿಟ್ಟೆಲ್‌ರಿಗೆ ನೆರವು ನೀಡಿದರು. ಹಿಂದೂ ಕಸ್ಟಮ್ಸ್, ಮ್ಯಾರ‍್ಸ್ ಆಂಡ್ ಸೆರೆಮೊನೀಸ್ ಎಂಬ ಅಬ್ಬೆ ದುಬೋಯ್ ಅವರ ಕೃತಿಯಲ್ಲಿ ಹಲವಾರು ಜಾನಪದ ಕಥೆಗಳು ಇವೆ. ಮೇರಿ ಫ್ರೆರೆ (ಮೇಫೆಜರ್)ರವರ ‘ಓಲ್ಡ್ ಡೆಕ್ಕನ್ ಡೇ’, ಜಾನಪದ ಕಥೆಗಳ ಸಂಗ್ರಹವಾಗಿದೆ. ಕನ್ನಡಿಗರ ಪೈಕಿ, ಕೊಡಗಿನ ವಿದ್ವಾಂಸರಾದ ನಡಿಕೇರಿಯಾಂಡ ಚಿನ್ನಪ್ಪ ಅವರು ೧೯೨೪ರಲ್ಲಿ ‘ಪಟ್ಟೋಲೆ ಪಳಮೆ’ ಎಂಬ ಕೊಡವ ಭಾಷೆಯ ಪುಸ್ತಕವನ್ನು ಪ್ರಕಟಿಸಿದರು; ಇದೊಂದು ಕೊಡವ ಭಾಷಿಕರ ವೇದವೆಂದೇ ಖ್ಯಾತಿಗೊಂಡಿದೆ.  ನಂತರ ಉತ್ತರ ಕರ್ನಾಟಕದ ಹಲಸಂಗಿ ಸಹೋದರರು ‘ಗರತಿಯ ಹಾಡು’, ‘ಮಲ್ಲಿಗೆ ದಂಡೆ’ ಹಾಗೂ ‘ಜೀವನ ಸಂಗೀತ’ವೆಂಬ ಶೀರ್ಷಿಕೆಯ ಜಾನಪದ ಹಾಡುಗಳು ಹಾಗೂ ನಾಡಗೀತೆಗಳನ್ನು ಮೂರು ಸಂಪುಟಗಳಲ್ಲಿ ಪ್ರಕಟಣೆ ಮಾಡಿದ್ದಾರೆ. ಇಡೀ ಗ್ರಾಮವೊಂದರ ಗ್ರಾಮೀಣ ಸಂಪ್ರದಾಯಗಳನ್ನು ಚಿತ್ರಿಸಿರುವ ‘ಹುಟ್ಟಿದ ಹಳ್ಳಿಯ ಹಾಡು’ ಎಂಬ ಪುಸ್ತಕವನ್ನು ಮಂಡ್ಯ ಜಿಲ್ಲೆಯ ಅರ್ಚಕ ಬಿ.ರಂಗಸ್ವಾಮಿ ಭಟ್ಟರು ಹೊರತಂದರು. ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ, ಜಾನಪದ ಕಥೆಗಳ ಬಗೆಗಿನ ಪ್ರೌಢ ಪ್ರಬಂಧ ಕ್ಕಾಗಿ ಕನ್ನಡದಲ್ಲಿ ಡಾಕ್ಟರೇಟ್ ಪಡೆದ ಪ್ರಥಮ ವಿದ್ವಾಂಸರು ಬಹುಶಃ ಬಿ.ಎಸ್. ಗದ್ದಗಿಮಠ ಎಂದು ತೋರುತ್ತದೆ. ಇದಾದ ನಂತರ, ಕನ್ನಡ ನಿಯತಕಾಲಿಕೆಗಳಲ್ಲಿ ಪ್ರಕಟವಾದ ಲೇಖನಗಳ ಸರಣಿಯನ್ನು ಜಿ.ಶಂ.ಪರಮಶಿವಯ್ಯನವರು ಬರೆದರು. ಭಾಷಾವ್ಯಾಸಂಗದ ವಿದ್ವಾಂಸರಾದ ಹಾ.ಮಾ.ನಾಯಕರು, ಜಾನಪದ ಸಂಸ್ಕೃತಿಯ ಅಧ್ಯಯನ ಕುರಿತಾದ ಅನೇಕ ವಿದ್ವತ್ ಲೇಖನಗಳನ್ನು ಮುದ್ರಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿದ್ದ ಡಿ. ಜವರೇಗೌಡರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಜಾನಪದ ಸಾಹಿತ್ಯದ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದರು. ಬೆಂಗಳೂರು, ಧಾರವಾಡ ಹಾಗೂ ಗುಲ್ಬರ್ಗಾದ ವಿಶ್ವವಿದ್ಯಾನಿಲಯಗಳೂ ಸಹ, ಜಾನಪದ ಸಂಸ್ಕೃತಿಯಲ್ಲಿ ಡಾಕ್ಟರೇಟ್ ಪದವಿಗಳನ್ನು ನೀಡುತ್ತಿವೆ. ಇತ್ತೀಚೆಗೆ, ಜಾನಪದ ಸಾಹಿತ್ಯವನ್ನು ಉತ್ತೇಜಿಸುವಲ್ಲಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಹಾಗೂ ಶಿವಮೊಗ್ಗ ವಿಶ್ವವಿದ್ಯಾನಿಲಯಗಳೂ ಮುಂಚೂಣಿಯಲ್ಲಿವೆ.

ಜಾನಪದ ಸಾಹಿತ್ಯ ಅಧ್ಯಯನದ ಇತರ ಮುಖ್ಯ ಕೇಂದ್ರಗಳೆಂದರೆ, ಕರ್ನಾಟಕ ಜಾನಪದ ಟ್ರಸ್ಟ್ ಹಾಗೂ ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡೆಮಿ.  ಕರ್ನಾಟಕ ಜಾನಪದ ಟ್ರಸ್ಟ್ನಲ್ಲಿ ರಾಜ್ಯದೆಲ್ಲೆಡೆಯಿಂದ ದಾಖಲಿತವಾದ ೧,೦೦೦ಕ್ಕೂ ಅಧಿಕ ಜಾನಪದ ಹಾಡುಗಳ ಸಂಗ್ರಹವಿದೆ. ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡೆಮಿಯು, ಅತ್ಯಂತ ಕಡಿಮೆ ಬೆಲೆಯಲ್ಲಿ ಪ್ರತಿ ವರ್ಷ ೧೦೦ ಪುಟಗಳ ಜಾನಪದ ಸಾಹಿತ್ಯದ ಸಂಗ್ರಹವನ್ನು ಹೊರತ್ತಿರುತ್ತದೆ.

ಜಾನಪದ ಗೀತೆಗಳ ಸಂಗ್ರಹವಾದ ‘ಗೃಹಿಣಿ ಗೀತೆಗಳು’ ಎಂಬ ಬೃಹತ್ ಪುಸ್ತಕಗಳ ಸರಣಿಯನ್ನು ಮತಿಘಟ್ಟ ಕೃಷ್ಣಮೂರ್ತಿಯವರು ಹೊರತಂದಿದ್ದಾರೆ.  ಜಾನಪದ ಸಾಹಿತ್ಯವನ್ನು ಕುರಿತಾದ ಉಪನ್ಯಾಸಗಳನ್ನು ನೀಡುತ್ತಾ, ಎಸ್.ಕೆ. ಕರೀಂಖಾನ್‌ರವರು ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿದ್ದಾರೆ. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಜನಪ್ರಿಯ ನಾಟಕಕಾರರೂ ಹಾಗೂ ಕಾದಂಬರಿಕಾರರಾದ ಚಂದ್ರಶೇಖರ ಕಂಬಾರರು, ಜಾನಪದ ಕಥೆಗಳ ಜನಪ್ರಿಯ ಅಳವಡಿಕೆಗಳಾದ ‘ಸಿರಿ ಸಂಪಿಗೆ’, ‘ಸಿಂಗಾರವ್ವ ಮತ್ತು ಅರಮನೆ’, ‘ಕಾಡು ಕುದುರೆ’ ಹಾಗೂ ‘ಸಂಗ್ಯಾ-ಬಾಳ್ಯಾ’ಗಳನ್ನು ಬರೆದಿದ್ದಾರೆ.  ಜಾನಪದ ಕಥೆಯನ್ನು ಆಧಾರವಾಗಿಸಿಕೊಂಡ ಗಿರೀಶ್ ಕಾರ್ನಾಡರ ನಾಟಕ ‘ನಾಗಮಂಡಲ’ಕ್ಕೆ ಅಂತರರಾಷ್ಟ್ರೀಯ ಖ್ಯಾತಿ ದೊರೆತಿದೆ; ಅದೇ ರೀತಿ, ಎ.ಕೆ. ರಾಮಾನುಜಮ್‌ರ ಜಾನಪದ ಕಥೆಗಳೂ ಸುಪ್ರಸಿದ್ಧವಾಗಿವೆ. ಚಲನಚಿತ್ರಗಳಿಗೆ ಜಾನಪದ ಸಂಗೀತವನ್ನು ರಚಿಸುವಲ್ಲಿ ಬಿ.ವಿ. ಕಾರಂತ ಹಾಗೂ ಸಿ.ಅಶ್ವತ್ಥರವರು ಮುಂಚೂಣಿಯಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಎಚ್.ಎಲ್. ನಾಗೇಗೌಡ, ಬಿ.ಬಿ. ಹಂಡಿ ಹಾಗೂ ಎಚ್.ಕೆ. ರಾಜೇಗೌಡರು ಅದ್ಭುತ ಕಾರ್ಯವನ್ನು ಮಾಡಿದ್ದಾರೆ.  ಎಚ್.ಎಲ್. ನಾಗೇಗೌಡರ ಯತ್ನದಿಂದ ರಾಮನಗರದಲ್ಲಿರುವ ಜಾನಪದ ಪರಿಷತ್ತಿನ ಜನಪದ ಲೋಕವು ಚೆನ್ನಾಗಿ ಕೆಲಸ ಮಾಡುತ್ತಿದ್ದು ಜಾನಪದ ಸಾಮಗ್ರಿಗಳ ಅಪರೂಪದ ಸಂಗ್ರಹವನ್ನು ಹೊಂದಿದೆ. ಆರಂಭದೆತ್ತು ಐನೂರು, ಆನೆ ಬಂತೊಂದಾನೆ, ನನ್ನೂರು, ವೆರಿಯಾರ್ ಎಲ್ವಿನ್ನನ ಗಿರಿಜನ ಪ್ರಪಂಚ, ಕೆಲವು ಪ್ರಮುಖ ಸಂಗ್ರಹಗಳು. ಎಚ್.ಕೆ. ರಾಜೇಗೌಡರ ಕೆಂಪಣ್ಣ ಗೌಡನ ಯಕ್ಷಗಾನ ಕಾವ್ಯಗಳು, ಒಕ್ಕಲಿಗೆ ಜನಾಂಗದ ಸಂಪ್ರದಾಯ, ಇತಿಹಾಸ ಜಾನಪದ ಗಮನಾರ್ಹ ಕೃತಿಗಳಾಗಿವೆ.  ಕೆ.ಆರ್. ಕೃಷ್ಣಮೂರ್ತಿ (ಕರಕೃ), ಹಿ.ಚಿ. ಬೋರಲಿಂಗಯ್ಯ ಹಾಗೂ ಮುದೆನೂರು ಸಂಗಣ್ಣ ಸ್ವಾಮಿ ಮೊದಲಾದವರ ಕೃತಿಗಳೂ ಕೂಡ ಪ್ರಶಂಸಾರ್ಹವಾದುದು.

ಕೆಲವು ಜಾನಪದ ಕಥೆಗಳು ಎಲ್ಲ ಪ್ರದೇಶಗಳಿಗೂ ಸಾಮಾನ್ಯವಾದುದು.ಅದರಲ್ಲಿ ಒಂದು, ಹರಿಜನ ಯುವಕನೊಬ್ಬನು ಬ್ರಾಹ್ಮಣ ನಾಗಿ ನಟಿಸಿ, ಆ ಸಮುದಾಯದ ಹುಡುಗಿಯೊಬ್ಬಳನ್ನು ಮದುವೆಯಾಗುತ್ತಾನೆ. ಆಹುಡುಗಿಗೆ ಅವನ ಮೋಸವು ತಿಳಿದಾಗ, ಬೆಂಕಿಗೆ ಹಾರಿ ದೇವತೆಯಾಗುತ್ತಾಳೆ. ಮತ್ತೊಂದು ಕಥನವಾದ ಕೆರೆಗೆ ಹಾರದಲ್ಲಿ, ಗ್ರಾಮದ ಕೆರೆಯಲ್ಲಿ ನೀರು ನಿಲ್ಲಲು ಸಾಧ್ವಿ ಮಹಿಳೆಯೊಬ್ಬಳು ಆತ್ಮಾರ್ಪಣೆ ಮಾಡಿಕೊಂಡ ವಸ್ತುವಿದೆ. ಇದರ ಜೊತೆಗೆ, ವಿವಿಧ  ಪ್ರಾಣಿಗಳ ಹಲವಾರು ಕಥೆಗಳಿದ್ದು, ಅದರಲ್ಲಿ ಮೋಸಗಾರ ನರಿಯನ್ನು ಬಹಳವಾಗಿ ಚಿತ್ರಿಸಲಾಗಿದೆ.

ಹಾಡುಗಳಿಗೆ ಬಂದಾಗ, ಪ್ರತಿಯೊಂದು ಗ್ರಾಮೀಣ ಚಟುವಟಿಕೆಗೂ ಒಂದು ಹಾಡಿದೆ - ಅಂದರೆ, ಕುಟ್ಟುವುದು, ಬೀಸುವುದು, ಮಗುವಿನ ನಾಮಕರಣ, ಲಾಲಿ, ಮದುವೆ, ನಿಶ್ಚಿತಾರ್ಥ, ಅಥವಾ ಹಚ್ಚೆ ಹಾಕಿಸಿಕೊಳ್ಳುವುದಕ್ಕೂ ಹಾಡುಗಳಿವೆ.  ಹಚ್ಚೆ ಹಾಕಿಸಿಕೊಳ್ಳುವ ಚಟುವಟಿಕೆಯು, ಕೊರವಂಜಿಗಳೆಂಬ ನಿರ್ದಿಷ್ಟ ಸಮುದಾಯಕ್ಕೆ ಸೇರಿದವರ ನೈಪುಣ್ಯವಾಗಿತ್ತು.   ಕೋಲುಗಳನ್ನು ಹಿಡಿದು ಮಾಡುವ ಕರ್ನಾಟಕದ ನೃತ್ಯವಾದ ಕೋಲಾಟಕ್ಕೂ ಸುಶ್ರಾವ್ಯವಾದ ಹಾಡುಗಳಿವೆ. ನಾಡಗೀತೆ ಅಥವಾ ಕಥನ ರೂಪದ ಜಾನಪದ ಹಾಡು ಮತ್ತೊಂದು ನಿರ್ದಿಷ್ಟ ರೂಪವಾಗಿದೆ. ಜೀಶಂಪ ಅವರು, ಇವರ ೧೨ ಗುಂಪು ಅಥವಾ ಸಂಪ್ರದಾಯಗಳಾಗಿ ಇದನ್ನೂ ವಿಂಗಡಿಸಿದ್ದಾರೆ.  (೧) ದೇವರ ಗುಡ್ಡರು (೨) ನೀಲಗಾರ (೩) ವಾದ್ಯ ನುಡಿಸುವವರು (೪) ಗೊರವ (೫) ಚೌಡಿಕೆಯವರು (೬) ಆರಡಿಗಳು (೭) ಕರಪಾಲದವರು (೮) ತಂಬೂರಿಯವರು (೯) ಕಿನ್ನರ ಜೋಗಿಗಳು (೧೦) ದೊಂಬಿ ದಾಸರು (೧೧) ಹೆಳವರು ಹಾಗೂ (೧೨) ತೆಲುಗು ಜಂಗಮರು.

ಗುಣಸಾಗರಿ, ಸರ್ಜಪ್ಪ ನಾಯಕನ ಕಥೆ, ಮದಕರಿ ನಾಯಕ, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಬಾಲನಾಗಮ್ಮ, ಮಲೆ ಮಾದೇಶ್ವರ ಕಾವ್ಯ, ಮಂಟೇಸ್ವಾಮಿ ಕಾವ್ಯ, ಯಲ್ಲಮ್ಮನ ಕಾವ್ಯ ಹಾಗೂ ಮೈಲಾರಲಿಂಗನ ಕಾವ್ಯಗಳು ಕೆಲವು ಜನಪ್ರಿಯ ನಾಡಗೀತೆಗಳು. ಪದಾರ್ಥಸಾರ, ವೈದ್ಯರತ್ನಾಕರ, ಇತ್ಯಾದಿ ಜಾನಪದ ಔಷಧದ ಬಗೆಗಿನ ಪುಸ್ತಕಗಳ ಬೃಹತ್ ಸಂಗ್ರಹವಿದೆ. ಇವುಗಳಲ್ಲಿ ಅನೇಕ ಗ್ರಂಥಗಳನ್ನು ಮೈಸೂರು ರಾಜಮನೆತನದ ನೆರವಿನಿಂದ ಹೊರತರಲಾಯಿತು.

 

 

ಸಂಸ್ಕೃತ ಸಾಹಿತ್ಯ

ಭಾರತದ ವಿವಿಧ ಪ್ರಾದೇಶಿಕ ಭಾಷೆಗಳು ಸಂಸ್ಕೃತದ ಪ್ರಭಾವಕ್ಕೆ ಒಳಗಾಗುವುದರೊಂದಿಗೆ ಹಾಗೂ ಸಂಸ್ಕೃತ ಹಾಗೂ ಇತರ ಭಾಷೆಗಳ ನಡುವಣ ಸಂಬಂಧವು ಸದಾಕಾಲ ಆತ್ಮೀಯ, ಸ್ವಾಭಾವಿಕ  ಹಾಗೂ ಗಾಢವಾಗಿದೆ. ಶತಮಾನಗಳ ಕಾಲ, ಸಂಸ್ಕೃತ ಚಿಂತನೆಗಳು ಹಾಗೂ ಸಂಸ್ಕೃತಿಯ ಆದರ್ಶಗಳು ಅವಿರತವಾಗಿ ಹರಿಯುವ ಒಂದು ಮಾರ್ಗವಾಗಿ ಕನ್ನಡ ಸಾಹಿತ್ಯವು ಅಕ್ಷರಶಃ ಕಾರ್ಯ ನಿರ್ವಹಿಸಿತು. ಸಂಸ್ಕೃತ ಚಿಂತನೆ ಹಾಗೂ ಚೈತನ್ಯದ ಸುಸಂಗತವಾದ ಸಮೀಕರಣವು ನಡೆಯದಿದ್ದಲ್ಲಿ, ಕರ್ನಾಟಕ ಸಾಹಿತ್ಯವು ತನ್ನ  ಶ್ರೀಮಂತ ವೈವಿಧ್ಯತೆ ಹಾಗೂ ಅಮೋಘ ಪರಿಪೂರ್ಣತೆಯನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಕನ್ನಡ ಬರಹಗಾರರಿಗೆ ಸಂಸ್ಕೃತವು ಮಾನದಂಡವನ್ನು ಸ್ಥಾಪಿಸಿ ಉತ್ತಮ ಬರವಣಿಗೆಯ ನಿಯಮಗಳನ್ನು ಒದಗಿಸಿತು. ಅಭಿರುಚಿಯಲ್ಲಿ ಅವನತಿಯು ನುಸುಳಿಕೊಂಡಾಗ, ಬಹಳಷ್ಟು ಮಟ್ಟಿಗೆ, ಅದರ ತಿದ್ದುಪಡಿಯನ್ನೂ ಸಂಸ್ಕೃತವೇ ಮಾಡಿತು. ಆಧುನಿಕ ಸಾಹಿತ್ಯ ಯುಗದಲ್ಲಿ ನವೋದಯವು ನಡೆದು ಬಂದಾಗಲೂ, ವೇದ ವೇದಾಂತ, ಸಂಖ್ಯಾ ಹಾಗೂ ಯೋಗಗಳಲ್ಲಿ ಹುದುಗಿದ್ದ ಚಿಂತನೆಗಳ ಅನ್ವೇಷಿತ ಕ್ಷೇತ್ರಗಳ ತೀರದ ಭಂಡಾರವನ್ನು ತೆರೆದಿಟ್ಟಿತು.

ತತ್ವಚಿಂತನೆ, ನೈತಿಕತೆ, ಕಾವ್ಯ ಹಾಗೂ ಸಾಹಿತ್ಯಕ, ವಿಜ್ಞಾನಗಳಲ್ಲಿ ಸಂಸ್ಕೃತ ಸಾಹಿತ್ಯಕ್ಕೆ ಕರ್ನಾಟಕವು ಮೆಚ್ಚುವಂತಹ ಕೊಡುಗೆಯನ್ನು ನೀಡಿದೆ. ಶಾಸನಗಳಲ್ಲಿ ತಿಳಿಸಿರುವಂತೆ, ವಿಜಯನಗರದ ಅರಸರು ತಮ್ಮ ಧಾರ್ಮಿಕ ಸಹಿಷ್ಣುತೆಗೆ ಹೆಸರುವಾಸಿಯಾಗಿದ್ದರು.  ಈ ಸಹಿಷ್ಣುತೆಯು ತತ್ವಚಿಂತನೆ ಹಾಗೂ ಧರ್ಮಗಳ ವಿವಿಧ ವ್ಯವಸ್ಥೆಗಳ ಬೆಳವಣಿಗೆಗೆ ಪ್ರೇರಣೆ ನೀಡಿ ವಿಜಯನಗರದ ಅರಸರಿಂದ ಸಮನಾದ ಪ್ರೋತ್ಸಾಹ ಹಾಗೂ ಆಶ್ರಯಗಳು ಪ್ರತಿಯೊಂದು ವಿಷಯಕ್ಕೂ ದೊರೆಯಿತು. ಅಷ್ಟೇ ಅಲ್ಲ, ಮುಸಲ್ಮಾನ ಧಾಳಿಕೋರರಿಂದ ಹಿಂದೂ ಧರ್ಮ ಹಾಗೂ ಸಂಸ್ಕೃತಿಗಳನ್ನು ಉಳಿಸಿ, ಸನಾತನ ಧರ್ಮವನ್ನು ಪುನರ್‌ಸ್ಥಾಪಿಸುವ ಸ್ಪಷ್ಟವಾದ ಉದ್ದೇಶವನ್ನು ಈ ಸಾಮ್ರಾಜ್ಯದ ಅರಸರು ಹೊಂದಿದ್ದರು. ಹಾಗಾಗಿ, ಈ ಅವಧಿಯಲ್ಲಿ ತತ್ವಚಿಂತನೆಯ ಬಹುತೇಕ ಸಾಹಿತ್ಯವು ಹೊರಬಂದಿರುವುದು ಸಹಜವೇ ಆಗಿದೆ. ದಯಾಳು ಅರಸರ ಉತ್ಸಾಹಪೂರ್ಣ ಆಶ್ರಯದಲ್ಲಿ ಕಾವ್ಯ (ಐತಿಹಾಸಿಕ, ಪೌರಾಣಿಕ ಹಾಗೂ ದಂತಕಥೆಗಳು ), ನಾಟಕ, ಗದ್ಯರೂಪದಪ್ರಣಯ ಕಥೆ ಚಂಪೂ, ವ್ಯಾಕರಣ, ಭಾಷಾಶಾಸ್ತ್ರ  ಹಾಗೂ ಸಂಗೀತ ವೈಜ್ಞಾನಿಕ ಸಾಹಿತ್ಯದ ಮೂಲಕ ಕವಿಗಳು ಹಾಗೂ ವಿದ್ವಾಂಸರ ಕೌಶಲ್ಯವು ಅಭಿವ್ಯಕ್ತವಾಯಿತು.  ಕರ್ನಾಟಕದಲ್ಲಿ ಸಂಸ್ಕೃತ ಭಾಷೆಯ ಆಗಮನವನ್ನು ಕಂಡು ಹಿಡಿಯುವುದು ಸುಲಭವಲ್ಲ. ಭಾರತದಲ್ಲಿ ಸಂಸ್ಕೃತದ ಬಳಕೆಗೆ ಸಂಬಂಧಿಸಿದಂತೆ ಶಾಸನಾಧಾರವು ಬಹುಶಃ ಕರ್ನಾಟಕದಿಂದ ಬಂದಿತೆಂದು ತೋರುತ್ತದೆ. ಬ್ರಹ್ಮಗಿರಿಯಲ್ಲಿ ದೊರೆತ ಅಶೋಕನ ಶಿಲಾಶಾಸನದ ಅಂತ್ಯದಲ್ಲಿ, ‘ಚಪಡೇನ ಲಿಖಿತಂ’ ಎಂಬ ಎರಡು ಪದದ ವಾಕ್ಯವಿದೆ, ಆದರೆ ಈ ವೇಳೆಗಾಗಲೇ ಸಂಸ್ಕೃತವು ಭಾರತದಲ್ಲಿ ಹರಡಿತ್ತು ಎನ್ನಲು ಸಾಕಷ್ಟು ಸಾಕ್ಷಿಗಳಿಲ್ಲ. ಪ್ರಪ್ರಥಮವಾಗಿ ಲಭ್ಯವಾದ ಕನ್ನಡ ದಾಖಲೆ ಹಲ್ಮಿಡಿ ಶಾಸನದಲ್ಲಿ ಅನೇಕ ಸಂಸ್ಕೃತ ವಾಕ್ಯಗಳು ಇವೆ.ಅದರ ಮಂಗಳ ಶ್ಲೋಕವೇ ಸಂಸ್ಕೃತದಲ್ಲಿದೆ. ಕರ್ನಾಟಕದಲ್ಲಿ ದೊರೆತಿರುವ ಕ್ರಿ.ಶ. ೩-೪ನೆಯ ಶತಮಾನಕ್ಕೆ ಸೇರಿದ ಪ್ರಾರಂಭಿಕ ಶಾಸನಗಳು ಬಹುತೇಕ ಪ್ರಾಕೃತದಲ್ಲಿವೆ. ಇತ್ತೀಚಿಗಷ್ಟೇ ಮಾಡಿದ ಸಂಶೋಧನೆಯೊಂದರ ಪ್ರಕಾರ, ಕದಂಬ ರಾಜವಂಶದ ಪ್ರಥಮ ರಾಜ ಮಯೂರವರ್ಮನ (ಕ್ರಿ.ಶ. ೩೨೫) ಚಂದ್ರವಳ್ಳಿ ಶಾಸನದಲ್ಲಿ ಸಂಸ್ಕೃತದ ಪ್ರಪ್ರಥಮ ಬಳಕೆಯನ್ನು ಕಾಣಬಹುದು. ಸುಪ್ರಸಿದ್ಧ ಸಂಸ್ಕೃತ ಕವಿಯಾದ ಕುಬ್ಜನು ಬರೆದ ಶಾಂತಿವರ್ಮನ ತಾಳಗುಂದ ಶಾಸನವು, ಕಾವ್ಯ ಶೈಲಿಯನ್ನು ಬಳಸಿದ ಶುದ್ಧ ಸಂಸ್ಕೃತದ ಅತ್ಯುತ್ತಮ ರಚನೆಯಾಗಿದೆ.ಮುಂದಿನ ಪ್ರಮುಖ ಸಂಸ್ಕೃತ ಶಾಸನವೆಂದರೆ, ರವಿಕೀರ್ತಿಯು ರಚಿಸಿದ ಐಹೊಳೆ ಪ್ರಶಸ್ತಿ (ಕ್ರಿ.ಶ. ೬೩೭) - ಇದರಲ್ಲಿ ಕವಿಗಳಾದ ಕಾಳಿದಾಸ ಹಾಗೂ ಭಾರವಿಯರನ್ನು ಹೆಸರಿಸಲಾಗಿದೆ. ಕ್ರಿ.ಶ. ೫ - ೭ನೆಯ ಶತಮಾನದವರೆಗೂ, ಸುಮಾರು ಮೂರು ಶತಮಾನಗಳ ಕಾಲ, ಶಾಸನಗಳು ಬಹುತೇಕವಾಗಿ ಸಂಸ್ಕೃತದಲ್ಲೇ ಇದ್ದವು.

ಕರ್ನಾಟಕದ ಪ್ರಾರಂಭಿಕ ಜೈನ ಬರಹಗಾರರು ಮೂಲತಃ ಪ್ರಾಕೃತದಲ್ಲಿ ಬರೆದರಾದರೂ ನಂತರ ಸಂಸ್ಕೃತದಲ್ಲಿ ಬರೆದಿದ್ದಾರೆ. ಕನ್ನಡದಲ್ಲಿ ಬರವಣಿಗೆಯನ್ನು ಪ್ರಾರಂಭಿಸುವ ಮುನ್ನ, ಅನೇಕ ಪ್ರಾಕೃತ ಹಾಗೂ ಸಂಸ್ಕೃತ ಕೃತಿಗಳನ್ನು ಕರ್ನಾಟಕದ ಜೈನ ವಿದ್ವಾಂಸರು ರಚಿಸಿದರು.

ಇಮ್ಮಡಿ ಪುಲಕೇಶಿಯ ಸೊಸೆ ವಿಜಯಾಂಬಿಕಾ ಅಥವಾ ವಿಜ್ಜಿಕಾ, ಓರ್ವ ಮಹಾನ್ ಸಂಸ್ಕೃತ ಕವಯತ್ರಿಯಾಗಿದ್ದಳು. ಪ್ರಣಯದ ವಿಷಯವನ್ನು ಹೊತ್ತ ಐತಿಹಾಸಿಕ ನಾಟಕವಾದ ‘ಕೌಮುದಿ ಮಹೋತ್ಸವ’ ಆಕೆಯ ನಾಟಕ ಸಾಹಿತ್ಯ ಕೃತಿ ಸುಪ್ರಸಿದ್ಧವಾಗಿವೆ.  ಆಕೆಯು ದಂಡಿಗೆ ಎದುರಾಳಿಯಾಗಿದ್ದು, ತನ್ನ ಶ್ಲೋಕಗಳ ಮೂಲಕ, ಮೆಚ್ಚುಗೆಯೊಂದಿಗೆ ಅವನನ್ನು ಕೆಣಕುತ್ತಿದ್ದಳುಇದನ್ನು ಅಲಂಕಾರ ಕೃತಿಗಳಲ್ಲಿ ಉಲ್ಲೇಖಿಸಲಾಗಿದೆ.

ಕನ್ನಡದ ಅನೇಕ ಬರಹಗಾರರು ಸಂಸ್ಕೃತದಲ್ಲೂ ಬರೆದರು. ವರ್ಧಮಾನದೇವನ ‘ಚೂಡಾಮಣಿ’ಯು, ಕನ್ನಡ ಲೇಖಕ ಬರೆದ ಅತ್ಯಂತ ಪುರಾತನ ಸಂಸ್ಕೃತ ಕಾವ್ಯ ಕೃತಿ. ದಂಡಿಯು ಅದರ ಉಲ್ಲೇಖವನ್ನು ಮಾಡಿದ್ದಾನೆ, ಆದರೆ ಅದರ ಪಠ್ಯವು ವಿಸ್ತೃತವಾಗಿಲ್ಲ. 

ಪೈಶಾಚಿ ಭಾಷೆಯಲ್ಲಿ ಗುಣಾಢ್ಯನು ಬರೆದ ಮಹಾನ್ ಕಥೆಗಳ ಸಂಗ್ರಹವಾದ ‘ಬೃಹತ್ಕಥಾ’ದ ಪ್ರಥಮ ಅನುವಾದದ ಶ್ರೇಯಸ್ಸು ಗಂಗ ರಾಜನಾದ ದುರ್ವಿನೀತನಿಗೆ ಸಲ್ಲುತ್ತದೆ. ಸೋಮದೇವನ ‘ಕಥಾಸರಿತ್ಸಾಗರ’ವು ‘ಬೃಹತ್ಕಥಾ’ಸಂಸ್ಕೃತ ಅನುವಾದವಾಗಿದೆ. ಗಂಗ ರಾಜ ಬೂತುಗನ ಆಸ್ಥಾನ ಕವಿಯಾದ ವಿದ್ಯಾಧನಂಜಯನು ದ್ವಿಸಂಧಾನಕಾವ್ಯವನ್ನು, ಅಂದರೆ, ಚಮತ್ಕಾರಿಕ ಪದಪ್ರಯೋಗಗಳ ತಂತ್ರವನ್ನು ಬಳಸಿ,ಅನನ್ಯ ರೀತಿಯಲ್ಲಿ ರಚಿಸಲಾದ ಮಹಾಭಾರತ ಹಾಗೂ ರಾಮಾಯಣಗಳೆರಡರ ಕಥೆಯನ್ನು ಹೇಳುವ ‘ರಾಘವ ಪಾಂಡವೀಯ’ವನ್ನು ರಚಿಸಿದ್ದಾನೆ.  ಜಟಾಸಿಂಹನಂದಿಯ ‘ವರಾಂಗಚರಿತ’, ವೀರನಂದಿಯ ‘ಚಂದ್ರಪ್ರಭಾಚರಿತ’, ವಾದಿರಾಜನ ‘ಪಾರ್ಶ್ವನಾಥ ಚರಿತ’ ಹಾಗೂ ಜನ್ನನ ‘ಯಶೋಧರ ಚರಿತ’, ಜಿನಸೇನನ ‘ಹರಿವಂಶ ಪುರಾಣ’, ಗುಣಭದ್ರನ ‘ಉತ್ತರಪುರಾಣ’ ಹಾಗೂ ‘ಜಿನದತ್ತಚರಿತ’, ಮಲ್ಲಿಸೇನನ ‘ನಾಗಕುಮಾರ ಕಾವ್ಯ’, ವಾದಿಬ ಸಿಂಹನ ‘ಗದ್ಯ-ಚಿಂತಾಮಣಿ’ ಮುಂತಾದವುಗಳನ್ನು ಕರ್ನಾಟಕದ ಜೈನ ಕವಿಗಳು ಕ್ರಿ.ಶ. ೯ - ೧೨ನೆಯ ಶತಮಾನದಲ್ಲಿ ರಚಿಸಿದ್ದಾರೆ. 

ತ್ರಿವಿಕ್ರಮನ ‘ನಳಚಂಪೂವು’ ಸಂಸ್ಕೃತದ ಪ್ರಥಮ ಚಂಪೂ-ಕಾವ್ಯ.  ಆತನು ರಾಷ್ಟ್ರಕೂಟರ ಆಸ್ಥಾನದಲ್ಲಿ ಇದ್ದನು. ‘ಮದಾಲಸ ಚಂಪೂ’ ಕೂಡ ಆತನ ಕೃತಿಯೇ. ಚಂಪೂ ಶೈಲಿಯನ್ನು ಮೊದಲು ಕನ್ನಡದಲ್ಲಿ ಅಭಿವೃದ್ಧಿಪಡಿಸಿ, ನಂತರ ಸಂಸ್ಕೃತಕ್ಕೆ ಅಳವಡಿಸಿರುವ ಸಾಧ್ಯತೆಗಳಿವೆ. ಸೋಮದೇವ ಸೂರಿಯ ‘ಯಶಸ್ತಿಲಕ ಚಂಪೂ’, ಚಂಪೂ-ಕಾವ್ಯದ ಮತ್ತೊಂದು ಉತ್ತಮ ಉದಾಹರಣೆ. ಅಮೋಘವರ್ಷನ ‘ಪ್ರಶ್ನೋತ್ತರ ರತ್ನಮಾಲಿಕಾ’, ತತ್ವಚಿಂತನೆಯ ಕುರುಹುಗಳನ್ನು ಹೊಂದಿದ ಸಣ್ಣ ಕಾವ್ಯವಾಗಿದೆ. ಹಲಾಯುಧನ ಕೋಶ, ಕವಿರಹಸ್ಯ ಹಾಗೂ ‘ಮೃತಸಂಜೀವಿನಿ’ಯು ನಿಘಂಟು  ಹಾಗೂ ಛಂದಶಾಸ್ತ್ರವನ್ನು ಒಳಗೊಂಡಿದೆ. 

ಬಿಲ್ಹಣನು ಕಾಶ್ಮೀರದವನಾಗಿದ್ದರೂ, ಕಲ್ಯಾಣದ ಚಾಳುಕ್ಯ ಅರಸ ವಿಕ್ರಮಾದಿತ್ಯನ ಆಸ್ಥಾನ ಕವಿಯಾಗಿದ್ದು ಅತನ ‘ವಿಕ್ರಮಾಂಕದೇವಚರಿತ್ರ’ವು ಒಂದು ಚಾರಿತ್ರಿಕ ಕಾವ್ಯವಾಗಿದೆ. ಕಲ್ಯಾಣ ಚಾಳುಕ್ಯರ ಆಶ್ರಯದಲ್ಲಿ ಕ್ರಿ.ಶ. ೧೨ನೆಯ ಶತಮಾನದಲ್ಲಿ ವಿಜ್ಞಾನೇಶ್ವರನು ಬರೆದ ಯಾಜ್ಞವಲ್ಕ್ಯಸ್ಮೃತಿ ಯ ಭಾಷ್ಯವಾದ ‘ಮಿತಾಕ್ಷರ’ವು ಭಾರತದೆಲ್ಲೆಡೆ ಹಿಂದೂ ಕಾನೂನಿಗೆ ಸಂಬಂಧಿಸಿದ ಅತ್ಯಂತ ಅಧಿಕೃತ ಮೂಲ ಪುಸ್ತಕವೆಂದು ಪರಿಗಣಿಸಲಾಗಿದೆ. ಇದೇ ರಾಜಮನೆತನಕ್ಕೆ ಸೇರಿದ ರಾಜ ಭೂಲೋಕಮಲ್ಲ ಮೂರನೆಯ ಸೋಮೇಶ್ವರನು ‘ಮಾನಸೋಲ್ಲಾಸ’ವೆಂಬ ಮಹಾನ್ ವಿಶ್ವಕೋಶವನ್ನು ರಚಿಸಿದನು.

ಹೊಯ್ಸಳರ ಕಾಲದಲ್ಲಿ, ಸಂಸ್ಕೃತ ಕಾವ್ಯಕ್ಕೆ ವಿದ್ಯಾಚಕ್ರವರ್ತಿ ಕುಟುಂಬವು ಗಣನೀಯ ಕೊಡುಗೆಗಳನ್ನು ನೀಡಿತು. ಎರಡನೆಯ ವಿದ್ಯಾಚಕ್ರವರ್ತಿಯ ‘ಗದ್ಯಕರ್ಣಾಮೃತ’ ಹಾಗೂ ಮೂರನೆಯ ವಿದ್ಯಾಚಕ್ರವರ್ತಿಯ ‘ರುಕ್ಮಿಣಿಕಲ್ಯಾಣ’ಗಳು ಅಪ್ರತಿಮ ಕೃತಿಗಳಾಗಿವೆ. ಶ್ರೀ ಮಧ್ವಾಚಾರ್ಯರ ಸಮಕಾಲೀನನಾದ ತ್ರಿವಿಕ್ರಮ ಪಂಡಿತನು ‘ಉಷಾಹರಣ’ವನ್ನು ಬರೆದಿದ್ದು ಅವನ ಮಗನಾದ ನಾರಾಯಣ ಪಂಡಿತನು ಮಧ್ವವಿಜಯವೆಂಬ ಜೀವನಚರಿತ್ರೆ ಕಾವ್ಯವನ್ನು ಬರೆದನು. ಜಯತೀರ್ಥ ವಿಜಯ, ವಾದಿರಾಜ ಚರಿತಾಮೃತ, ವಿದ್ಯಾಧೀಶವಿಜಯ, ಸತ್ಯನಾಥಾಭ್ಯುದಯ, ರಾಘವೇಂದ್ರ ವಿಜಯ, ಸತ್ಯಬೋಧ ವಿಜಯ, ಸತ್ಯಸಂಧ ವಿಜಯ, ಮುಂತಾದ ಕೃತಿಗಳು ಜೀವನಚರಿತ್ರೆಯನ್ನು ಒಳಗೊಂಡ ಕಾವ್ಯಗಳಾಗಿದ್ದು, ಅಂದಿನ ಕಾಲದ ಬಹಳಷ್ಟು ಐತಿಹಾಸಿಕ ಮಾಹಿತಿಯನ್ನು ಹೊಂದಿವೆ.  ಸೋಮನಾಥ ಕವಿಯ ವ್ಯಾಸಯೋಗಿ ಚರಿತವು ಅನನ್ಯವಾದ ಚಂಪೂ-ಕಾವ್ಯವಾಗಿದ್ದು, ಅದನ್ನು ವಿದ್ವತ್‌ಪೂರ್ಣ ಶೈಲಿಯಲ್ಲಿ ಬರೆಯಲಾಗಿದ್ದು  ಶ್ರೀಮಂತ ಪದಸಂಗ್ರಹವನ್ನು ಅದು ಹೊಂದಿದೆ. ಶ್ರೀ ಮಧ್ವರಿಂದ ಹಿಡಿದು ಶ್ರೀ ಸತ್ಯಬೋಧರವರೆಗಿನ ಮಾಧ್ವ ಸಂತರ ಜೀವನಚರಿತ್ರೆಗಳನ್ನು ‘ಗುರುವಂಶಕಥಾಕಲ್ಪತರು’ವು ಹೊಂದಿದೆ. ಶಂಕರಾಚಾರ್ಯರ ಜೀವನವನ್ನು ಪ್ರತಿಬಿಂಬಿಸುವ ಜೀವನಚರಿತ್ರೆ ಸ್ವರೂಪದ ಎರಡು ಕಾವ್ಯಗಳೆಂದರೆ ಆನಂದಗಿರಿ ಹಾಗೂ ವಿದ್ಯಾರಣ್ಯರ ಶಂಕರ ದಿಗ್ವಿಜಯ.

ವಿಜಯನಗರ ಕಾಲದಲ್ಲಿ ತನ್ನೆಲ್ಲ ಶಾಖೆಗಳಲ್ಲೂ ಸಂಸ್ಕೃತ ಸಾಹಿತ್ಯವು ಅಭಿವೃದ್ಧಿ ಕಂಡಿತು.  ಸಾಯಣನ ಸಹೋದರನಾದ ಭೋಗನಾಥನು ಮಹಾನ್ ಕವಿಯಾಗಿದ್ದು ಆತನ ಉದಾಹರಣಮಾಲವು ಅಲಂಕಾರ ಶಾಸ್ತ್ರದ ವಿವಿಧ ತತ್ವಗಳ ಸಚಿತ್ರ ಸಂಗ್ರಹವಾಗಿದ್ದು; ‘ರಾಮೋಲ್ಲಾಸ’ ‘ತ್ರಿಪುರ ವಿಜಯ’, ‘ಶ್ರೀರಂಗಮಂಜರಿ’ಗಳು ಆತನ ಇತರ ಕಾವ್ಯಗಳು.  ಸ್ವತಃ ಸಾಯಣನೇ ‘ಅಲಂಕಾರ ಸುಧಾನಿದಿ'ü ಹಾಗೂ ‘ಸುಭಾಷಿತ' ಸುಧಾನಿಧಿ ಗಳನ್ನು ರಚಿಸಿದ್ದಾನೆ. ಬುಕ್ಕನ ಸೊಸೆಯಾದ ಗಂಗಾದೇವಿಯು ‘ಮಧುರವಿಜಯ' ಅಥವಾ ‘ವೀರ ಕಂಪರಾಯಚರಿತ’ ಎಂಬ ಕಾವ್ಯವನ್ನು ರಚಿಸಿದಳು. ವಿಜಯನಗರ ಸಾಮ್ರಾಜ್ಯದ ಕೆಲವು ಅರಸರು ಕವಿಗಳಾಗಿದ್ದರು. ರಾಜಮನೆತನದ ಸದಸ್ಯರು ರಚಿಸಿದ ಕೆಲವು ಕೃತಿಗಳ ಪೈಕಿ, ಆ ಕಾಲದ ಪ್ರಮುಖ ಕೃತಿಗಳಾದ ವಿರೂಪಾಕ್ಷನ ‘ನರಕಾಸುರ ವಿಜಯ', ಸಾಳ್ವ ನರಸಿಂಹನ ‘ರಾಮಾಭ್ಯುದಯ', ಕೃಷ್ಣದೇವರಾಯನ ‘ಜಾಂಬವತಿ ಕಲ್ಯಾಣ' ಹಾಗೂ ‘ಮದಾಲಸ ಚರಿತ', ಇತ್ಯಾದಿ, ಪ್ರೌಢ ದೇವರಾಯನ ‘ಮಹಾನಾಟಕ ಸುಧಾನಿಧಿ’ ಹಾಗೂ ಇಮ್ಮಡಿ ದೇವರಾಯನ ‘ರತಿರತ್ನಪ್ರದೀಪಿಕ’ ಎಂದು ಪರಿಗಣಿಸಲಾಗಿದೆ.  ವಿಜಯನಗರ ಕಾಲದಲ್ಲಿ ಡಿಂಡಿಮ ಕುಟುಂಬದ ಕವಿಗಳಾದ ಅನಂತಭಟ್ಟ, ಶಿವಸೂರ್ಯ, ವಾಮನಭಟ್ಟಬಾಣ, ಭಾಸ್ಕರ, ಏಕಾಂಬರನಾಥ, ಅರುಣಗಿರಿನಾಥ, ಮಲ್ಲಿಕಾರ್ಜುನ, ವಿದ್ಯಾರಣ್ಯ, ಮಾಧವಮಂತ್ರಿ, ಭೋಗನಾಥ, ಸ್ವಯಂಭು, ದಿವಾಕರ ಮುಂತಾದ ಅನೇಕ ಕವಿಗಳು ಅಭ್ಯುದಯ ಹೊಂದಿದರು.  ತತ್ವಜ್ಞಾನ, ಕವಿ ಹಾಗೂ ಸಂತರಾದ ಸೋದೆಮಠದ ವಾದಿರಾಜರು ‘ರುಕ್ಮಿಣೀಶ ವಿಜಯ' ಹಾಗೂ ‘ತೀರ್ಥ ಪ್ರಬಂಧ' ಎಂಬ ಕೃತಿಗಳನ್ನು ಬರೆದರು. ಕವಯತ್ರಿಯರಾದ ಕಾಮಾಕ್ಷಿ, ತಿರುಮಲಾಂಬ, ಮಧುರವಾಣಿ, ಮೋಹನಾಂಗಿ, ಮುಂತಾದವರು ಮಹಾನ್ ಕೃತಿಗಳನ್ನು ರಚಿಸಿದ್ದಾರೆ.

ವಿಜಯನಗರದ ಆಡಳಿತಾವಧಿಯಲ್ಲಿ ಸಂತ ವಿದ್ಯಾರಣ್ಯರ ಮಾರ್ಗದರ್ಶನದಲ್ಲಿ, ಸಂಸ್ಕೃತ ಸಾಹಿತ್ಯ ಕ್ಷೇತ್ರದಲ್ಲಿ, ವ್ಯಾಪಕವಾದ ಸಾಹಿತ್ಯಕೃಷಿ ನಡೆಯಿತು.  ಅಸಂಖ್ಯಾತ ವೈದಿಕ ವಿದ್ವಾಂಸರ ನೆರವಿನೊಂದಿಗೆ, ವೇದಗಳನ್ನು ಕುರಿತಾದ ಅಗಾಧ ಪ್ರಮಾಣದಲ್ಲಿ ಭಾಷ್ಯಗಳನ್ನು ಸಾಯಣನು ಬರೆದನು. ತತ್ವಚಿಂತನೆ, ಖಗೋಳಶಾಸ್ತ್ರ, ಸಂಗೀತ, ಇತ್ಯಾದಿಗಳನ್ನು ಒಳಗೊಂಡ ಹಿಂದೂ

ಸಾಂಪ್ರದಾಯಿಕ ಜ್ಞಾನದ ಸುಮಾರು ಎಲ್ಲ ಶಾಖೆಗಳನ್ನೂಒಳಗೊಂಡ ೩೦ಕ್ಕೂ ಹೆಚ್ಚು ಕೃತಿಗಳನ್ನು ಸ್ವತಃ ವಿದ್ಯಾರಣ್ಯರೇ ರಚಿಸಿದ್ದಾರೆ.  ಅಂದಿನ ಕಾಲದಲ್ಲಿ ವಿಪತ್ತಿಗೆ ಸಿಲುಕಿದ್ದ ಸಾಂಪ್ರದಾಯಿಕ ಹಿಂದೂ ಸಂಸ್ಕೃತಿಯನ್ನು ಸಂರಕ್ಷಿಸುವ ಒಂದು ಬಗೆಯ ಚಳವಳಿಯು ನಡೆದಿರುವುದು ಗೋಚರವಾಗುತ್ತದೆ. ಹಿಂದೂ ಉತ್ತರಾಧಿಕಾರತ್ವದ ಎಲ್ಲ ಅಂಶಗಳನ್ನು ಕುರಿತಾದ ಕೃತಿಗಳನ್ನು ಸಂಸ್ಕೃತದಲ್ಲಿ ರಚಿಸಲಾಯಿತು.

ವಿಜಯನಗರ ಸಾಮ್ರಾಜ್ಯದ ಅವನತಿಯ ನಂತರವೂ, ಸಂಸ್ಕೃತ ಸಾಹಿತ್ಯ ಕೃತಿಗಳ ರಚನೆಯು ಮುಂದುವರೆಯಿತು. ಬೃಹತ್ ಸಂಖ್ಯೆಯ  ಕೃತಿಗಳು ಸಂಸ್ಕೃತ ಸಾಹಿತ್ಯಕ್ಕೆ ಕನ್ನಡ ಕವಿಗಳ ಅವಿರತ ಕೊಡುಗೆಯ ಸಂಪ್ರದಾಯವನ್ನು ಸೂಚಿಸುತ್ತದೆ - ಅವುಗಳ ಪೈಕಿ, ಅನಂತಚಾರ್ಯರ ‘ಯಾದವ ಪಾಂಡವ ರಾಘವಿ'ಯ, ಷಡಕ್ಷರದೇವನ ‘ಕವಿ ಕರ್ಣರಸಾಯನ', ಏಕಾಂಬರ ಅವರ ‘ವೀರಭದ್ರ ವಿಜಯ', ನರಸಕವಿಯ ‘ನಂಜರಾಜ ಯಶೋಭೂಷಣ', ಸುಧೀಂದ್ರಯೋಗಿಯ ‘ಸುಭದ್ರಾ ಧನಂಜಯ', ಸುಮತೀಂದ್ರರ ‘ಸುಭದ್ರಾ ಪರಿಣಯ' ಹಾಗೂ ರಾಮಾಚಾರ್ಯರ ‘ಕೊಂಕಣಾಭ್ಯುದಯ' ಸೇರಿವೆ.  ಪ್ರಧಾನಿ ವೆಂಕಟಮಾತ್ಯನು ಸಂಸ್ಕೃತ ನಾಟಕದ ಎಲ್ಲ ಮಾದರಿಗಳನ್ನೂ ಬರೆಯುವ ಪ್ರಯೋಗವನ್ನು ಮಾಡಿದನು. ನಾಟಕ, ಪ್ರಕರಣ, ಪ್ರಹಸನ, ಭಾನ ಇತ್ಯಾದಿಗಳನ್ನು ಬರೆದಿದ್ದು ಆತನ "ಅಲಂಕಾರ ಮಣಿದರ್ಪಣವು" ಕಾವ್ಯ-ಸಂಬಂಧಿತವಾದ ಎಲ್ಲ ಅಂಶಗಳನ್ನೂ ಒಳಗೊಂಡಿದೆ.

ಶಾಸ್ತ್ರದಲ್ಲಿ, ಅದರಲ್ಲೂ ವೇದಾಂತದಲ್ಲಿ ಕರ್ನಾಟಕದ ಕೊಡುಗೆ ಅಪಾರವಾದುದು.ಮಹಾನ್ ಸುರೇಶ್ವರ ವಿಶ್ವರೂಪರ ಹೆಸರು ಶೃಂಗೇರಿ ಪೀಠದೊಂದಿಗೆ ನಂಟು ಹೊಂದಿದೆ. ಆತನ ‘ಬೃಹದಾರಣ್ಯಭಾಷ್ಯವಾರ್ತಿಕ' ಹಾಗೂ ‘ನೈಷ್ಕರ್ಮ್ಯಸಿದ್ಧಿ' ಸುಪ್ರಸಿದ್ಧವಾಗಿವೆ. ಗೀತಭಾಷ್ಯ ಹಾಗೂ ಉಪನಿಷತ್ತುಗಳನ್ನು ಕುರಿತಾದ ಆನಂದಗಿರಿಯ ಭಾಷ್ಯಗಳು, ಶಂಕರರನ್ನು ಅರಿತುಕೊಳ್ಳಲು ನೆರವಾಗುತ್ತವೆ. ಕರ್ನಾಟಕದ ವಿದ್ವಾಂಸರು ಬರೆದ ವಿಶಿಷ್ಟಾದ್ವೈತದ ಅಪ್ರತಿಮ ಕೃತಿಗಳ ಪೈಕಿ, ರಾಮಾನುಜಾಚಾರ್ಯರ ಸಂಬಂಧಿಯಾಗಿದ್ದು, ಅವರೊಂದಿಗೆ ಕರ್ನಾಟಕಕ್ಕೆ ವಲಸೆ ಬಂದ ರಾಮಮಿಶ್ರದೇಶಿಕ, ವತ್ಸ್ಯವರದ ಹಾಗೂ ವರದವಿಷ್ಣುಮಿಶ್ರರ ಕೃತಿಗಳನ್ನು ಇಲ್ಲಿ ಸ್ಮರಿಸಬೇಕು. ಪರಕಾಳಯ, ಶ್ರೀನಿವಾಸಾಚಾರ್ಯ ಹಾಗೂ ಅನಂತಚಾರ್ಯರ ಕೃತಿಗಳೂ ಗಣನೀಯವಾದವುಗಳಾಗಿದೆ. ಅದ್ವೈತ ವಿದ್ವಾಂಸರಿಗಿಂತ, ಪ್ರಾದೇಶಿಕ ಆಧಾರದ ಮೇಲೆ ವಿಶಿಷ್ಟಾದ್ವೈತದ ವಿದ್ವಾಂಸರ ವಿಂಗಡನೆಯನ್ನು ಮಾಡುವುದು ಇನ್ನೂ ಕಠಿಣ. ಮೇಲುಕೋಟೆ, ಮೈಸೂರು ಹಾಗೂ ಕರ್ನಾಟಕದ ಇತರ ವೈಷ್ಣವ ಕೇಂದ್ರಗಳೊಂದಿಗಿನ ಇವರ ಸಂಪರ್ಕದಿಂದ, ಅವರು ರಚಿಸಿದ ಕೃತಿಗಳು ಕರ್ನಾಟಕದ ಕೊಡುಗೆಗಳೆಂದು ಪರಿಗಣಿಸಲು ಸಾಕು.

ದ್ವೈತ ತತ್ವಚಿಂತನೆಯ ಸಂಸ್ಥಾಪಕರು ತತ್ವಜ್ಞಾನವೆ ನೀಡಿದ ಕೊಡುಗೆಗಳ ಮೇಲಿನ ಏಕಸಾಮ್ಯ ಹಕ್ಕು ಕರ್ನಾಟಕಕ್ಕೆ ಸಲ್ಲಬೇಕಾಗಿದೆ. ಮಧ್ವಾಚಾರ್ಯರು ಪ್ರಸ್ಥಾನತ್ರಯದ ಮೇಲೆ, ಅಂದರೆ, ಬ್ರಹ್ಮಸೂತ್ರ, ಉಪನಿಷತ್ತುಗಳು ಹಾಗೂ ಭಗವದ್ಗೀತೆ ಕುರಿತಾಗಿ ಭಾಷ್ಯಗಳನ್ನು ಬರೆದರು. ಋಗ್ವೇದದ ಮೇಲೂ ಅವರು ಭಾಷ್ಯಗಳನ್ನು ಬರೆದರು. ಮಹಾಭಾರತ ಹಾಗೂ ಭಾಗವತಸಾರ ಸಂಗ್ರಹದ ಪ್ರಕಟಣೆಗಳನ್ನು ಸಿದ್ಧಪಡಿಸಿದರು. ಅವರು ಬರೆದ ೩೭ ಕೃತಿಗಳಲ್ಲಿ, ಸಂಪೂರ್ಣ ಹಿಂದೂ ಪವಿತ್ರ ಸಾಹಿತ್ಯದ ಮರು-ಮೌಲ್ಯಮಾಪನವನ್ನು ಮಾಡಿ, ದ್ವೈತ ಸಿದ್ಧಾಂತವನ್ನು ಸ್ಥಾಪಿಸಿದರು. ಅವರ ಮುಖ್ಯ ಭಾಷ್ಯಕಾರರಾದ ಜಯತೀರ್ಥರು ನ್ಯಾಯಸುಧಾವನ್ನು ರಚಿಸಿದರು; ಅದರಲ್ಲಿ ಭಾರತೀಯ ತತ್ವಚಿಂತನೆಯ ಎಲ್ಲ ಪ್ರಮುಖ ಸಮಸ್ಯೆಗಳನ್ನು ಚರ್ಚಿಸಿ, ಅವುಗಳಲ್ಲಿ ಅನೇಕಕ್ಕೆ ಹೊಸ ಆಯಾಮವನ್ನು ತಂದರು. ವ್ಯಾಸರಾಜರು ಮತ್ತೊಬ್ಬ ದ್ವೈತ ಬರಹಗಾರರು. ಅವರ ಚಂದ್ರಿಕ, ನ್ಯಾಯಾಮೃತ ಹಾಗೂ ತರ್ಕತಾಂಡವ ಮಹಾನ್ ತತ್ವಮೀಮಾಂಸಾ ಕೃತಿಗಳಾಗಿವೆ.

 

ಕುಶಲ ಕಲೆಗಳು

ಕುಶಲ ಕಲೆಗಳಲ್ಲಿ, ಅದರಲ್ಲೂ ಸಂಗೀತವು ವಿಜಯನಗರದ ಅವಧಿಯಲ್ಲಿ ಬಹಳಷ್ಟು ಮಟ್ಟಿಗೆ ಅಭಿವೃದ್ಧಿಯಾಯಿತು.  ವಿಜಯನಗರದ ರಾಯರು ಸಂಗೀತದ ಮಹಾನ್ ರಸಿಕರಾಗಿದ್ದು  ಈ ವಿಷಯವನ್ನು ಕುರಿತಾಗಿ ಪರಿಣಿತರಾಗಿದ್ದರು. ಅದರಲ್ಲೂ ವಿದ್ಯಾರಣ್ಯರು ಕರ್ನಾಟಕ ಸಂಗೀತಕ್ಕೆ ಗಣನೀಯ ಕೊಡುಗೆಯನ್ನು ನೀಡಿದರು.  ಅವರು ಬರೆದ ‘ಸಂಗೀತಸಾರ’ವು ಈಗ ಲಭ್ಯವಾಗದಿದ್ದರೂ, ನಿಸ್ಸಂಶಯವಾಗಿ, ರಘುನಾಥ ಹಾಗೂ ಇತರರ ಸಂಗೀತವನ್ನು ಕುರಿತಾಗಿ ಬರೆಯುವ ನಂತರದ ಬರಹಗಾರರಿಗೆ ಅದು ಪ್ರೇರಣೆ ಹಾಗೂ ಆಧಾರಗಳೆರಡನ್ನೂ ನೀಡಿತು. ದೇವರಾಯನ ಆಸ್ಥಾನದ ಚತುರಾಲಂಕಾರನಾಥನು ಸಾರಂಗದೇವನ ‘ಸಂಗೀತ ರತ್ನಾಕರ’ವನ್ನು ಕುರಿತಂತೆ ಅತ್ಯುತ್ತಮ ಭಾಷ್ಯಕಾರನಾಗಿದ್ದನು. ಈ ಭಾಷ್ಯವು ಸಂಗೀತದ ವಿಶ್ವಕೋಶವಾಗಿದ್ದು, ಭರತನ ಸಂಗೀತ ತತ್ವವನ್ನು ಅರಿತುಕೊಳ್ಳಲು ಅತ್ಯಗತ್ಯವಾದ ಕೃತಿಯಾಗಿದೆ. ಸಾಳ್ವ ರಾಜರ ಮಂತ್ರಿಯಾದ ಗೋಪ ತಿಪ್ಪನು, ಮಾರ್ಗ ಹಾಗೂ ದೇಶೀ ತಾಳಗಳ ಪ್ರಕರಣ ಗ್ರಂಥವಾದ ತಾಳದೀಪಿಕದ ಲೇಖಕ. ಈ ಕಾಲದ ಸಂಗೀತಗಾರನಾದ ದೇವಾಚಾರ್ಯನು, ನೃತ್ಯ ಹಾಗೂ ಸಂಗೀತದ ಪ್ರಕರಣ ಗ್ರಂಥವಾದ ‘ಸಂಗೀತ ಮುಕ್ತಾವಳಿ’ಯ ಲೇಖಕನಾಗಿದ್ದಾನೆ.

ಕಟಕ್‌ನಿಂದ ವಿಜಯನಗರಕ್ಕೆ ವಲಸೆ ಬಂದ ಲಕ್ಷ್ಮಿನಾರಾಯಣನು, ಕೃಷ್ಣದೇವರಾಯನ ಆಸ್ಥಾನದಲ್ಲಿ ಖ್ಯಾತಿಹೊಂದಿದ ಸಂಗೀತಗಾರನಾಗಿದ್ದನು.ಅಭಿನವ-ಭರತಾಚಾರ್ಯನೆಂಬ ಬಿರುದನ್ನು ಪಡೆದಿದ್ದು ಸಂಗೀತದ ವಿವಿಧ ಅಂಶಗಳನ್ನು ಕುರಿತಾಗಿ ಬರೆದ ‘ಸಂಗೀತ ಸರ್ವೋದಯ’ ಕೃತಿಯ ಲೇಖಕ. ಅಳಿಯ ರಾಮರಾಯನ ಆಸ್ಥಾನದಲ್ಲಿದ್ದ ರಾಮಯಮಾತ್ಯನು ‘ಸ್ವರಮೇಳಾ ಕಲಾನಿಧಿ’ಯ ಲೇಖಕನಾಗಿದ್ದಾನೆ. ಪುಂಡರೀಕ ವಿಠ್ಠಲನೆಂಬ ಮತ್ತೊಬ್ಬ ಹೆಸರಾಂತ ಸಂಗೀತಗಾರನು ರಾಮಯಮಾತ್ಯನ ಸಮಕಾಲೀನನಾಗಿದ್ದನು. ಮತ್ತೊಬ್ಬ ಖ್ಯಾತ ಸಂಗೀತಗಾರನಾದ ಲಕ್ಷ್ಮಿಧರನು, ತಿರುಮಲರಾಯನ ಆಸ್ಥಾನದಲ್ಲಿ ಹೆಸರುಗಳಿಸಿ, ಸಂಗೀತ ಕೃತಿಯಾದ ‘ಭರತಶಾಸ್ತ್ರ’ ಗ್ರಂಥವನ್ನು ಬರೆದನೆಂದು ನಂಬಲಾಗಿದೆ. ಸುಪ್ರಸಿದ್ಧ ಆಶ್ರಯದಾತನಾದ ರಘುನಾಥನು ಸ್ವತಃ ಸಂಗೀತದಲ್ಲಿ ಪ್ರಾವೀಣ್ಯತೆಯನ್ನು ಪಡೆದವನಾಗಿದ್ದು, ‘ಸಂಗೀತ ಸುಧಾ’ ಎಂಬ ಗ್ರಂಥದ ಲೇಖಕನಾಗಿದ್ದಾನೆ.  ಗೋವಿಂದ ದೀಕ್ಷಿತನ ಮಗನಾದ ವೆಂಕಟಮಖಿಯು, ‘ಚತುರ್ದಂಡಿಪ್ರಕಾಶಿಕ’ ಎಂಬ ಸಂಗೀತ ಸಂಬಂಧಿ ಗ್ರಂಥದ ಲೇಖಕನಾಗಿದ್ದಾನೆ.

ರಾಜಕೀಯ, ತತ್ವಚಿಂತನೆ, ಧರ್ಮ, ಸಾಹಿತ್ಯ ಹಾಗೂ ಕುಶಲಕಲೆಗಳಂತಹ ಕಲಾಕ್ಷೇತ್ರದ ಎಲ್ಲ ಸ್ಥರಗಳಲ್ಲೂ ಬಿರುಸಾದ ಚಟುವಟಿಕೆಯನ್ನು ವಿಜಯನಗರವು ಕಂಡಿತು. ಹಾಗಾಗಿ, ಭಾರತೀಯ ಸಂಸ್ಕೃತಿ ಹಾಗೂ ಕಲಿಕೆಯನ್ನು ಸಂರಕ್ಷಿಸಿ, ಶ್ರೀಮಂತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವು.  ಕನ್ನಡದ ಮಹಿಳೆಯರೂ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡುವಲ್ಲಿ ಹಿಂದೆ ಬೀಳಲಿಲ್ಲ. ಗಂಗಾದೇವಿ, ತಿರುಮಲಾಂಬ, ಮಧುರವಾಣಿ, ರಮಾಭದ್ರಾಂಬ ಹಾಗೂ ಇತರ ಮಹಿಳೆಯರು, ತಮ್ಮ ಕಾವ್ಯ ಚಾತುರ್ಯದ ಮೂಲಕ ಭಾರತೀಯ ಮಹಿಳಾ ಕವಯತ್ರಿಯರ ತಾರಾ ಮಂಡಲದಲ್ಲಿ ಶಾಶ್ವತ ಸ್ಥಾನವನ್ನು ಪಡೆದಿದ್ದಾರೆ. ಸಂಸ್ಕೃತ ಸಾಹಿತ್ಯದ ಸೌಂದರ್ಯವನ್ನು ಶ್ರೀಮಂತಗೊಳಿಸಿ, ನಮ್ಮ ಚರಿತ್ರೆಗೆ ಅಧಿಕೃತ ಆಕರ ಮೂಲಗಳನ್ನು ಒದಗಿಸಿದ್ದಾರೆ.

ಬುಕ್ಕನ ಸೊಸೆ, ಹಾಗೂ ಕಂಪಣನ ರಾಣಿಯಾದ ಗಂಗಾದೇವಿಯು, ಮಧುರೆಯನ್ನು ಗೆದ್ದ ಕಂಪಣನ ವಿಜಯವನ್ನು ವಿವರಿಸುವ ‘ಮಧುರವಿಜಯ’ಕಾವ್ಯದ ಲೇಖಕಿಯಾಗಿದ್ದಾಳೆ.  ಬಹುತೇಕ ಸಂಸ್ಕೃತ ಕವಿಗಳ ಸಾಮಾನ್ಯ ವಾಡಿಕೆಯಂತೆ, ಚಿರಪರಿಚಿತ ಇತಿಹಾಸದಿಂದ ವಸ್ತುವಿಷಯವನ್ನು ಆಯ್ದುಕೊಳ್ಳುವ ಬದಲು, ತನ್ನ ಅಮೋಘವಾದ ಕಾವ್ಯ ಕೌಶಲ್ಯವನ್ನು ತೋರಲು ಒಪುö್ಪವ ವಿಷಯವಾದ ತನ್ನ ಗಂಡ ಕಂಪಣರಾಯನ ಜೀವನಚರಿತ್ರೆಯನ್ನು ಆಯ್ಕೆ ಮಾಡಿಕೊಂಡಿದ್ದಾಳೆ.  ಆಕೆಯು ಮಹಾಕಾವ್ಯದ ಶೈಲಿಯನ್ನು ಅಳವಡಿಸಿಕೊಂಡಿದ್ದು, ಕಾವ್ಯದಲ್ಲಿ ಋತು, ಯುದ್ಧ ಹಾಗೂ ಪ್ರೇಮಸಲ್ಲಾಪದ ವರ್ಣನೆಗಳು ಸೂಕ್ತ ಸ್ಥಾನವನ್ನು ಕಂಡುಕೊಂಡಿವೆ. ಪ್ರಾಚೀನ ಕವಿಗಳಿಗೆ ನಮನ ಸಲ್ಲಿಸುವಲ್ಲಿ ತನಗೆ ಪ್ರೇರಣೆಯನ್ನು ನೀಡಿದ ಮಹಾನ್ ಕವಿ ಕಾಳಿದಾಸನ ಕೃತಿಗಳಿಗೆ ತಾನು ಚಿರಋಣಿಯೆಂದು ವಿನಮ್ರವಾಗಿ ವಿನಂತಿಸಿದ್ದು ಇವ್ವಳ ಕೆಲವು ವರ್ಣನೆಗಳಲ್ಲಿ ಕಾಳಿದಾಸನ ಪ್ರಭಾವದ ಛಾಯೆಯನ್ನು ಕಾಣಬಹುದಾಗಿದ್ದು, ಕವಿಯತ್ರಿಯ ಕಲ್ಪನೆಯ ಮೂಸೆಯಲ್ಲಿ ಮಾರ್ಪಾಡಾಗಿ ವಿಶಿಷ್ಟ ಸೊಬಗನ್ನು ಪಡೆಯುವ ಮೂಲಕ ವಿನೂತನ ಸೌಂದರ್ಯ ಹಾಗೂ ಲವಲವಿಕೆಗಳನ್ನು ಪ್ರದರ್ಶಿಸಿವೆ.

ಒರಿಸ್ಸಾದ ಪ್ರತಾಪರುದ್ರ ಗಜಪತಿಯ ಮಗಳಾದ ತುಕ್ಕಾದೇವಿಯು, ಕೃಷ್ಣದೇವರಾಯನ ರಾಣಿಯರಲ್ಲಿ ಒಬ್ಬಳಾಗಿದ್ದಳು, ಆದರೆ ಅವರ ಮದುವೆಯು ಸುಖಕರವಾಗಿರಲಿಲ್ಲ. ಸಚ್ಚಾರಿತ್ರ ಮಹಿಳೆಯಾದ ಆಕೆಯು ತನ್ನ ಕರ್ಮಕ್ಕೆ ತಲೆಬಾಗಿ, ತನ್ನ ಹತಾಶ ಪರಿಸ್ಥಿತಿಯನ್ನು ಕುರಿತಾಗಿ ಕೆಲವು ಸಾಲುಗಳನ್ನು ರಚಿಸಿದಳು. ಆಕೆಯು ಬರೆದಳೆಂದು ಹೇಳಲಾದ ‘ತುಕ್ಕಾಪಂಚಕಂ’ನ ಐದು ಶ್ಲೋಕಗಳು, ಆಕೆಯು ಸಿಲುಕಿಕೊಂಡಿದ್ದ ದುಃಖಕರ ಪರಿಸ್ಥಿತಿಯನ್ನು ಸೂಕ್ಮವಾಗಿ ವಿವರಿಸಿವೆ.

ಐತಿಹಾಸಿಕ ಮಹತ್ವವನ್ನು ಪಡೆದ ಸುಂದರ ಪ್ರಣಯದ ಗದ್ಯ ಕೃತಿಯಾದ ‘ವರದಾಂಬಿಕಾ ಪರಿಣಯ’ದ ಕತೃವಾದ ತಿರುಮಲಾಂಬ, ಅಚ್ಯುತರಾಯನ ರಾಣಿಯಾಗಿದ್ದಳು. ಹುಟ್ಟು ಪ್ರತಿಭಾಶಾಲಿ ಹಾಗೂ ಬಹುಮುಖಿ ವಿದ್ವಾಂಸಳಾದ ಆಕೆಗೆ, ಸಂಸ್ಕೃತ ಭಾಷೆಯ ಮೇಲೆ ಅಮೋಘ ಹಿಡಿತವಿದ್ದು, ಇದು ಅವಳ ಕೃತಿಯಲ್ಲಿ ವ್ಯಕ್ತವಾಗಿದೆ.  ಆಕೆಯ ಗಂಡನಾದ ಅಚ್ಯುತರಾಯನು ಮತ್ತೊಂದು ವಧುವನ್ನು ವರಿಸಿದಾಗ, ಆಕೆಯು ಮತ್ಸರದಿಂದ ಬಳಲಿದರೂ, ಅಚ್ಯುತರಾಯವರದಾಂಬಿಕೆಯರ ವಿವಾಹವನ್ನು ಅತ್ಯಂತ ಸುಂದರವಾಗಿ ವರ್ಣಿಸಿದ್ದಾಳೆ. ಈ ಸಾಹಿತ್ಯ ಕೃತಿಯು ಅವರ ಮಗನಾದ ವೆಂಕಟಾದ್ರಿಯನ್ನು ಯುವರಾಜನಾಗಿ ಪಟ್ಟಾಭಿಷೇಕ ಮಾಡುವುದರೊಂದಿಗೆ ಕೊನೆಗೊಳ್ಳುತ್ತದೆ. ಕಣ್ಣಿಗೆ ಕಟ್ಟುವಂತಹ ವರ್ಣನೆ ಹಾಗೂ ಸುಂದರ ಭಾಷಾ ಪ್ರಯೋಗ ಬಾಣನ ಗದ್ಯವನ್ನು ನೆನಪಿಗೆ ತರುತ್ತದೆ.

ಕೃಷ್ಣದೇವರಾಯನ ಮಗಳೂ, ರಾಮರಾಯನ ಮಡದಿಯೂ ಆದ ಮೋಹನಾಂಗಿಯು, ಪ್ರೇಮ ಕಾವ್ಯವಾದ ‘ಮಾರೀಚಪರಿಣಯ’ ಕೃತಿಯನ್ನು ಬರೆದಳೆಂದು ಹೇಳಲಾಗುತ್ತದೆ. ಮತ್ತೊಬ್ಬ ಕವಿಯತ್ರಿಯಾದ ಅಭಿರಾಮಾಕ್ಷಿಯು ಡಿಂಡಿಮನ ಕುಟುಂಬಕ್ಕೆ ಸೇರಿದ್ದು, ರಾಮನ ಕಥೆಯನ್ನು ೨೪ ಸರ್ಗ ಗಳಲ್ಲಿ (ಅಧ್ಯಾಯ) ತಿಳಿಸುವ ‘ಅಭಿನವ ರಾಮಾಭ್ಯುದಯ’ ಎಂಬ ಕಾವ್ಯದ ರಚನಕಾರ್ತಿ ಎಂದು ಹೇಳಲಾಗುತ್ತದೆ.

 

ಕರ್ನಟಕದಲ್ಲಿ ಇತರೆ ಭಾಷೆಗಳು

ತುಳು

ತುಳು ಭಾಷೆಯು, ದ್ರಾವಿಡ ಕುಲಕ್ಕೆ ಸೇರಿದ ಪುರಾತನ ಭಾಷೆಗಳಲ್ಲಿ ಒಂದು. ತುಳು ಮಾತನಾಡುವ ತುಳುವ ಜನರನ್ನು ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಬಹುತೇಕವಾಗಿ ಕಾಣಬಹುದು. ಉತ್ತರದಲ್ಲಿ ಕಲ್ಯಾಣಪುರ ನದಿ, ಪಶ್ಚಿಮದಲ್ಲಿ ಅರಬ್ಬಿ ಸಮುದ್ರ, ಪೂರ್ವದಲ್ಲಿ ಪಶ್ಚಿಮ ಘಟ್ಟ ಹಾಗೂ ದಕ್ಷಿಣದಲ್ಲಿ ಪಯಸ್ವಿನಿ / ಚಂದ್ರಗಿರಿ ನದಿಯಿಂದ ತುಳುನಾಡು ಆವೃತವಾಗಿದೆ. ತುಳುವಿಗೆ ತನ್ನದೇ ಆದ ಭಾಷಾ ವೈಚಿತ್ರ್ಯಗಳಿದ್ದರೂ ಕನ್ನಡ ಹಾಗೂ ಇತರ ದ್ರಾವಿಡ ಭಾಷೆಗಳೊಂದಿಗೆ ಅನೇಕ ಸಾಮಾನ್ಯ ಗುಣಲಕ್ಷಣಗಳನ್ನು ಹಂಚಿಕೊಂಡಿದೆ. ಪಾಡ್ದನಗಳು, ಸಂದಿ, ಕಬಿತ, ಉರಳು, ಪಡಿಪು, ನೃತ್ಯ-ಪದ್ಯ, ಗಾದೆ, ಒಗಟು, ಜೋಗುಳ, ಅಜ್ಜಿಕಥೆ, ಇತ್ಯಾದಿಯಾಗಿ ವಿಸ್ತೃತವಾದ ಜಾನಪದ ಸಂಪ್ರದಾಯವನ್ನು ಅದು ಹೊಂದಿದೆ.

ಸಾಮಾನ್ಯವಾಗಿ, ತುಳು ಬ್ರಾಹ್ಮಣ ರಿಗೆ ವೇದ ಶಾಸ್ತ್ರಗಳು ತಿಳಿದಿರುತ್ತವೆ. ರಾಮಾಯಣ ಹಾಗೂ ಮಹಾಭಾರತದಂತಹ ಮಹಾಕಾವ್ಯ ಆಧಾರಿತ ಪ್ರಸಂಗಗಳನ್ನು ಅವರ ಜಾನಪದ ಗೀತೆಗಳು ಒಳಗೊಂಡಿವೆ. ಕೆಳಜಾತಿಯವರು ಹಾಗೂ ಅಸ್ಪೃಶ್ಯರಲ್ಲಿ ಭೂತಾರಾಧನಾ ಸಂಪ್ರದಾಯವು ವಾಡಿಕೆಯಲ್ಲಿದೆ.

ಇತರ ದ್ರಾವಿಡ ಭಾಷೆಗಳಿಗೆ ಹೋಲಿಸಿದಾಗ, ತುಳುವಿನಲ್ಲಿ ಶ್ರೇಷ್ಠ ಸಾಹಿತ್ಯ ಅತ್ಯಲ್ಪ ಪ್ರಮಾಣದಲ್ಲಿದೆ. ಕಳೆದ ೧೫೦ ವರ್ಷಗಳಲ್ಲಿ, ತನ್ನ ಸಾಹಿತ್ಯ ಕೃತಿಗಳಿಗಾಗಿ ತುಳು, ಕನ್ನಡಲಿಪಿಯನ್ನು ಅಳವಡಿಸಿಕೊಂಡಿದೆ. ಆರಂಭದಲ್ಲಿ, ಬಾಸಲ್ ಮಿಷನ್ ಕ್ರಿಶ್ಚಿಯನ್ನರು ರಚಿಸಲು ಪ್ರಾರಂಭಿಸಿದ ತುಳು ಸಾಹಿತ್ಯದ ಕೃತಿಗಳು, ಕ್ರಿಶ್ಚಿಯನ್ ಧರ್ಮದ ಬೋಧನೆಗಳ ಅನುವಾದಗಳಾಗಿದ್ದರೂ, ‘ತುಳು ಆಂಗ್ಲ ನಿಘಂಟು ಇತ್ಯಾದಿ ಕೆಲವು ಮುಖ್ಯ ಕೃತಿಗಳನ್ನು ನಂತರ ಪ್ರಕಟಿಸಲಾಯಿತು. ಅವರ ಜಾನಪದ  ಹಾಡುಗಳ ಸಂಗ್ರಹಗಳಲ್ಲದೇ ದಕ್ಷಿಣ ಕನ್ನಡ ಹಾಗೂ ತುಳುವ ಸಂಸ್ಕೃತಿಯ ಇತಿಹಾಸವನ್ನೂ ಪ್ರಕಟಿಸಲಾಯಿತು.  ತುಳು ವ್ಯಾಕರಣ, ಉಪಭಾಷೆಗಳು ಹಾಗೂ ತುಳು ಕ್ರಿಯಾಪದದ ಪರಿವರ್ತನೆಯ ವಿಶ್ಲೇಷಣೆಗೆ ಸಂಬಂಧಿಸಿದಂತೆ ವಿದ್ವತ್‌ಪೂರ್ಣ ಪ್ರಬಂಧ ಹಾಗೂ ಕೃತಿಗಳನ್ನು ೨೦ನೆಯ ಶತಮಾನದ ಉತ್ತರಾರ್ಧದಲ್ಲಿ ಪ್ರಕಟಿಸಲಾಯಿತು. ತುಳುವಿನ ಪದಸಂಗ್ರಹ/ನಿಘಂಟು ಹಾಗೂ ಪಠ್ಯಪುಸ್ತಕಗಳನ್ನು ಅಭಿವೃದ್ಧಿಪಡಿಸುವಲ್ಲಿ ಕೇರಳ ಹಾಗೂ ಕರ್ನಾಟಕ ಸರ್ಕಾರಗಳು ಕೈಜೋಡಿಸಿವೆ.  ಯಕ್ಷಗಾನದ ಹಲವಾರು ಕನ್ನಡ ನಾಟಕ ಹಾಗೂ ಧಾರ್ಮಿಕ ಕೃತಿಗಳನ್ನು ತುಳುವಿಗೆ ಅನುವಾದ ಮಾಡಲಾಗಿದೆ. ತುಳು ಸಾಹಿತ್ಯದ ಪ್ರಾರಂಭಿಕ ಲೇಖಕರ ಪೈಕಿ ಸಂಕಯ್ಯ ಭಾಗವತ್, ಶೀನಪ್ಪ ಹೆಗಡೆ, ಕೆ.ಬಿ. ನಾರಾಯಣ ಶೆಟ್ಟಿ, ಎಮ್.ವಿ. ಹೆಗ್ಡೆ ಮುಂತಾದವರು ಗಮನ ಸೆಳೆಯುತ್ತಾರೆ.  ೧೯೨೮ರಲ್ಲಿ, ಎಸ್.ಯು.ಫಣಿಯಾಡಿ ತುಳು ‘ಮಹಾಸಭಾ’ವನ್ನು ಉಡುಪಿಯಲ್ಲಿ ಸ್ಥಾಪಿಸಿದರು; ಇದು ತುಳು ಸಾಹಿತ್ಯ ಹಾಗೂ ಸಂಸ್ಕೃತಿಗೆ ಬಹಳಷ್ಟು ಉತ್ತೇಜನ ನೀಡಿ, ತುಳು ಭಾಷೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಳವಳಿಗಳಿಗೆ ನಾಂದಿ ಹಾಡಿತು.

ತುಳು ರಂಗಮಂದಿರ ಹಾಗೂ ನಾಟಕಗಳು ಈ ಅವಧಿಯಲ್ಲಿ ಅಭಿವೃದ್ಧಿಯಾದವು. ಕೆ.ದೊಡ್ಡಣ್ಣ ಶೆಟ್ಟಿ, ಕೆ.ಎನ್. ಟೈಲರ್, ರಾಮ ಕಿರೋಡಿಯನ್, ಯು.ಆರ್. ಚಂದರ್, ಕೆ.ಬಿ. ಭಂಡಾರಿ, ಮಚ್ಛೇಂದ್ರನಾಥ, ರಾಮಚಂದ್ರಾಚಾರ್ಯ, ಸೀತಾರಾಮ ಕುಲಾಳ್, ಪಿ.ಎಸ್. ರಾವ್, ವಿಶುಕುಮಾರ್ ಮುಂತಾದವರು ತುಳು ರಂಗಮಂಚದ ಆದ್ಯ ಪ್ರವರ್ತಕರಾಗಿದ್ದರು. ತುಳು ನುಡಿಗಟ್ಟು ಹಾಗೂ ನಾಣ್ಣುಡಿಗಳು ಅಭಿವ್ಯಕ್ತತೆಯ ಸೌಂದರ್ಯವನ್ನು ಈ ಅವಧಿಯ ಸಾಮಾಜಿಕ ಚಟುವಟಿಕೆಗಳು ಪ್ರತಿನಿಧಿಸಿವೆ.  ಕರ್ನಾಟಕದ ಅಮೋಘ ಜಾನಪದ ನೃತ್ಯವಾದ ಯಕ್ಷಗಾನ ತುಳುವಿನಲ್ಲೂ ಜನಪ್ರಿಯವಾಯಿತು. ಅಮೃತ ಸೋಮೇಶ್ವರ, ಅನಂತರಾಮ ಬಂಗಾಡಿ, ಪುರುಷೋತ್ತಮ ಪೂಂಜ, ನಿತ್ಯಾನಂದ ಕಾರಂತ, ಅಶೋಕ ಎ. ಶೆಟ್ಟಿ, ಕೆ.ಶೇಖರ, ವಿ.ಶೆಟ್ಟಿ, ಜಿ. ಬಾಯರಿ, ಮಧುಕುಮಾರ್ ಹಾಗೂ ಎ.ಎನ್.ಶೆಟ್ಟಿ ಯಂತಹ ತುಳು ಕವಿಗಳು ತುಳು ಯಕ್ಷಗಾನ ಮಹಾಕಾವ್ಯಗಳನ್ನು ರಚಿಸಿದ್ದಾರೆ. ತುಳು ಭಾಷೆ ಹಾಗೂ ಸಂಸ್ಕೃತಿಯ ಪ್ರಚಾರಕ್ಕಾಗಿ ಕೆಲಸ ಮಾಡುತ್ತಿರುವ ಕೆಲವು ಸಂಸ್ಥೆಗಳಲ್ಲಿ, ಮಂಗಳೂರಿನ ತುಳು ಕೂಟವು ಒಂದು ಸಂಸ್ಥೆಯಾಗಿದ್ದು ಕೆಲವು ತುಳು ನಿಯತಕಾಲಿಕಗಳನ್ನು ಪ್ರಕಟಿಸುತ್ತಿದೆ.

ಅನೇಕ ಕವಿಗಳು ತುಳು ಸಾಹಿತ್ಯದಲ್ಲಿ ಹೆಸರು ಗಳಿಸಿದ್ದಾರೆ. ಅವರಲ್ಲಿ  ಮಂದಾರ ಕೇಶವ ಭಟ್ ಪ್ರಮುಖರು; ಅವರ ಮಂದಾರ ರಾಮಾಯಣವು ಒಂದು ಅದ್ಭುತ ಮಹಾಕಾವ್ಯವಾಗಿದೆ. ವೆಂಕಟರಾಜು ಪುಣಿಂಚಿತ್ತಾಯ, ಪಿ.ವಿ. ಆಚಾರ್ಯ, ರಾಮಕೃಷ್ಣ ಆಚಾರ್, ಧೂಮಪ್ಪ ಮಾಸ್ಟರ್, ವಾಮನ ನಂದಾವರ, ಕೆ.ವಿ. ರವಿ, ತಿಲಕನಾಥ ಮಂಜೇಶ್ವರ, ರತ್ನ ಕುಮಾರ್, ಯಶವಂತ ಬೋಳೂರು, ಭಾಸ್ಕರ ರಾವ್, ಸೀತಾರಾಮ ಕುಲಾಳ, ಸೀತಾರಾಮ ಆಳ್ವಾ, ಹಾಗೂ ಬನ್ನಂಜೆ ಇತರ ಹೆಸರಾಂತ ಕವಿಗಳು.  ೨೦೦ಕ್ಕೂ ಹೆಚ್ಚು ವರ್ಷಗಳಷ್ಟು ಪುರಾತನವಾದ, ಗ್ರಂಥ ಲಿಪಿಯಲ್ಲಿ ಬರೆದ ಮೂರು ಶ್ರೇಷ್ಠ ತುಳು ಕೃತಿಗಳಾದ ವಿಷ್ಣು ತುಂಗನ ‘ತುಳು ಭಾಗವತೊ’, ಕಾವೇರಿ ಹಾಗೂ  ಗದ್ಯ ಕೃತಿಯಾದ ‘ದೇವಿ ಮಹಾತ್ಮೆ’ ತಾಳೆಗರಿಯ ಹಸ್ತಪ್ರತಿಗಳಲ್ಲಿ ದೊರಕಿವೆ.

ತುಳು ಭಾಷೆ, ಸಂಸ್ಕೃತಿ ಹಾಗೂ ತುಳುವರ ಜಾನಪದ ಕಥೆಗಳ ಸಂಶೋಧನೆಯಲ್ಲಿ ಹಲವಾರು ವಿದ್ವಾಂಸರು ತೊಡಗಿದ್ದಾರೆ. ಅವರೆಂದರೆ, ಡಿ.ಎನ್.ಎಸ್. ಭಟ್, ಎಸ್.ಎನ್. ಭಟ್, ಎಂ.ರಾಮಾ, ಎಸ್. ಮಲ್ಲಿಕಾದೇವಿ, ಯು.ಪಿ.ಉಪಾಧ್ಯಾಯ, ವಿಲಿಯಂ ಮಾಡ್ತಾ, ಟಿ. ಗೋಪಾಲಕೃಷ್ಣ ಭಟ್ಟ, ಸೇಡಿಯಾಪು ಕೃಷ್ಣಭಟ್ಟ, ಎ. ಆಚಾರ್ಯ, ವೆಂಕಟರಾಜ ಪುಣಿಂಚಿತ್ತಾಯ, ವಿವೇಕ್ ರಾಯ್, ಅಮೃತ ಸೋಮೇಶ್ವರ, ಸುಶೀಲ ಉಪಾಧ್ಯಾಯ, ಚಿನ್ನಪ್ಪ ಗೌಡ, ಕೆ.ಪದ್ಮನಾಭ, ಖುನ್ನಾಯ ಹಾಗೂ ಇತರ ಯುವ ವಿದ್ವಾಂಸರು. ತುಳು ಭಾಷಾಧ್ಯಯನದ ಕೃತಿಗಳು ಹಾಗೂ ಜಾನಪದ ಕಥೆಗಳೆಂದರೆ ತುಳು ಉಪಭಾಷೆಗಳ ತೌಲನಿಕ ಅಧ್ಯಯನ, ತುಳುವ ದರ್ಶನ, ತುಳುನಾಡಿನ ಜಾನಪದ ಮಹಾಕಾವ್ಯಗಳು, ವೀರಕಾವ್ಯಗಳು, ತುಳು ಜಾನಪದ ಸಾಹಿತ್ಯ, ಭೂತಾರಾಧನೆ, ಕರಾವಳಿ ಜಾನಪದ ಮುಂತಾದವು ಈಗಾಗಲೇ ಪ್ರಕಟಗೊಂಡಿವೆ.

೧೯೯೪ರಲ್ಲಿ ರಾಜ್ಯ ಸರ್ಕಾರವು ತುಳು ಅಕಾಡೆಮಿಯನ್ನು ಸ್ಥಾಪಿಸಿತು. ತುಳು ಭಾಷೆ ಇತಿಹಾಸ ಹಾಗೂ ಜಾನಪದ ಕಥೆಗಳ ಮೇಲಿನ ಸಂಶೋಧನೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಇಲಾಖೆ ಹಾಗೂ ಎಮ್.ಜಿ.ಎಮ್.ಕಾಲೇಜು, ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರಗಳಲ್ಲಿ ಕೈಗೊಳ್ಳಲಾಗುತ್ತದೆ. ಪುಣೆ, ಅಣ್ಣಾಮಲೈ ಹಾಗೂ ತಿರುವನಂತಪುರಂ ವಿಶ್ವವಿದ್ಯಾನಿಲಯಗಳ ವಿದ್ವಾಂಸರು ತುಳು ಭಾಷೆಯ ಸಂಶೋಧನೆಯಲ್ಲಿ ತೊಡಗಿದ್ದಾರೆ. ಉಡುಪಿಯ ಗೋವಿಂದ ಪೈ ಕೇಂದ್ರವು ಆಧುನಿಕ ತುಳು ಪದಸಂಗ್ರಹಗಳ ಅನೇಕ ಸಂಪುಟಗಳನ್ನು ಸಂಕಲನ ಮಾಡಿದೆ. ಮಂಗಳೂರಿನಲ್ಲಿ ಅಕಾಡೆಮಿಯು ಕೇಂದ್ರಸ್ಥಾನ ಹೊಂದಿದ್ದು, ೧೯೯೫ರಿಂದ ೨೦೧೦ರವರೆಗೆ ತುಳು ಸಾಹಿತ್ಯದ ೬೦ ದಿಗ್ಗಜರಿಗೆ ಗೌರವಿಸಿದೆ.

 

ಕೊಡವ

ಕೊಡವ ಭಾಷೆಯು ಕ್ರಿ.ಶ. ೧೭ನೆಯ ಶತಮಾನದವರೆಗೂ ಪ್ರತ್ಯೇಕ ರಾಜ್ಯವಾಗಿದ್ದ ಕೊಡಗಿನ ಪ್ರಧಾನ ಭಾಷೆಯಾಗಿತ್ತು. ಮಲಬಾರ್ ಪ್ರಾಂತ್ಯದೊಂದಿಗೆ ಇದ್ದ ಅದರ ವ್ಯಾಪಾರಿ ಸಂಬಂಧದಿಂದಾಗಿ ಕೊಡಗಿನಲ್ಲಿ ಮಲಯಾಳಿ ಪ್ರಭಾವವನ್ನು ಗಮನಾರ್ಹ ಪ್ರಮಾಣದಲ್ಲಿ ಕಾಣಬಹುದು. ಕೊಡಗಿನ ಆಡಳಿತ ಕಾರ್ಯಭಾರವನ್ನು ವಹಿಸಿಕೊಂಡ ಹಾಲೇರಿ ರಾಜವಂಶವು, ಕನ್ನಡವನ್ನು ಆಸ್ಥಾನ ಭಾಷೆಯಾಗಿ ಅಳವಡಿಸಿಕೊಂಡಿತು. ೨೩೦ ವರ್ಷಗಳ ಕನ್ನಡ ಪ್ರಭಾವವು, ಮೂಲ ಭಾಷೆಯ ಹಲವಾರು ಆಯಾಮಗಳನ್ನು ಬದಲಾಯಿಸಿತು; ಅದರ ಪೈಕಿ, ಬರವಣಿಗೆಗಾಗಿ ಕನ್ನಡ ಲಿಪಿಯನ್ನು ಅಳವಡಿಸಿಕೊಂಡಿರುವುದು ಅತ್ಯಂತ ಮುಖ್ಯವಾದ ಬೆಳವಣಿಗೆಯಾಯಿತು.

ಹಲವಾರು ಕೊಡವ ನಾಟಕಗಳನ್ನು ಬರೆದ ಅಪ್ಪನೇರಂಡ ಅಪ್ಪಚ್ಚು ಹಾಗೂ ಪಟ್ಟೋಲೆ ಪಳಮೆಯ ಸಂಗ್ರಹವನ್ನು ಮಾಡಿ, ಭಗವದ್ಗೀತೆಯನ್ನು ಅನುವಾದ ಮಾಡಿದ ನಡಿಕೇರಿಯಾಂಡ ಚಿನ್ನಪ್ಪ ಕೊಡವ ಭಾಷೆಯ ಪ್ರವರ್ತಕ ಬರಹಗಾರರಾಗಿದ್ದರು.  ಕರ್ನಾಟಕದೊಂದಿಗೆ ಕೊಡಗನ್ನು ವಿಲೀನಗೊಳಿಸಿದಾಗ, ಸಾಹಿತ್ಯಕವಾಗಿ ಮಹಾನ್ ಜಾಗೃತಿಯಾಯಿತು. ‘ಎ ಟೈನಿ ಮಾಡಲ್ ಸ್ಟೇಟ್ ಆಫ್ ಸೌತ್ ಇಂಡಿಯಾ’ (ದಕ್ಷಿಣ ಭಾರತದ ಚಿಕ್ಕ ಮಾದರಿ ರಾಜ್ಯ) ಹಾಗೂ ಇತರ ಪುಸ್ತಕಗಳನ್ನು ಬರೆದ ಲೇಖಕರಾದ ಡಾ.ಐ.ಎಮ್.ಮುತ್ತಣ್ಣನವರು, ಕೊಡವ ಭಾಷೆಯಲ್ಲಿ ಕವನ ಸಂಗ್ರಹವನ್ನು ಪ್ರಕಟಿಸಿದ್ದಾರೆ. ನಂಗ ಕೊಡವ ಹಾಗೂ ಕುಟಂಬೋಳಿಚ ಎಂಬ ಕೊಡವ ಭಾಷೆಯ ಎರಡು ಪುಸ್ತಕಗಳನ್ನು ಬಿ.ಡಿ. ಗಣಪತಿ ಅವರು ಬರೆದಿದ್ದಾರೆ. ಕೊಡಗು ಮತ್ತು ಕೊಡವರು ಎಂಬ ಅವರ ಕೊಡವ ಸಂಸ್ಕೃತಿಯ ಬಗೆಗಿನ ಪುಸ್ತಕಕ್ಕೆ ರಾಜ್ಯ ಅಕಾಡೆಮಿ ಪ್ರಶಸ್ತಿಯೂ ದೊರಕಿದೆ. ಕೊಡವ ಸಾಹಿತ್ಯವನ್ನು ಪೋಷಿಸುವ ಯತ್ನಗಳು ನಡೆದಿದ್ದು ಕೊಡವ ಥಕ್ ಪರಿಷತ್ತನ್ನು ೧೯೭೮ರಲ್ಲೇ ಸ್ಥಾಪಿಸಲಾಗಿದೆ. ಕೊಡವ ಪದಸಂಗ್ರಹವನ್ನು (ನಿಘಂಟು) ಹೊರತರುವತ್ತ ಅದು ಕೆಲಸ ಮಾಡುತ್ತಿದೆ.  ಪ್ರತೀ ವರ್ಷವೂ ಸಮ್ಮೇಳನ ನಡೆಸುತ್ತಿದ್ದು, ಹೆಸರಾಂತ ಲೇಖಕರಾದ ಬಿ.ಡಿ. ಗಣಪತಿ ಅವರು ಪ್ರಥಮ ವಾರ್ಷಿಕ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕೊಡವ ಜಾನಪದ ಸಂಪ್ರದಾಯವೂ ಶ್ರೀಮಂತವಾಗಿದೆ. ಕೊಡವ ಜಾನಪದ ಹಾಡುಗಳು ಕೊಡವರ ವರ್ಣಮಯ ಜೀವನದ ಹಲವಾರು ಆಯಾಮಗಳನ್ನು ಪ್ರತಿಬಿಂಬಿಸುತ್ತಿದ್ದು ಕಾವ್ಯಗಳು ದಿಟ್ಟವಾಗಿಯೂ ಹಾಗೂ ಹಾಸ್ಯಮಯವಾಗಿಯೂ ಇವೆ. ಈ ಹಾಡುಗಳಲ್ಲಿ ಕೊಡವ ಭಾಷೆಯ ವೈಶಿಷ್ಟ್ಯತೆಯನ್ನು ಗಮನಿಸಬಹುದು. ಆದರೆ ಈ ಹಾಡುಗಳು ಗತಕಾಲಕ್ಕೆ ಸೇರಿದ್ದು, ಅದನ್ನು

ಬರೆದವರು ಯಾರೆಂದು ತಿಳಿದಿಲ್ಲ. ಈ ಹಾಡುಗಳಲ್ಲಿ ಬಳಸಲಾಗಿರುವ ಭಾಷೆ ಹಾಗೂ ಪ್ರಸ್ತುತ ಮಾತನಾಡುವ ಭಾಷೆಯ ನಡುವೆ ಗಣನೀಯ ವ್ಯತ್ಯಾಸವಿದೆ. ಕೊಡವರಿಗೆ ತಮ್ಮ ನಾಡಿನ ಬಗ್ಗೆ ಅಪಾರವಾದ ಪ್ರೀತಿಯಿದ್ದು ಅವರ ಹಾಡುಗಳು ನಾಡಿನ ಬಗೆಗಿನ ಪ್ರಶಂಸೆ ಹಾಗೂ ದೇಶಭಕ್ತಿಯೊಂದಿಗೆ ಪ್ರಾರಂಭವಾಗುತ್ತದೆ.

ಐ.ಎಂ.ಮುತ್ತಣ್ಣ, ಕನ್ನಡದಲ್ಲಿ ಕೊಡವ-ಕನ್ನಡ ನಿಘಂಟನ್ನು ಪೂರ್ಣಗೊಳಿಸಿದ್ದಾರೆ. ಕೊಡವ ಭಾಷೆಯ ವಾರಪತ್ರಿಕೆಯಾದ ಬ್ರಹ್ಮಗಿರಿ ೧೯೮೦ರಲ್ಲಿ ವಿರಾಜಪೇಟೆಯಿಂದ ಪ್ರಾರಂಭವಾಯಿತು. ಗೋಣಿಕೊಪ್ಪಲ್‌ನಿಂದ ೧೯೮೩ರಲ್ಲಿ ಪ್ರಾರಂಭವಾದ ಜಮ್ಮ ನಂಗಡಗಳು ಕೊಡವ ಭಾಷೆಯ ಬರವಣಿಗೆಗೆ ಬಹಳಷ್ಟು ಪ್ರೋತ್ಸಾಹವನ್ನು ನೀಡಿದ್ದು ಈ ಎಲ್ಲ ಪ್ರಕಟಣೆಗಳೂ ಕನ್ನಡ ಲಿಪಿಯಲ್ಲಿವೆ.೧೯೯೪ರಲ್ಲಿ, ರಾಜ್ಯ ಸರ್ಕಾರವು ಕೊಡವ ಅಕಾಡೆಮಿಯನ್ನು ಸ್ಥಾಪಿಸಿದ್ದು ಮಡಿಕೇರಿಯಿಂದ ಕಾರ್ಯ ನಿರ್ವಹಿಸುವ ಈ ಅಕಾಡೆಮಿಯು, ೨೦೦೬ರವರೆಗೆ, ೭೫ ವ್ಯಕ್ತಿಗಳಿಗೆ ಗೌರವ ಸಲ್ಲಿಸಿ ಸನ್ಮಾನಿಸಿದೆ.

 

ಕೊಂಕಣಿ

ಸ್ವತಂತ್ರ ಭಾಷೆಯಾದ ಕೊಂಕಣಿಯನ್ನು ಭಾರತದ ಪಶ್ಚಿಮ ಕರಾವಳಿಯಲ್ಲಿ ಹರಡಿಕೊಂಡಿರುವ ಸುಮಾರು ೧೫ ಲಕ್ಷಕ್ಕೂ ಹೆಚ್ಚು ಮಂದಿ ಮಾತನಾಡುತ್ತಾರೆ. ಕರ್ನಾಟಕದಲ್ಲಿ ಆರು ಲಕ್ಷಕ್ಕಿಂತ ಹೆಚ್ಚು ಮಂದಿ ಈ ಭಾಷೆಯನ್ನು ಮಾತನಾಡುವವರಿದ್ದಾರೆ. ಕೊಂಕಣಿ ಮಾತನಾಡುವ ಜನರು ಹೆಚ್ಚಾಗಿ ಗೋವಾದಲ್ಲಿ ವಾಸಿಸುತ್ತಿದ್ದು ಪೊರ್ಚುಗೀಸರಿಂದ ಗೋವಾವನ್ನು ವಶಪಡಿಸಿಕೊಂಡ ನಂತರ, ಕ್ರೈಸ್ತ ಮತಕ್ಕೆ ತಮ್ಮನ್ನು ಪರಿವರ್ತಿಸುವರೆಂಬ ಅಂಜಿಕೆಯಿಂದ, ಅವರಲ್ಲಿ ಅನೇಕರು ದಕ್ಷಿಣ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಪಲಾಯನ ಮಾಡಿದರು. ಕೊಂಕಣಿ ಭಾಷೆ ಹಾಗೂ ಸಂಸ್ಕೃತಿಯನ್ನು ಪೋರ್ಚುಗೀಸರು ಹೊಸಕಿದರೂ ಗೋವಾದಿಂದ ವಲಸೆ ಬಂದ ಜನರು ತಮ್ಮ ಸಂಸ್ಕೃತಿಯ ಅಭ್ಯುದಯಕ್ಕೆ ಕಾರಣೀಭೂತರಾದರು. ಕರ್ನಾಟಕದಲ್ಲಿ ಮೂಡಿದ ಕೊಂಕಣಿ ಸಾಹಿತ್ಯದಲ್ಲಿ ಕೊಂಕಣಿ ಹಿಂದೂಗಳು ರಚಿಸಿರುವ ಸಾಹಿತ್ಯ ಹಾಗೂ ಕೊಂಕಣಿ ಕ್ರಿಶ್ಚಿಯನ್ನರು ರಚಿಸಿರುವ ಸಾಹಿತ್ಯ ಎಂಬ ಎರಡು ಸಾಹಿತ್ಯ ಶಾಖೆಗಳಿವೆ.

ಹಿಂದೂಗಳು ರಚಿಸಿರುವ ಕೊಂಕಣಿ ಕೃತಿಗಳು, ಸುಪ್ರಸಿದ್ಧ ಭಕ್ತಿ ಕವಿಗಳಾದ ಸಂಕಪ್ಪಯ್ಯ, ರಾಘವದಾಸ, ಜೊಗವ ಹಾಗೂ ಅವದಿಬಾಯಿಯರು ರಚಿಸಿದ ಕೊಂಕಣಿ ಭಕ್ತಿ ಗೀತೆಗಳಿಂದ ಪ್ರಾರಂಭವಾಗುತ್ತದೆ. ನಂತರ, ಬಂಗ್ಲೆನಾರಾಯಣ ಕಾಮತ್‌ರವರು ಭಗವದ್ಗೀತೆಯನ್ನು ಕೊಂಕಣಿಯಲ್ಲಿ ಬರೆದರು. ಮಂಗೇಶ ರಾಮಕೃಷ್ಣ ತೆಲಂಗ್, ಬೊಳಂತೂರು ಕೃಷ್ಣ ಪ್ರಭು, ಉಪೇಂದ್ರ ಪೈ, ಸ್ವಾಮಿ ಪ್ರಭವಾನಂದ, ಎನ್.ವಿ. ಪ್ರಭು ಹಾಗೂ ಬಿ.ವಿ.ಬಾಳಿಗಾ ಅವರು ಕೊಂಕಣಿಯಲ್ಲಿ ಉತ್ತಮ ಕವನ ಹಾಗೂ ನಾಟಕಗಳನ್ನು ರಚಿಸಿದರು. ವಿದ್ವಾಂಸರಾದ ಉದ್ಯಾವರ ನಾರಾಯಣಾಚಾರ್, ಹಟ್ಟಂಗಡಿ ನಾರಾಯಣರಾವ್ ಹಾಗೂ ಎಮ್.ಎಮ್.ಶಾನಭಾಗರು, ಕೊಂಕಣಿ ವ್ಯಾಕರಣದ ಕೃತಿಗಳನ್ನು ಪ್ರಕಟಿಸಿದರು. ಇತರ ಹೆಸರಾಂತ ಲೇಖಕರ ಪೈಕಿ, ಶೇಷಗಿರಿ ಕೇಶವ ಪ್ರಭು, ಮುಂಡಾಸ್ ದೇವದಾಸ ಪೈ, ಕೊದ್ಬೆಟ್ ರಾಮರಾಯ ಕಾಮತ್, ಬಂಟ್ವಾಳ ಪುಂಡಲೀಕ ಬಾಳಿಗಾ, ವಿ.ಆರ್. ಪ್ರಭು, ಎಸ್.ವಿ. ಕಾಮತ್, ಎಂ.ಜಿ. ಪೈ, ಮುಂತಾದವರು ಉಲ್ಲೇಖಾರ್ಹ.

ಮಂಗಳೂರಿನಿಂದ ‘ಸಾರಸ್ವತ್’ ಎಂಬ ಪಾಕ್ಷಿಕ ನಿಯತಕಾಲಿಕದ ಪ್ರಕಟಣೆಯನ್ನು ಮಾಡುವ ಮೂಲಕ, ಕೊಂಕಣಿ ಭಾಷೆಯ ದಿನಪತ್ರಿಕೆಯನ್ನು ೧೯೨೯ರಲ್ಲೇ ಪ್ರಾರಂಭಿಸಿದಂತೆ ಆಯಿತು. ಇತರ ನಿಯತಕಾಲಿಕಗಳಾದ ನವಯುಗ್, ‘ಉಜ್ವಧ್’, ‘ಕೊಂಕಣ ಕಿನಾರ’ ಹಾಗೂ ‘ಸರ್ವೋದಯ’ಗಳು ಆ ನಂತರ ಪ್ರಕಟವಾದವು. ಕೊಂಕಣಿಯ ಉತ್ತೇಜನಕ್ಕಾಗಿ, ಕೊಂಕಣಿ ಭಾಷಾ ಮಂಡಲ್, ಕೊಂಕಣಿ ಭಾಷಾ ಪರಿಷದ್, ಇನ್ಸ್ಟಿಟ್ಯೂಟ್ ಆಫ್ ಕೊಂಕಣಿ ಹಾಗೂ ಕೊಂಕಣಿ ಭಾಷಾಭಿಮಾನ ಸಮಿತಿಗಳಂತಹ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು ಕೊಂಕಣಿಯಲ್ಲಿ ಚಲನಚಿತ್ರಗಳನ್ನೂ ಮಾಡಲಾಗಿದೆ.

ದಕ್ಷಿಣ ಕನ್ನಡದ ಕ್ರೈಸ್ತರಲ್ಲಿಯೂ ಕೊಂಕಣಿ ಭಾಷೆಯು ಅಭಿವೃದ್ಧಿ ಹೊಂದಿತು.  ಬೈಬಲ್‌ನ ಹೊಸ ಒಡಂಬಡಿಕೆಯ ಮೇಲೆ, ಕೊಂಕಣಿ ಸಂಕೀರ್ತನೆ  ಹಾಗೂ ಭಾಷ್ಯಗಳನ್ನು ಸಿದ್ಧಪಡಿಸಲಾಯಿತು. ರೆವೆರೆಂಡ್ ರಾಫೆಲ್ ಪಾಸ್ಕೆಟ್ಟಿ ಹಾಗೂ ರೆವೆರೆಂಡ್ ಫಾ್ರನ್ಸಿಸ್ಕೊ ಸವೇರಿಯೋದ ಸಾಂತ ಅನ್ನರು ಕೊಂಕಣಿಯ ಅಧ್ಯಯನವನ್ನು ಮಾಡಿದವರಲ್ಲಿ ಮೊದಲಿಗರು. ದಕ್ಷಿಣ ಕನ್ನಡಕ್ಕೆ ಬಂದ ಜೇಸ್ಯುಟ್ಟ್ಗಳು, ಸಂತ ಜೊಸೆಫ್ ಸೆಮಿನರಿ , ಸಂತ ಅಲೋಸಿಯಸ್ ಕಾಲೇಜ್, ಫಾದರ್ ಮುಲ್ಲರ್ ಆಸ್ಪತ್ರೆ ಹಾಗೂ ಕೊಡಿಯಾಲ್‌ಬೈಲ್ ಮುದ್ರಣಾಲಯಗಳಂತಹ ಸಂಸ್ಥೆಗಳನ್ನು ಸ್ಥಾಪಿಸಿ, ಕೊಂಕಣಿ ಸಂಸ್ಕೃತಿ ಹಾಗೂ ಸಾಹಿತ್ಯದ ಅಭಿವೃದ್ಧಿಗೆ ಉತ್ತೇಜನ ನೀಡಿದರು. ಕ್ರಿಶ್ಚಿಯನ್ ಧರ್ಮ ಹಾಗೂ ಸಂಸ್ಕೃತಿಯನ್ನು ಕುರಿತಾದ ಕವಿತೆಗಳು ಹಾಗೂ ವಿಮರ್ಶೆಗಳನ್ನು ಹಲವಾರು ಲೇಖಕರು ಹಾಗೂ ಕವಿಗಳು ಬರೆದಿರುವರು.

೧೯೧೨ರಷ್ಟು ಮುನ್ನವೇ, ಕನ್ನಡ ಲಿಪಿಯನ್ನು ಹೊಂದಿದ ಪ್ರಥಮ ಕೊಂಕಣಿ ನಿಯತಕಾಲಿಕವಾದ ಕೊಂಕಣಿ ದಿರ್ವೆಮ್ ಅನ್ನು, ಮಂಗಳೂರಿನ ಇಬ್ಬರು ಯುವಕರಾದ ಲೂಯಿಸ್ ಮಾಸ್ಕರೆನ್ಹಾಸ್ ಹಾಗೂ ಲೂಯಿಸ್ ಕಣ್ಣಪ್ಪ ಪ್ರಕಟಿಸಿದರು.ಇದರ ನಂತರ, ಇತರ ನಿಯತಕಾಲಿಕಗಳಾದ ರಕ್ನೊ, ಪೊಯಿನಾರಿ, ಮಿತ್ರ‍್ಸುಖ್-ದುಖ್ಯಿಸೇವಕ್, ಜûಗ್-ಮಗ್, ವಿಶಾಲ್ ಕೊಂಕಣ್, ಕನಿಕ್ ಹಾಗೂ ಉದೇವ್ ಇತ್ಯಾದಿಗಳು ಪ್ರಕಟಗೊಂಡವು.

ಜಿ.ಎಮ್.ಬಿ. ರೋಡ್ರಿಗ್ಸ್, ಎ.ಟಿ. ಲೋಬೊ, ವಿ.ಜೆ.ಪಿ ಸಲ್ಡಾನಾ, ಎಮ್.ಪಿ. ಡೇಸ, ಹೆನ್ರಿ ಡಿಸಿಲ್ವ, ಎಡ್ಡಿ ಡಿಸೋಜ ಹಾಗೂ ಸಿ.ಎಫ್.ಡಕೋಸ್ಟಾರಂತಹ ಹಲವಾರು ಕೊಂಕಣಿ ನಾಟಕ ರಚನಕಾರರು ಕೊಂಕಣಿಯಲ್ಲಿ ಹಲವಾರು ನಾಟಕಗಳನ್ನು ಬರೆದು, ಹೆಸರು ಗಳಿಸಿದ್ದಾರೆ. ಕೊಂಕಣಿಯಲ್ಲಿ ಕಾದಂಬರಿ ಹಾಗೂ ಕಥೆಗಳನ್ನೂ ಬರೆಯಲಾಗಿದೆ. ಕೊಂಕಣಿ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿ ಕುರಿತಾದ ಸಂಶೋಧನೆಯಲ್ಲಿ ಹಲವಾರು ವಿದ್ವಾಂಸರು ತೊಡಗಿದ್ದಾರೆ. ಅವರ ಪೈಕಿ, ಗಮನ ಸೆಳೆದಿರುವವರು ಡಾ.ವಿಲಿಯಂ ಮಾಡ್ತಾ ಹಾಗೂ ಡಾ.ರಾಕಿ ಮಿರಾಂಡ. ಧಾರವಾಡವೂ ಕೊಂಕಣಿ ಭಾಷೆಯ ಸಾಹಿತ್ಯ ಚಟುವಟಿಕೆ ಹಾಗೂ ಸಂಶೋಧನೆಗಳಿಗೆ ಕೇಂದ್ರವಾಗಿದೆ. ೧೯೯೪ರಲ್ಲಿ ರಾಜ್ಯ ಸರ್ಕಾರವು ಕೊಂಕಣಿ ಅಕಾಡೆಮಿಯನ್ನು ಸ್ಥಾಪಿಸಿ ೧೯೯೫ ರಿಂದ ೨೦೧೦ ರವರೆಗೆ, ಕೊಂಕಣಿ ಅಕಾಡೆಮಿಯು ೭೯ ಪ್ರತಿಷ್ಠಿತ ಬರಹಗಾರರಿಗೆ ಪ್ರಶಸ್ತಿಗಳನ್ನು ನೀಡಿದ್ದು ಇದರಲ್ಲಿ  ಕೊಂಕಣಿ ದಿನಪತ್ರಿಕೆ ಹಾಗೂ ಸಂಘಗಳೂ ಸೇರಿವೆ.

 

ಉರ್ದು

ಕರ್ನಾಟಕದಲ್ಲಿ ಪ್ರತಿಶತ ಒಂಬತ್ತರಷ್ಟು ಜನರು ಉರ್ದು ಭಾಷೆಯನ್ನು ಮಾತನಾಡುತ್ತಿದ್ದು ಈ ಸಂಖ್ಯೆಯು ಕನ್ನಡ ಭಾಷಿಗರ ನಂತರದ ಸ್ಥಾನದಲ್ಲಿದ್ದು, ರಾಜ್ಯದ ಬಹುಸಂಖ್ಯಾತ ಮುಸಲ್ಮಾನರಿಗೆ ಅದು ಮಾತೃ ಭಾಷೆಯಾಗಿದೆ.  ಉರ್ದು ಭಾಷೆ ಹಾಗೂ ಸಾಹಿತ್ಯವನ್ನು ಪೋಷಿಸಲು, ಕರ್ನಾಟಕ ಸರ್ಕಾರವು ೧೯೭೭ರಲ್ಲಿ ಉರ್ದು ಅಕಾಡೆಮಿಯನ್ನು ಸ್ಥಾಪಿಸಿದೆ.

ದಕ್ಕನ್ ಪ್ರದೇಶದಲ್ಲಿ ಮುಸಲ್ಮಾನ ಆಡಳಿತದ ಬೆಳವಣಿಗೆಯಾದಂತೆ, ಸ್ಥಳೀಯ ಜನಸಂಖ್ಯೆಯೊಂದಿಗೆ ಹಲವಾರು ವಿಭಾಗಗಳೊಂದಿಗೆ ಆಡಳಿತ ವರ್ಗ ವ್ಯವಹರಿಸುವ ಸಲುವಾಗಿ, ಹೊಸ ಉಪಭಾಷೆಯ ಅಗತ್ಯವು ಎದುರಾಯಿತು. ಹಿಂದೂ ಹಾಗೂ ಮುಸಲ್ಮಾನರ ನಡುವಣ ಸಂಯೋಜನೆ, ಸಮಗ್ರತೆ ಹಾಗೂ ಅರಿವಿನ ದ್ಯೋತಕವಾಗಿ, ದಖ್ಖನಿ ಎಂಬ ನೂತನ ಉಪಭಾಷೆಯ ಉಗಮವಾಯಿತು. ಬಹಮನಿ ಸುಲ್ತಾನರು ಈ ಭಾಷೆಯ ಆಶ್ರಯದಾತರಾದರು. ನಿಜಾಮ (ಕದಂರಾವ್ ಪದಂ), ವಾಝಿ (ಕುತುಬ್ ಮಷ್ತರಿ ಹಾಗೂ ಸಬ್-ರಸ್), ಗವಾಸಿ (ಸೈಫುಲ್ ಮುಲ್ಲೊಕ್-ಓ-ಬಡೇಉಲ್-ಕಮತ್), ಆಜಿಜ್(ಲೈಲಾ ಮಜ್ನು), ಬಲಾಖಿ (ಮೇರಜ್ನಾಮ), ಇಬ್ನೆ-ನಿಷಾತಿ (ಫೂಲ್ ಬನ್), ತಬೀ (ಖೈಸ-ಲ್-ಬೆಹ್ರಮ್-ಓ-ಗುಲ್ ಅಂದಮ್) ಹಾಗೂ ಸೇವಕ್ (ಜಂಗ್ ನಾಮಾ) ಮುಂತಾದ ಪ್ರತಿಷ್ಠಿತ ಬರಹಗಾರರು ಹಾಗೂ ಕವಿಗಳು ಮಹಾನ್ ಸಾಹಿತ್ಯ ಕೃತಿಗಳನ್ನು ರಚಿಸಿದರು.  ಹಜರತ್ ಬಂದೇ ನವಾಜ್ ಹಾಗೂ ಆತನ ವಂಶಸ್ಥರು ಉರ್ದುವಿನಲ್ಲಿ ಹೇರಳವಾಗಿ ಬರೆದಿರುವರು. 

ಮೈಸೂರಿನಲ್ಲಿ ಹೈದರ್ ಆಲಿ ಹಾಗೂ ಟಿಪ್ಪು ಸುಲ್ತಾನರ ಆಗಮನವು ಉರ್ದುವಿಗೆ ಹೊಸ ಹುಮ್ಮಸ್ಸು ನೀಡಿತು. ಮೊಹಮ್ಮದ್ ಸಯೀದ್ ಮೇಖ್ರಿ ಆಸಿ, ಶಾಹ್ ಮೊಹಮ್ಮದ್ ಸದ್ರುದ್ದೀನ್, ಮೊಹಮ್ಮದ್ ಇಷಾಕ್ ಬಿಜಾಪುರಿ, ಜಿûಯಾಉಲ್ ಅಬೇದ್ದೀನ್ ಶುಸ್ತ್ರಿ, ಹಸನ್ ಅಲಿ ಆಲಿ ಇಜ್ಜತ್, ಅಹಮದ್ ಖಾನ್ ಶೇರ್ವಾನಿ, ಸೈಯ್ಯದ್ ಶಾಹ್ ಆರಿಫ್ ಖಾದ್ರಿ, ಖಾಜಿ ಗುಲಾಂ ಅಹಮದ್, ಲಾಲ ಬಾಧಾ ಸಿಂಗ್, ಲಾಲ ಮೆಹ್ತಾಬ್ ರಾಯ್ ಸಬ್ಕತ್ ಹಾಗೂ ಮೀರ್ ಹಸನ್ ಕಿರ್ಮಾನಿ ಯಂತಹ ಪ್ರತಿಷ್ಠಿತ ಲೇಖಕರಿಗೆ ಅವರು ಆಶ್ರಯ ನೀಡಿದ್ದರಿಂದಾಗಿ ಮೈಸೂರಿನ ದಯಾಪರ ಮಹಾರಾಜರೂ ಸಹ ಈ ಭಾಷೆಗೆ ಆಶ್ರಯವನ್ನು ನೀಡಿದರು. ೧೯ನೆಯ ಶತಮಾನ ಸುವರ್ಣ ಯುಗವೆನಿಸಿತು.  ಈ ಅವಧಿಯಲ್ಲಿ ಉರ್ದು ಸಾಹಿತ್ಯದ ಅಭಿವೃದ್ಧಿಗೆ, ಶಾಹ್ ಅಬು ಹೈವೈಜ,  ಹಜ‌ರತ್ ಮೊಹಮ್ಮದ್ ಖಾಸಿಮ್ ಖಾನ್, ಸೂಫಿû, ಕಲೀಮ್ ಅಥರ್, ದಿಲ್, ಸಬೀರ್, ನವಾಬ್ ಸುಲ್ತಾನ್ ನಸೀಮ್, ಜಾದೂ, ಅಮೀರ್, ಶೌಕತ್ ನಾಸಿರ್, ಬರ್ಕ್, ತಾಹ್‌ಕ್ವೇಕ್, ಅಮೀರ್, ತಾಹಿತಿ ಹಾಗೂ ಆರಂ ಮುಂತಾದ ಅಪ್ರತಿಮ ವ್ಯಕ್ತಿಗಳು ನೆರವು ನೀಡಿದರು. 

ಉತ್ತರ ಭಾರತದಲ್ಲಿ ದಖ್ಖನಿಯು ಉರ್ದುವಾಗಿ ಅಭಿವೃದ್ಧಿ ಹೊಂದಿದ ಸಲುವಾಗಿ, ಕರ್ನಾಟಕದಲ್ಲಿ ಉರ್ದು ಲಿಖಿತ ಭಾಷೆಯಾಗಿ, ದಖ್ಖನಿ ಆಡು ಭಾಷೆಯಾಯಿತು. ಕನ್ನಡ ಭಾಷೆಯ ಮೇಲೆ ಉರ್ದು ಬೀರಿದ ಪ್ರಭಾವವೂ ಗಣನೀಯವಾದುದು. ಉರ್ದುವಿನ ಮೂಲಕ, ಕನ್ನಡದಲ್ಲಿ ೪೩೮ ಅರಾಬಿಕ್ ಹಾಗೂ ೬೧೪ ಪರ್ಶಿಯನ್ ಪದಗಳು ಸೇರ್ಪಡೆ ಆಗಿವೆ. ಇವುಗಳನ್ನು ಮುಖ್ಯವಾಗಿ ಕಂದಾಯದ ದಾಖಲೆಗಳಲ್ಲಿ ಕಾಣಬಹುದು. ಅವುಗಳಲ್ಲಿ ಜಮೀನ್ದಾರಿ, ಮುಜರಾಯಿ, ಮಸೀದಿ, ಗುಮಾಸ್ತ, ಕಛೇರಿ, ಖರ್ಚು, ದಿವಾನ್, ಕಾರ್ಖಾನ, ಮುಂತಾದವನ್ನು ವಿದರ್ಶನವಾಗಿ ಉಲ್ಲೇಖಿಸಬಹುದಾಗಿದೆ.

೨೦ನೆಯ ಶತಮಾನದ ಮೊದಲಾರ್ಧದ ಅಪ್ರತಿಮ ಸಾಹಿತ್ಯಕಾರರ ಪೈಕಿ, ಖಾಜಿ ಅಬ್ದುಲ್ಲಾ ಹುಸೇನ್ ಖಲೀಲಿ, ಶಾಹ್ ಅಬ್ದುಲ್ ಹುಸೇನ್ ಅದೀಬ್, ಸೈಯದ್ ಗೌಸ್, ಮೊಹಿಯುದ್ದೀನ್, ಹಜ‌ರತ್ ಫೈಕ್, ಹಜ‌ರತ್ ಅಲ್ತಾ, ಹಜ‌ರತ್ ಫೈಕ್, ಹಜ‌ರತ್ ಶೌಕ್ ಹಾಗೂ ಮೊಹಮ್ಮದ್ ಖಾನ್ ಮೊಹ್ಮೂದ್ ಮುಂತಾದವರು ಇದ್ದಾರೆ. ತಮ್ಮ ಹಿಂದಿನವರ ಹೆಜ್ಜೆಯ ಗುರುತುಗಳನ್ನೇ ಹಿಂಬಾಲಿಸಿದ ಪ್ರಸ್ತುತ ತಲೆಮಾರಿನ ಸಾಹಿತ್ಯಕ ವ್ಯಕ್ತಿಗಳೆಂದರೆ ಸುಲೈಮಾನ್ ಖತೀಬ್, ಇಮಾಮಿ, ತದ್ಬೀಶ್, ಖಲೀಲ್ ಸೀಮಾಬಿ, ಮಹ್ಮೂದ್ ಇಯಾಜ, ಹಮೀದ್ ಅಲ್ಮಾಸ್, ರಾಹಿ ಖುರೇಶಿ, ಡಾ.ಮುದ್ದಣ್ಣ ಮನ್‌ಜರ್, ಫಿಯಾಜ ಬೆಳ್ಗೋಡಿ, ಶೂಲ ಮೈಲಿ, ಮೊಹಮ್ಮದ್ ಹನೀಫ್, ಕಲೀಮ್ ಮೊಹಮ್ಮದ್ ಖಾನ್ ಹಾಗೂ ಮಬರೀಜುದ್ದೀನ್ ರಾಫತ್. ಮಹಿಳೆಯರಲ್ಲಿ ಶಿಕ್ಷಣದ ಹರಡುವಿಕೆಯಿಂದ, ಹಲವಾರು ಮಹಿಳಾ ಬರಹಗಾರರನ್ನು ಮುಂಚೂಣಿಗೆ ತಂದಿದೆ. ಅವರಲ್ಲಿ ಕೆಲವರೆಂದರೆ, ಸಯೀದಾ ಅಖ್ತರ್, ಮುರ್ನ್‌ತಾಜ ಶಿರೀನ್, ಬೇಗಂ ರಹಮತುನ್ನೀಸಾ, ಮೈಮೊನ್ ತಸ್ನೀಮ್, ಹುಸ್ನಾ ಸರೂರ್, ಜುಬೇದಾ ನಸ್ರೀನ್, ಡಾ.ಹಬೀಬುನ್ನೀಸಾ ಬೇಗಂ, ಡಾ.ಅಮೀನ ಖಾತೂನ್, ಡಾ.ವಹೀದುನ್ನೀಸ, ಡಾ.ಫಾಹ್ಮೀದಾ ಬೇಗಂ, ಬಶೀರುನ್ನೀಸಾ ಬೇಗಂ ಉಲ್ಲೇಖಾರ್ಹ ಮುಂತಾದವರು.

 

ತೆಲುಗು

ಕರ್ನಾಟಕ ಹಾಗೂ ಆಂಧ್ರ ಪ್ರದೇಶಗಳ ನಡುವಣ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಾಹಿತ್ಯದ ಸಂಬಂಧಗಳು ನಿಕಟವಾಗಿದ್ದು ಗಮನಾರ್ಹವಾಗಿವೆ. ಇಂದಿನ ಕರ್ನಾಟಕದ ಬಹುತೇಕ ಭಾಗಗಳ ಮೇಲೆ ಹಲವಾರು ತೆಲುಗು ಅರಸರು ಆಳಿದ್ದು ಅನೇಕ ಕನ್ನಡ ಅರಸರು ತೆಲುಗು ಮಾತನಾಡುವ ಬೃಹತ್ ಪ್ರದೇಶಗಳ ಮೇಲೆ ಹಿಂದೆ ಆಳ್ವಿಕೆ ನಡೆಸಿದ್ದರು. ಕರ್ನಾಟಕದಲ್ಲಿ ದೊರೆತ ಹಲವಾರು ತೆಲುಗು ಶಾಸನಗಳು ಹಾಗೂ ಆಂಧ್ರ ಪ್ರದೇಶದಲ್ಲಿ ದೊರೆತ ಹಲವಾರು ಕನ್ನಡ ಶಾಸನಗಳು ಈ ವಾಸ್ತವವನ್ನು ಪ್ರತಿಬಿಂಬಿಸುತ್ತವೆ. ವಿಜಯನಗರ ಅರಸರ ಆಗಮನಕ್ಕೆ ಮುನ್ನ, ತೆಲುಗು ಹಾಗೂ ಕನ್ನಡಗಳೆರಡಕ್ಕೂ ಸಾಮಾನ್ಯ ಲಿಪಿಯಿತ್ತು.  ಈಗ ಬೇರೆಬೇರೆ ಲಿಪಿಗಳಿದ್ದರೂ ಅವೆರಡರ ನಡುವೆ ಅನೇಕ ಸಾಮ್ಯಗಳಿವೆ.

ಬಸವ ಪುರಾಣಮು ಎಂಬ ಕೃತಿಯ ಕತೃವಾಗಿ ತೆಲುಗು ಸಾಹಿತ್ಯದಲ್ಲಿ ಸುಪ್ರಸಿದ್ಧನಾದ ಪಾಲ್ಕುರಿಕೆ ಸೋಮನಾಥನು, ಕೆಲವು ರಗಳೆ ಹಾಗೂ ವಚನಗಳನ್ನು, ಕನ್ನಡದಲ್ಲಿ ‘ಶೀಲ ಸಂಪಾದನೆ’ ಹಾಗೂ ‘ಸಹಸ್ರ ಗಣನಾಮ’ ವನ್ನು ಬರೆದಿದ್ದಾನೆ. ಬಸವೇಶ್ವರರ ವಚನಗಳನ್ನು ಆಧರಿಸಿ ಪಡೆದ ‘ಸಿಂಹಗಿರಿ ವಚನ’ ಹಾಗೂ ‘ವೆಂಕಟೇಶ್ವರ ವಚನ’ ಗಳಂತಹ ಇತರ ಕೃತಿಗಳನ್ನು ತೆಲುಗಿನಲ್ಲಿ ಬರೆದಿದ್ದಾರೆ.

ಕನ್ನಡ ಮತ್ತು ತೆಲುಗು ಎರಡಕ್ಕೂ ವಿಜಯನಗರ ಕಾಲವು ಸುವರ್ಣಯುಗವಾಗಿತ್ತು. ಈ ಎರಡೂ ಭಾಷೆ ಹಾಗೂ ಸಂಸ್ಕೃತಿಗಳಿಗೆ ವಿಜಯನಗರದ ಆಸ್ಥಾನವು ಸಂಗಮ ತಾಣವಾಯಿತು. ಏಕೆಂದರೆ ಈ ಎರಡೂ ಸಮುದಾಯಗಳ ನಡುವೆ ಚಿಂತನೆಗಳ ವಿನಿಮಯಕ್ಕೆ ಬೃಹತ್ ಪ್ರಮಾಣದ ಅವಕಾಶ ಲಭಿಸಿತು. ೧೯ ಹಾಗೂ ೨೦ನೆಯ ಶತಮಾನದಲ್ಲಿ, ಚೌಡೇಶ್ವರಿ ಪುರಾಣಮ್ (ಗುಮ್ಮರಾಜು ಮಹಾಕವಿ), ಸುಕರ್ಮ-ನೀತಿ-ಚಿಂತಾಮಣಿ (ಕೋಮರ್ಲ ರಾಮಚಂದ್ರಯ್ಯ), ‘ಪದ್ಮಾವತಿ ಶ್ರೀನಿವಾಸ’ದಂತಹ (ಕಹುಲ ಭೈರವ ಕವಿ) ಕೃತಿಗಳು ರಚಿತಗೊಂಡವು. ಕನ್ನಡಕ್ಕೆ ಸರ್ವಜ್ಞ ಇರುವಂತೆ, ತೆಲುಗಿನಲ್ಲಿ ವೇಮನನಿದ್ದಾನೆ.ಕರ್ನಾಟಕದ ತೆಲುಗು ಕವಿಯಾದ ಭೀಮರಾಜು, ಸರ್ವಜ್ಞನ ವಚನಗಳನ್ನು ತೆಲುಗಿಗೆ ಹಾಗೂ ವೇಮನನ ತೆಲುಗು ಕಾವ್ಯಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾನೆ.

ಇತ್ತೀಚಿಗೆ, ಅನುವಾದ ಕ್ಷೇತ್ರದಲ್ಲಿ ಗಣನೀಯವಾದ ಸಾಹಿತ್ಯ ಚಟುವಟಿಕೆಯು ಕಂಡು ಬಂದಿದೆ. ಎರಡೂ ಭಾಷೆಗಳ ಪ್ರಶಸ್ತಿ-ವಿಜೇತ ಸಾಹಿತ್ಯ ಕೃತಿಗಳನ್ನು ಅನುವಾದಗೊಳಿಸಲಾಗಿದ್ದು ಈ ಕ್ಷೇತ್ರದಲ್ಲಿ, ಟಿ.ವಿ. ಸುಬ್ಬರಾವ್, ಬಡಾಲ ರಾಮಯ್ಯ, ಕೆ.ಎಸ್. ಜಾನಕೀರಾಮಯ್ಯ, ಆರ್.ವಿ.ಎಸ್. ಸುಂದರಂ, ನಿರುಪಮಾ ಹಾಗೂ ಹರಿಹರಪ್ರಿಯರು ಪ್ರಶಂಸನೀಯ ಕಾರ್ಯವನ್ನು ಮಾಡಿದ್ದಾರೆ.

ಬೆಂಗಳೂರು ಹಾಗೂ ಮೈಸೂರು ವಿಶ್ವವಿದ್ಯಾನಿಲಯಗಳಲ್ಲಿ ಸುಸ್ಥಾಪಿತವಾದ ತೆಲುಗು ಇಲಾಖೆಗಳಿದ್ದು,  ಕರ್ನಾಟಕದಲ್ಲಿ ಈ ಭಾಷೆಯ ಅಭಿವೃದ್ಧಿಗೆ ಇದು ನೆರವಾಗಿದೆ.  ಮತ್ತೊಂದು ಗಣನೀಯ ಪ್ರವೃತ್ತಿಯೆಂದರೆ, ರಾಜಕೀಯ ಹಾಗೂ ಸಾಮಾಜಿಕ ವಿಡಂಬನಾ ಕಾವ್ಯ ಹಾಗೂ ಕಾದಂಬರಿಗಳನ್ನು ತೆಲುಗಿನಿಂದ ಕನ್ನಡಕ್ಕೆ ಭಾಷಾಂತರ ಮಾಡಿಸಿರುವುದು. ತೆಲುಗು ಹಾಗೂ ಕನ್ನಡ ಚಲನಚಿತ್ರ ಕ್ಷೇತ್ರಗಳ ನಡುವೆ ನಿಕಟ ಸಂಬಂಧವಿದೆ. ಬೆಂಗಳೂರಿನಲ್ಲಿರುವ ತೆಲುಗು ಸಮಿತಿ ಹಾಗೂ ಆಂಧ್ರ ವಿಜ್ಞಾನ ಸಂಘಮ್‌ಗಳು, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಾಮಾನ್ಯ ವೇದಿಕೆಯನ್ನು ಒದಗಿಸಲು ಯತ್ನಿಸುತ್ತಿವೆ. ಅನೇಕ ಬಾರಿ, ತೆಲುಗು ಹಾಗೂ ಕನ್ನಡ ಭಾಷೆಗಳಿಗೆ ಸಾಮಾನ್ಯ ಲಿಪಿಯನ್ನು ಪ್ರತಿಪಾದಿಸಲಾಗಿದೆ.

 

ತಮಿಳು

ಕನ್ನಡ ಹಾಗೂ ತಮಿಳು ಭಾಷೆಗಳು ಪ್ರಾಚೀನವಾದ  ದ್ರಾವಿಡ ಭಾಷಾ ಮೂಲದಿಂದ ಹುಟ್ಟಿವೆ. ಕನ್ನಡವನ್ನು ತಮಿಳಿನ ಪ್ರಾಚೀನತೆಯೊಂದಿಗೆ ಹೋಲಿಸಬಹುದು. ಕನ್ನಡ ಹಾಗೂ ತಮಿಳುಗಳೆರಡೂ ಪರಸ್ಪರ ಅಗಾಧ ಪ್ರಭಾವವನ್ನು ಬೀರಿವೆ. ಹಿಂದೆ ಪಲ್ಲವ ಹಾಗೂ ಚೋಳ ರಾಜವಂಶಗಳು ಇಂದಿನ ಕರ್ನಾಟಕದ ಕೆಲವು ಭಾಗಗಳನ್ನು ಅಳಿದರು. ಅದೇ ರೀತಿ ಗಂಗರು, ಚಾಲುಕ್ಯರು, ಹೊಯ್ಸಳರು ಹಾಗೂ ವಿಜಯನಗರದ ಅರಸರು ತಮಿಳುನಾಡಿನ ಬಹು ಭಾಗಗಳ ಮೇಲೆ ಆಳ್ವಿಕೆ ನಡೆಸಿದರು. ‘ಕರ್ನಾಟಕʼ ಎಂಬ ಪದವೇ ತಮಿಳರ ಕೊಡುಗೆಯೆಂದು ತೋರುತ್ತದೆ, ಏಕೆಂದರೆ ‘ಶಿಲಪ್ಪದಿಕಾರಂ’ನಂತಹ ತಮಿಳು ಕೃತಿಗಳಲ್ಲಿ, ಅದನ್ನು ಕರುನಾಟ್ ಎಂದು ಕರೆಯಲಾಗಿದೆ. ಈ ಎರಡೂ ಭಾಷೆಗಳು ಎಷ್ಟು ಹತ್ತಿರವಾಗಿವೆಯೆಂದರೆ, ಪ್ರಾರಂಭಿಕ ಕನ್ನಡದ ಕೆಲವು ಮಾತಿನ ಜೋಡಣೆಗಳನ್ನು ತಮಿಳಿನಲ್ಲೂ ಕಾಣಬಹುದು. ಇಂದಿನ ಕರ್ನಾಟಕದಲ್ಲಿ ಹಲವಾರು ತಮಿಳು ಶಾಸನಗಳು ದೊರೆತಿವೆ ಹಾಗೆಯೇ ಹಲವಾರು ಕನ್ನಡ ಶಾಸನಗಳು ಇಂದಿನ ತಮಿಳುನಾಡಿನಲ್ಲಿ ಸಿಕ್ಕಿವೆ. ಮಿಗಿಲಾಗಿ ಅಲ್ಪ ಬದಲಾವಣೆಗಳಿರುವ ಅನೇಕ ತಮಿಳು ಪದಗಳು ಕನ್ನಡದಲ್ಲಿವೆ.

ಪ್ರಾರಂಭಿಕ ಕನ್ನಡ ಕವಿಯಾದ ಪಂಪನಿಗೆ ತಮಿಳು ಚೆನ್ನಾಗಿ ತಿಳಿದಿತ್ತೆಂದು ಊಹಿಸಲಾಗಿದೆ. ಪಂಪನ ‘ವಿಕ್ರಮಾರ್ಜುನ ವಿಜಯʼದಲ್ಲಿ ನಿರೂಪಿತವಾಗಿರುವ, ಕರ್ಣನು ದುರ್ಯೋಧನನ ಮಡದಿಯನ್ನು ಪಗಡೆಯಾಟದಲ್ಲಿ ಸೋಲಿಸಿ, ಆಕೆಯ ಕಂಠೀಹಾರವನ್ನು ಪಣವಾಗಿ ಕಿತ್ತುಕೊಂಡ ಪ್ರಸಂಗಕ್ಕೆ ತಮಿಳು ಮೂಲವಿದೆ. ಹರಿಹರನ ರಗಳೆಗಳು, ತಮಿಳು ಮೂಲದ ಅವಗಳ್‌ನ ಅಳವಡಿಕೆ ಇರಬಹುದು. ರಾಮಾನುಜರ ಕಾಲದಲ್ಲಿ ಕನ್ನಡ ಮಾತನಾಡುವ ಪ್ರದೇಶಗಳಲ್ಲಿ ಆಶ್ರಯ ಪಡೆದು, ಅವರು ಪ್ರತಿಪಾದಿಸಿದ ಶ್ರೀವೈಷ್ಣವ ಧರ್ಮವು ಕರ್ನಾಟಕದಲ್ಲಿ ಪ್ರಭಾವ ಬೀರಿತು. ತೊಂಡನೂರು ಹಾಗೂ ಮೇಲುಕೋಟೆಗಳಂತಹ ಪ್ರಾಚೀನ ಅಗ್ರಹಾರಗಳಲ್ಲಿ ಅನೇಕ ತಮಿಳು ಬ್ರಾಹ್ಮಣ ರು ನೆಲೆಸಿದರು.  ಈ ಧರ್ಮ ಹಾಗೂ ಅದರ ತಮಿಳು ಸಾಹಿತ್ಯವು ಕನ್ನಡ ಸಾಹಿತ್ಯದ ಮೇಲೆ ಪ್ರಭಾವ ಬೀರಿತು. ಹರಿದಾಸ ಸಾಹಿತ್ಯದ ಹರಿಕಾರರಾದ ಶ್ರೀಪಾದರಾಯರು, ತಮಿಳಿನ ಭಕ್ತಿ ಗೀತೆಗಳಿಂದ ಪ್ರಭಾವಿತರಾದರು. ತಮ್ಮ ಭಾಷೆಯ ಬಗೆಗೆ ಇದ್ದ ತಮಿಳು ಕವಿಗಳ ಒಲವು, ಅಪ್ಪಟ ತಮಿಳು ಅಭಿವ್ಯಕ್ತತೆಗಳಿಗೆ ಅವರಲ್ಲಿದ್ದ ಉತ್ಸಾಹ, ಸಂಸ್ಕೃತದಿಂದ ಎರವಲು ಪಡೆಯದೆ ತಮಿಳು ನುಡಿಗಟ್ಟನ್ನು ಉಳಿಸಿಕೊಳ್ಳುವ ಅವರ ಪ್ರಜ್ಞಾಪೂರ್ವಕ ಯತ್ನಗಳು ಕನ್ನಡ ಕವಿ ಹಾಗೂ ಲೇಖಕರ ಮೇಲೆ ಪ್ರಭಾವ ಬೀರಿದವು. ಚಿಕ್ಕುಪಾಧ್ಯಾಯ, ಸಿಂಗಾರರ್ಯ, ತಿರುಮಲಾರ್ಯ, ಸಂಚಿಯ ಹೊನ್ನಮ್ಮ ರಂತಹ ಶ್ರೀವೈಷ್ಣವ ಕನ್ನಡ ಕವಿಗಳ ಬರವಣಿಗೆಗಳಲ್ಲಿ ಈ ಧೋರಣೆಯು ಸ್ಪಷ್ಟವಾಗಿ ಅಭಿವ್ಯಕ್ತವಾಗಿದೆ.  ಅವರೆಲ್ಲರೂ ಸಂಸ್ಕೃತದಲ್ಲಿ ಪರಿಣತರಾಗಿದ್ದರೂ, ಅಪ್ಪಟ ಕನ್ನಡ ಬಳಕೆಯನ್ನು ಮಾಡಿದ್ದಾರೆ. ಈ ಧೋರಣೆಯು ಬಿ.ಎಂ.ಶ್ರೀಕಂಠಯ್ಯನವರ ಬರವಣಿಗೆಗಳಲ್ಲೂ ಸ್ಪಷ್ಟವಾಗಿ ವ್ಯಕ್ತವಾಗಿದೆ. ಅವರ ಘೋಷಣೆಗಳಾದ ‘ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ’, ಏಳ್ ತಾಯ್,  ಬಾಳ್  ಕನ್ನಡ ತಾಯ್, ಮುಂತಾದ ಉದ್ಘೋಷಗಳು ಅಪ್ಪಟ ಕನ್ನಡತ್ತ ಅವರಿಗಿದ್ದ ಉತ್ಸಾಹವನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತದೆ. ಅವರಿಗೆ ಈ ವಿಷಯದಲ್ಲಿ ತಮಿಳು ಸಾಹಿತ್ಯದ ಪ್ರಭಾವವಾಯಿತು.

ತಮಿಳಿನ ಮೇಲೆ ಕನ್ನಡವು ಬೀರಿದ ಪ್ರಭಾವವೂ ಗಣನೀಯವಾದುದು.  ಕರ್ನಾಟಕದ ಅನೇಕ ಧಾರ್ಮಿಕ ಚಳವಳಿಗಳಾದ ಜೈನ ಧರ್ಮ ಹಾಗೂ ಗಣಪತಿ ಆರಾಧನೆಯು, ಬಹುಶಃ ಕರ್ನಾಟಕದಿಂದ ತಮಿಳುನಾಡಿಗೆ ಸಾಗಿತೆಂದು ತೋರುತ್ತದೆ. ಶ್ರವಣಬೆಳಗೊಳದ ಜೈನ ಸಾಧುಗಳು ತಮಿಳುನಾಡಿನಲ್ಲಿ ಸಕ್ರಿಯವಾಗಿರುವ ವಿಷಯವನ್ನು ತಮಿಳು ಶಾಸನಗಳು ಹೇಳುತ್ತವೆ. ಮುತ್ತುಸ್ವಾಮಿ ದೀಕ್ಷಿತರು ಗಣೇಶನನ್ನು ಹೊಗಳಿ ಹಾಡಿರುವ ‘ವಾತಾಪಿ ಗಣಪತಿ’ ಶ್ಲೋಕವು ಕರ್ನಾಟಕದ ಮೂಲಕ ತಮಿಳುನಾಡಿಗೆ ಆಗಮಿಸಿದ ಗಣಪತಿ ಆರಾಧನೆಯನ್ನು ಸೂಚಿಸುತ್ತದೆ. ಚಾಮರಸರ ಪ್ರಭುಲಿಂಗಲೀಲೆ, ಬಸವೇಶ್ವರ, ಅಕ್ಕಮಹಾದೇವಿ ಹಾಗೂ ಸರ್ವಜ್ಞರ ವಚನಗಳನ್ನು ತಮಿಳಿಗೆ ಅನುವಾದ ಮಾಡಲಾಗಿದೆ. ತಮಿಳಿನ ಶ್ರೇಷ್ಠ ಕೃತಿಗಳಾದ ತಿರುಕ್ಕುರಳ್ ಹಾಗೂ ಪೆರಿಯಪುರಾಣಂಗಳನ್ನು ಕನ್ನಡಕ್ಕೆ ಅನುವಾದ ಮಾಡಲಾಗಿದೆ. 

ಮಲಯಾಳಂ

 ಕೇರಳ ಹಾಗೂ ಕರ್ನಾಟಕಗಳ ನಡುವಣ ಸಾಂಸ್ಕೃತಿಕ ಒಗ್ಗಟ್ಟಿನ ಕುರುಹುಗಳು, ಕರಾವಳಿ ಪ್ರದೇಶದಲ್ಲಿ ಸೃಷ್ಟಿಯಾದ ಪರಶುರಾಮನ ಕಥೆಯಂತಹ ಪುರಾಣ ಕಥೆಗಳಿಂದ ತಿಳಿದು ಬರುತ್ತದೆ. ಈ ಎರಡು ಸಂಸ್ಕೃತಿಗಳೂ ಸಾಮಾನ್ಯ ದ್ರಾವಿಡ ಮೂಲವೊಂದರಿಂದ ಮೂಡಿರಬಹುದು, ಪ್ರಾರಂಭಿಕ ಯುಗದಲ್ಲಿ ವ್ಯಾಪಾರ ಹಾಗೂ ವಾಣಿಜ್ಯ ಚಟುವಟಿಕೆಗಳ ಕೇಂದ್ರವಾಗಿ ಮೂಡಿದ ಪಶ್ಚಿಮ ಕರಾವಳಿಯ ಇಡೀ ಭೂಭಾಗದ ಮೇಲೆ ಉಂಟಾದ ಬಹುಪಾಲು ಒಂದೇ ರೀತಿಯ ವಿದೇಶೀ ಪ್ರಭಾವಗಳಿಗೆ, ಇವೆರಡೂ ಸಂಸ್ಕೃತಿಗಳು ಒಳಗಾಗಿರಬಹುದು.

ಜಗದ್ಗುರು ಶ್ರೀ ಶಂಕರಾಚಾರ್ಯರನ್ನು ಕೇರಳ ಸಂಸ್ಕೃತಿಗೆ ಮೀಸಲಾದ ಪ್ರತಿನಿಧಿಯೆಂದು ಪರಿಗಣಿಸಲು ಸಾಧ್ಯವಿಲ್ಲ, ಏಕೆಂದರೆ ಅವರು ಸಾಮಾನ್ಯ ಹಿಂದೂ ಜಾಗೃತಿಯನ್ನು ಪ್ರತಿಪಾದಿಸಿದರು.  ಅವರು ತಮ್ಮ ಪೀಠಗಳಲ್ಲಿ ಒಂದನ್ನು ಕರ್ನಾಟಕದ ಶೃಂಗೇರಿಯಲ್ಲಿ ಸ್ಥಾಪಿಸಿದರು. ಕುಂದಾಪುರದ ಬಳಿ ಇರುವ ಸುಪ್ರಸಿದ್ಧ ಮೂಕಾಂಬಿಕಾ ದೇವಾಲಯದ ಪ್ರಸ್ತುತ ಪ್ರತಿಮೆಯ ಪ್ರತಿಷ್ಠಾಪನೆಯನ್ನು ಅವರು ಮಾಡಿದರೆಂದು ಹೇಳಲಾಗುತ್ತದೆ. ಅನೇಕ ತುಳು ಬ್ರಾಹ್ಮಣ ರು ಕೇರಳಕ್ಕೆ ವಲಸೆ ಹೋಗಿದ್ದಾರೆ. ಇದರ ಇತ್ತೀಚಿನ ನಂಟೆಂದರೆ, ಕೇರಳದಲ್ಲಿ ತನ್ನ ಮುಖ್ಯ ಆಲಯವನ್ನು ಹೊಂದಿರುವ ಸ್ವಾಮಿ ಅಯ್ಯಪ್ಪನ ಪ್ರಭಾವ.ಪ್ರತಿ ವರ್ಷವೂ ಕನ್ನಡಿಗರು ತಂಡೋಪ ತಂಡವಾಗಿ ಅಲ್ಲಿಗೆ ಭೇಟಿ ನೀಡುತ್ತಾರೆ ಅಲ್ಲದೆ ಈ ದೇವರಿಗೆ ಮುಡಿಪಾದ ಅನೇಕ ದೇವಾಲಯಗಳನ್ನು ಕರ್ನಾಟಕದಲ್ಲೂ ನಿರ್ಮಿಸಲಾಗಿದೆ.

ಭಾಷಾ ವೈಶಿಷ್ಟ್ಯಗಳಿಗೆ ಬಂದಾಗ, ಕನ್ನಡ ಹಾಗೂ ಮಲಯಾಳಂ ಭಾಷೆಗಳೆರಡೂ ಒಂದೇ ದ್ರಾವಿಡ ಮೂಲದಿಂದ ಬಂದಂತಹವುಗಳಾಗಿವೆ ಎಂದು ಹೇಳಬಹುದು. ಆಶ್ಚರ್ಯಕರವಾದ ರೀತಿಯಲ್ಲಿ ಹಳೆಗನ್ನಡವು ಮಲಯಾಳಂ ಭಾಷೆಯನ್ನು ಹೋಲುತ್ತದೆ. ಅಕ್ಷರ, ಮೂಲ ಪದಸಂಗ್ರಹ ಹಾಗೂ ಸಾಮಾನ್ಯ ರಚನೆಗಳಲ್ಲಿ ಈ ಭಾಷೆಗಳು ಬಹುತೇಕ ಮಟ್ಟಿಗೆ ಒಂದೇ ರೀತಿಯಿವೆ. ಎರಡೂ ಭಾಷೆಗಳ ಮೇಲೆ ಸಂಸ್ಕೃತವು ಅಪಾರವಾದ ಪ್ರಭಾವವನ್ನು ಬೀರಿದ್ದು ಕವಿಗಳಾದ ಕಾಳಿದಾಸ, ಭಾಸ, ಮುಂತಾದವರ ಮಹಾನ್ ಸಂಸ್ಕೃತ ಕೃತಿಗಳ ಪ್ರಭಾವವು ಕನ್ನಡ ಹಾಗೂ ಮಲಯಾಳಂ ಮೇಲೆ ಒಂದೇ ರೀತಿಯದಾಗಿದೆ.

ಪಶ್ಚಿಮ ಕರಾವಳಿಯಲ್ಲಿ ನಡೆದ ಧರ್ಮಪ್ರಚಾರಕ ಚಟುವಟಿಕೆಗಳ ಕಾಲದಲ್ಲಿ, ಕರ್ನಾಟಕ ಹಾಗೂ ಕೇರಳ ನಡುವಣ ಪುರಾತನ ಸಂಪರ್ಕವು ಹೊಸ ಆಯಾಮಕ್ಕೆ ಕಾಲಿರಿಸಿತು. ಸಾಹಿತ್ಯ ಅಕಾಡೆಮಿಯಿಂದ ದೊರೆತ ಆಶ್ರಯದಿಂದ, ಮಲಯಾಳಂ ಮೂಲದ ಕೃತಿಗಳಾದ ಚೆಮ್ಮೀನ್, ಯಕ್ಷಿ, ಇತ್ಯಾದಿಗಳು ಕನ್ನಡಕ್ಕೆ ಅನುವಾದಗೊಂಡಿವೆ. ಕೇರಳೀಯ ಜೀವನದ ಕೆಲವು ವ್ಯವಸ್ಥೆ ಹಾಗೂ ವೈಶಿಷ್ಟತೆಗಳಿಂದ ಪ್ರೇರಣೆಯನ್ನು ಪಡೆದ ಕನ್ನಡದ ಬರಹಗಾರರು ಅಪರೂಪವೆನಿಸಿದರೂ, ಕೆಲವು ಉದಾಹರಣೆಗಳಿವೆ; ಇದೇ ರೀತಿಯ ಉದಾಹರಣೆಗಳನ್ನು ಮಲಯಾಳಿ ಸಾಹಿತಿಗಳಲ್ಲೂ ನೋಡಬಹುದು. ನಿರಂಜನರು ಬರೆದ ಚಿರಸ್ಮರಣೆ ಎಂಬ ಚಿರಪರಿಚಿತ ಪ್ರಗತಿಪರ ಕಾದಂಬರಿಯು, ಕೇರಳದ ಗ್ರಾಮವಾದ ಕಯ್ಯಾರದಲ್ಲಿ ನಡೆದ ಪ್ರಸಂಗವೊಂದರ ಸುತ್ತ ಹೆಣೆಯಲ್ಪಟ್ಟಿದ್ದು ಅದರ ಮಲಯಾಳಿ ಅವತರಣಿಕೆಯು ಅಭೂತಪೂರ್ವ ಮೆಚ್ಚುಗೆಯನ್ನೂ ಪಡೆದಿದೆ. ಕೇರಳದ ಅತ್ಯುತ್ತಮ ಆಧುನಿಕ ಕವಿಯಾದ ಡಾ.ಅಯ್ಯಪ್ಪ ಫಣಿಕ್ಕರ್‌ರವರ ಇತ್ತೀಚಿನ ಕವನದ ಶೀರ್ಷಿಕೆಯು ಚಾಮುಂಡಿಮಲೆಯಿಲೆ ತಿರುವಿಳೆಯಾಟ್ಟಮ್ ಎಂದಿದೆ. ತಿರುವನಂತಪುರಂನ ಕರ್ನಾಟಕ ಸಂಘವು, ಮಲಯಾಳಂ ಸಾಹಿತ್ಯದ ಪ್ರಾತಿನಿಧಿಕ ಕೃತಿಗಳ ಸಂಗ್ರಹದ ಕನ್ನಡ ಅನುವಾದವನ್ನು ಮಂದಾರ ಮಲ್ಲಿಗೆ ಎಂಬ ಸಂಪುಟದಲ್ಲಿ ಪ್ರಕಟಿಸಿದೆ. ಇತ್ತೀಚೆಗೆ, ನೂತನ ಬರಹಗಾರರ ಗುಂಪೊಂದು ಕಿರು ಕಥೆ, ಕಾದಂಬರಿ, ಏಕವಿಷಯಕ ಪ್ರಬಂಧ, ಮುಂತಾದವುಗಳ ಅನುವಾದವನ್ನು ಹೊರತರುವ ಮೂಲಕ, ಈ ಎರಡೂ ಭಾಷೆ ಹಾಗೂ ಸಂಸ್ಕೃತಿಗಳ ನಡುವೆ ನಿಕಟ ಸಂಪರ್ಕವನ್ನು ಬೆಸೆದಿದೆ. ಅವರ ಪೈಕಿ ಪ್ರಮುಖರೆಂದರೆ ಕೆ.ಟಿ. ಶ್ರೀಧರ್ (ಮಂಜು), ಪಿ.ವಿ. ಪುಣಿಂಚಿತ್ತಾಯ (ನನ್ನಜ್ಜನಿಗೊಂದಾನೆಯಿತ್ತು), ಶ್ರೀಕೃಷ್ಣ ಭಟ್ ಅರ್ಥಿಕಜೆ (ಅಯ್ಯಪ್ಪನ್), ಕೆ.ಕೆ.ನಾಯರ್, ಸಿ.ರಾಘವನ್, ಎಂ.ಎಸ್. ಲಕ್ಷ್ಮಣಾಚಾರ್, ಎನ್.ಎಸ್. ಶಾರದಾ ಪ್ರಸಾದ, ಪಿ.ಜಿ. ಕಾಮತ್, ಸಾರಾ ಅಬ್ಬೂಬಕರ್ ಹಾಗೂ ವೇಣುಗೋಪಾಲ ಕಾಸರಗೋಡು. ತಿರುವನಂತಪುರದ ಕರ್ನಾಟಕ ಸಂಘವು, ಸಂಗೀತದ ಸ್ವರ ಹಾಗೂ ವಿವರಣೆಗಳನ್ನು ಹೊತ್ತ ಪುರಂದರದಾಸರ ಕೀರ್ತನಾವಳಿ ಎಂಬ ಮಲಯಾಳಿ ಅನುವಾದದ ಮುದ್ರಣವನ್ನು ಹೊರತಂದಿದೆ.

 

ಮರಾಠಿ

ಶತಮಾನಗಳಿಂದ ಮರಾಠಿ ಹಾಗೂ ಕನ್ನಡ ಭಾಷೆಗಳು ಪರಸ್ಪರ ಅತ್ಯಂತ ನಿಕಟವಾಗಿವೆ. ಈ ನಂಟಿಗೆ ಕಾರಣವಾದದ್ದು ಭೌಗೋಳಿಕ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಧಾರ್ಮಿಕ ಚರಿತ್ರೆಯ ನಂಟುಗಳು. ಈ ಭಾಷೆಗಳ ಬಳಕೆಯಲ್ಲಿ ಪರಸ್ಪರ ಪ್ರಭಾವ ಹಾಗೂ ವಿನಿಮಯಗಳನ್ನು ಕಾಣಬಹುದು. ಜೈನ ಮಹಾರಾಷ್ಟ್ರ ಎಂದು ಜನಪ್ರಿಯವಾದ ಮಹಾರಾಷ್ಟ್ರ ಪ್ರಾಕೃತದ ಮೂಲಕ ಮರಾಠಿ ಭಾಷೆಯು ಪರಿಷ್ಕರಣಗೊಂಡಿತು. ಕರ್ನಾಟಕದಲ್ಲಿ ಮಾತನಾಡುವ ಮರಾಠಿ ಭಾಷೆಯ ಭಾಷಾ ವೈಚಿತ್ರ್ಯಗಳು ಗಮನಾರ್ಹವಾಗಿದ್ದು ಕನ್ನಡ ಪದ ಹಾಗೂ ನುಡಿಗಟ್ಟುಗಳ ಬಳಕೆಯು ಪ್ರಚಲಿತವಾಗಿದೆ. ಮೂಲ ಮರಾಠಿಯಲ್ಲಿರುವ ಕೆಲವು ವೈಚಿತ್ರ್ಯದಂತ-ಅಂಗುಳಿನ  ಉಚ್ಛಾರಣೆಯನ್ನು ಕರ್ನಾಟಕದಲ್ಲಿ ಮಾತನಾಡುವ ಮರಾಠಿಯಲ್ಲೂ ಉಳಿಸಿಕೊಳ್ಳಲಾಗಿದೆ. ಇದೇ ರೀತಿ ಮರಾಠಿಯ ಯಾವುದೇ ಅಂಕಿತನಾಮದ ನಂತರ ಬಳಸುವ ಅವರು ಎಂಬ ಕನ್ನಡ ಪದದ ಪ್ರಭಾವವು ಗಮನಾರ್ಹವಾದುದು.

ಬಿಜಾಪುರದ ಸುಲ್ತಾನರು, ಮೈಸೂರಿನ ಹೈದರ್ ಹಾಗೂ ಟಿಪ್ಪು ಹಾಗೂ ಕರ್ನಾಟಕದ ಜಮಖಂಡಿಯಂತಹ ಅನೇಕ ಸಣ್ಣ ಜಾಗೀರುಗಳಲ್ಲಿ, ಮರಾಠಿ ಭಾಷೆ ಹಾಗೂ ಮೋಡಿ ಲಿಪಿಗೆ ಪ್ರಾಧಾನ್ಯತೆಯನ್ನು ನೀಡಲಾಗಿತ್ತು. ಕರ್ನಾಟಕದಲ್ಲಿ ಮೂಡಿಬಂದ ಮರಾಠಿಯ ಪ್ರಮುಖ ಸಾಹಿತ್ಯವು ಕ್ರಿ.ಶ. ೧೭ನೆಯ ಶತಮಾನಕ್ಕೆ ಸೇರಿದೆ. ಗೋಕಾಕ್ ಬಳಿಯ ಮೂಡಲಗಿ ಎಂಬ ಸ್ಥಳದಲ್ಲಿ, ಪ್ರಥಮ ಮರಾಠಿ ಕವಿಯಾದ ಮುಕುಂದರಾಜನ ಶೈಲಿಗೆ ಸೇರಿದ ಸ್ವಾಮಿಗಳ ಸಂಪ್ರದಾಯವನ್ನು ಹೊಂದಿದೆ. ಮೂರನೆಯ ಕೃಷ್ಣರಾಜ ಒಡೆಯರು ಮರಾಠಿ ಭಾಷೆಯ ಆಶ್ರಯದಾತರಾಗಿದ್ದು, ಚದುರಂಗದಾಟದ ಬಗೆಗಿನ ಪುಸ್ತಕವಾದ ‘ಸಂಖ್ಯಾ ರತ್ನಕೋಶ’ವನ್ನೂ ಅವರು ಬರೆದರು. ಬ್ರಿಟಿಷರ ಆಳ್ವಿಕೆಯು ಪ್ರಾರಂಭವಾದ ನಂತರ, ಕರ್ನಾಟಕ ಹಾಗೂ ಮಹಾರಾಷ್ಟ್ರಗಳ ನಡುವೆ ರಾಜಕೀಯ, ಶಿಕ್ಷಣ, ಸಾಹಿತ್ಯ ಹಾಗೂ ಇತರ ಕುಶಲ ಕಲೆಗಳಲ್ಲಿ ಸಂಪರ್ಕಗಳು ಬೆಳೆದು ಕರ್ನಾಟಕದಲ್ಲಿ ಮರಾಠಿಯು ಪ್ರಮುಖ ಪಾತ್ರವನ್ನು ವಹಿಸಿತು. ಮರಾಠಿ ರಂಗಭೂಮಿಯು ಅತ್ಯಂತ ಜನಪ್ರಿಯವಾಗಿದ್ದು, ಬಾಲಗಂಧರ್ವರಂತಹ ರಂಗಭೂಮಿನಟರು ಕರ್ನಾಟಕದಲ್ಲಿ ಹೆಸರುವಾಸಿಯಾದರು.

ಹರಿ ನಾರಾಯಣ ಆಪ್ಟೆಯವರ ಚಾರಿತ್ರಿಕ ಕಾದಂಬರಿಗಳನ್ನು ಗಳಗನಾಥರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.  ಸಾಣೆ ಗುರೂಜಿ, ಫಡ್ಕೆ, ಖಾಂಡೇಕರ್, ಸಾವರ್ಕರ್ ಹಾಗೂ ರಂಜಿತ್ ದೇಸಾಯಿಯರ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಲಾಗಿದೆ. ಅನೇಕ ಆಧುನಿಕ ಮರಾಠಿ ನಾಟಕಗಳನ್ನು ಕನ್ನಡಕ್ಕೆ ಹಾಗೂ ಕನ್ನಡದ ನಾಟಕಗಳನ್ನು ಮರಾಠಿಗೆ ಅನುವಾದ ಮಾಡಲಾಗಿದ್ದು, ಕನ್ನಡ ನಾಟಕಗಳಿಗೆ ಮಹಾರಾಷ್ಟ್ರದಲ್ಲಿ ಮನ್ನಣೆ ಹಾಗೂ ಮೆಚ್ಚುಗೆ ದೊರೆತಿವೆ. ದ.ರಾ.ಬೇಂದ್ರೆಯವರ ನಾಕುತಂತಿ, ವಚನ ಬಸವೇಶ್ವರ, ವಚನೋದಯ, ಕೈಲಾಸಂರ ಟೊಳ್ಳುಗಟ್ಟಿ, ಎಸ್.ಎಲ್. ಭೈರಪ್ಪನವರ ಕಾದಂಬರಿಗಳು, ಕಾರ್ನಾಡರ ಹಯವದನ ಹಾಗೂ ತುಘಲಕ್, ಇತ್ಯಾದಿ ಸಾಹಿತ್ಯ ಮರಾಠಿಗೆ ಅನುವಾದಗೊಂಡಿದ್ದು, ಬಹಳ ಜನಪ್ರಿಯವಾಗಿವೆ. ಕರ್ನಾಟಕದ ಅನೇಕ ಮರಾಠಿ ಬರಹಗಾರರು ಖ್ಯಾತಿ ಗಳಿಸಿದ್ದಾರೆ. ಅವರ ಪೈಕಿ ಹೆಸರಾದವರೆಂದರೆ ಗೋವಿಂದ ಕೇಲ್ಕರ್, ನಾರಾಯಣ ಅತಿವಾಡ್ಕರ್, ಮನೋಹರ ಬನ್ನೇ  ಜಿ.ಜಿ. ರಾಜಾಧ್ಯಕ್ಷ, ಎನ್.ಆರ್.ಕಿಲ್ಲೇದಾರ್, ಜಿ.ಎ. ಕುಲಕರ್ಣಿ, ಮುಂತಾದವರು.

ಕಾದಂಬರಿಕಾರರಾದ ಪ್ರೊ.ನಿಕುಂಬ, ಇಂದಿರಾ ಸಂತ್ ಹಾಗೂ ರಂಜಿತ್ ದೇಸಾಯಿ, ಪ್ರೊ. ಅರವಿಂದ ಯಾಲಗಿ, ಮಾಧವಿ ದೇಸಾಯಿ ಹಾಗೂ ಪ್ರಿಯಾ ಪ್ರಭು - ಇವರು ಬೆಳಗಾವಿ ಜಿಲ್ಲೆಯ ಹೆಸರಾಂತ ಲೇಖಕರಾಗಿದ್ದಾರೆ. ಗದಗ್ ನ ಜಿ.ಡಿ. ಖರೆ ಅವರ ‘ಗೀತಾ ಮರ್ಮ ದರ್ಶನ್’ ಕೃತಿಗೆ ಪ್ರಶಸ್ತಿಯು ಸಂದಿದೆ. ಧಾರವಾಡದ ಪ್ರೊ.ಜಿ.ಎ. ಕುಲಕರ್ಣಿಯವರು ಹೆಸರಾಂತ ಕಿರು ಕಥೆಗಳ ಬರಹಗಾರರಾಗಿದ್ದರು.  ಐನಾಪುರದ ಡಾ.ಎ.ಆರ್.ತೋರೋ ಅವರು ಮರಾಠಿಯಿಂದ ಕನ್ನಡಕ್ಕೆ ಹಾಗೂ ಕನ್ನಡದಿಂದ ಮರಾಠಿಗೆ ಅನೇಕ ಕೃತಿಗಳನ್ನು ಅನುವಾದಿಸಿದ್ದು, ಇವರ ಮರಾಠಿ ಕೃತಿಗೆ ಜ್ಞಾನಪೀಠ ಪ್ರಶಸ್ತಿಯೂ ಸಂದಿದೆ. ಹುಬ್ಬಳ್ಳಿಯ ಆರ್.ಜಿ. ಕಲಂಗಡೆಯವರು, ಸಾಯಣಾಚಾರ್ಯರನ್ನು ಕುರಿತ ಕೃತಿಯೂ ಸೇರಿದಂತೆ, ಅನೇಕ ಧಾರ್ಮಿಕ ಕೃತಿಗಳನ್ನು ರಚಿಸಿದ್ದಾರೆ. ಧಾರವಾಡದಿಂದ ಬಂದ ಲೇಖಕರ ಪೈಕಿ, ಪ್ರೊ.ಬಿ.ಆರ್.ಮೋಡಕ್, ವಿದ್ಯಾ ಸಪ್ರೆ (ಕಾದಂಬರಿಗಾರ್ತಿ), ಹಾಗೂ ಬಾಬೂರಾವ್ ಗಾಯಕ್‌ವಾಡ್ ಪ್ರಮುಖರು. ಎಸ್.ಎಸ್. ಗೋಖಲೆಯವರು ಖಗೋಳಶಾಸ್ತ್ರದ ಬಗ್ಗೆ ‘ಆಕಾಶಸಿ ಜಡಾವು ನಾಟೆ’ ಎಂಬ ಅನನ್ಯ ಕೃತಿಯನ್ನು ಬರೆದಿದ್ದಾರೆ. ಕಲಬುರಗಿಯ ದೇವಳಗಾಂವ್‌ಕರ್ ಹಾಗೂ ಜಿ.ಪಿ.ಜೋಶಿಯವರೂ ಮರಾಠಿಯಲ್ಲಿ ಬರೆದರು. ಅವರ ‘ಕೃಷ್ಣ-ಗೋದಾವರಿ ಪರಿಸರ  ಎಂಬ ಕೃತಿಯು ಸಾಂಸ್ಕೃತಿಕ ಇತಿಹಾಸವನ್ನು ಕುರಿತದ್ದಾಗಿದೆ. 

 

(*ಮಾಹಿತಿ ಮೂಲ: ಕರ್ನಾಟಕ ಮಿನುಗುನೋಟ-2013, ಕರ್ನಾಟಕ ರಾಜ್ಯ ಗೆಜೆಟಿಯರ್‌ ಇಲಾಖೆ ವಿಶೇಷ ಪ್ರಕಟಣೆಗಳು)

ಇತ್ತೀಚಿನ ನವೀಕರಣ​ : 07-09-2021 09:41 PM ಅನುಮೋದಕರು: Admin




ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
  • ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ.

  • ಸ್ಥಿರಚಿತ್ರಣ : 1280x800 to 1920x1080

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ |ಕನ್ನಡ ಮತ್ತು ಸಂಸ್ಕೃತಿ ಇಲಾಖೆ| ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ

ಸಹಾಯ, ಸಲಹೆಗಳು ಮತ್ತು ದೂರುಗಳಿಗೆ ಸಂಪರ್ಕಿಸಿ: ಯೋಜನಾ ನಿರ್ದೇಶಕರು, ಜಾಲತಾಣ ವಿಭಾಗ, ಇ-ಆಡಳಿತ ಕೇಂದ್ರ, ಶಾಂತಿನಗರ, ಬೆಂಗಳೂರು ದೂರವಾಣಿ : 080-22230060 | ಇ-ಮೇಲ್ : pd.webportal@karnataka.gov.in

ವಿನ್ಯಾಸ , ಅಭಿವೃದ್ಧಿ ಮತ್ತು ಹೋಸ್ಟಿಂಗ್: cegಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ
  • Meity_logo
  • digital
  • data
  • India
  • pm
  • gigw
  • wcag
  • ssl
  • w3c
  • kp_kn